ಕೇರಳದಲ್ಲಿ ಆತಂಕ ಸೃಷ್ಟಿಸಿದ ಹೊಸ ವೈರಸ್: ಏನಿದು ಶಿಗೆಲ್ಲೋಸಿಸ್ ಸೋಂಕು?

Untitled design 2026 06 10T172647.175

ತಿರುವನಂತಪುರಂ, ಜೂನ್ 10: ಕೇರಳದಲ್ಲಿ ಶಿಗೆಲ್ಲೋಸಿಸ್ (Shigellosis) ಎಂಬ ಅತಿಸಾರ ಸಂಬಂಧಿತ ಬ್ಯಾಕ್ಟೀರಿಯಾ ಸೋಂಕು ವೇಗವಾಗಿ ಹರಡುತ್ತಿದೆ. ಈ ಸೋಂಕು ಆರೋಗ್ಯ ಇಲಾಖೆಯ ನಿದ್ದೆಗೆಡುವಂತೆ ಮಾಡಿದೆ. ಶಿಗೆಲ್ಲಾ (Shigella) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಈ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು, ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಹರಡಬಹುದಾಗಿದೆ. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಕೇರಳದಲ್ಲಿ ಎಷ್ಟು ಪ್ರಕರಣಗಳು ದೃಢಪಟ್ಟಿವೆ?

ದಿ ಹಿಂದೂ ವರದಿ ಮಾಡಿರುವ ಪ್ರಕಾರ, ಕೇರಳದಲ್ಲಿ ಜೂನ್ 7ರ ವರೆಗೆ 85 ಶಿಗೆಲ್ಲೋಸಿಸ್ ಪ್ರಕರಣಗಳು ದೃಢಪಟ್ಟಿದ್ದು, 70ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ದಾಖಲಾಗಿವೆ. ವಯನಾಡು, ಕೋಝಿಕ್ಕೋಡ್, ಅಲಪ್ಪುಝಾ, ಮಲಪ್ಪುರಂ ಜಿಲ್ಲೆಗಳಲ್ಲಿ ಸೋಂಕು ಹೆಚ್ಚು ಕಂಡುಬರುತ್ತಿದೆ. ವಯನಾಡಿನ ಮಾರ್ ಬಾಸೆಲಿಯೋಸ್ ಶಾಲೆಯಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೂ ಕೆಲವರಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

ಐದು ವರ್ಷದೊಳಗಿನ ಮಕ್ಕಳಿಗೆ ಹೆಚ್ಚಿನ ಅಪಾಯ

ಆರೋಗ್ಯಕರ ವಯಸ್ಕರಲ್ಲಿ ಈ ಸೋಂಕು ಸಾಮಾನ್ಯವಾಗಿ ಸ್ವಯಂ ನಿಯಂತ್ರಿತವಾಗಿದ್ದರೂ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿಯಾಗಬಹುದು. ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೂ ಹೆಚ್ಚಿನ ಅಪಾಯವಿದೆ. ಈ ವರ್ಷ ಈಗಾಗಲೇ ಇಬ್ಬರು ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಿಗೆಲ್ಲೋಸಿಸ್ ಲಕ್ಷಣಗಳು ಯಾವುವು?

ಸೋಂಕು ತಗುಲಿದ ಒಂದು ಅಥವಾ ಎರಡು ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.  ಜ್ವರ, ಅತಿಸಾರ, ವಾಂತಿ,   ವಾಕರಿಕೆ, ಮಲದಲ್ಲಿ ರಕ್ತ, ಹೊಟ್ಟೆನೋವು, ಪದೇ ಪದೇ ಶೌಚಕ್ಕೆ ಹೋಗಬೇಕು ಎನಿಸುವುದು ಮುಖ್ಯ ಲಕ್ಷಣಗಳಾಗಿವೆ. 

 ವೆಸ್ಟ್ ನೈಲ್ ಜ್ವರ ಕೂಡ ಹೆಚ್ಚಾಗುತ್ತಿದೆ

ಕೇರಳದಲ್ಲಿ ಶಿಗೆಲ್ಲೋಸಿಸ್ ಸೋಂಕಿನ ಜೊತೆಗೆ ವೆಸ್ಟ್ ನೈಲ್ ಜ್ವರ ಕೂಡ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ. ಈ ಎರಡೂ ಕಾಯಿಲೆಗಳಿಗೆ ಪರಸ್ಪರ ಸಂಬಂಧವಿಲ್ಲವಾದರೂ, ಎರಡೂ ಸೋಂಕುಗಳು ಒಂದೇ ಸಮಯದಲ್ಲಿ ಹರಡುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯ ಇಲಾಖೆ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. 

  1. ಕೈಗಳನ್ನು ಸಾಬೂನಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯುವುದು ಅತ್ಯಂತ ಮುಖ್ಯ. ವಿಶೇಷವಾಗಿ ಊಟ ಮಾಡುವ ಮೊದಲು ಹಾಗೂ ಶೌಚಾಲಯ ಬಳಕೆ ನಂತರ ಸ್ವಚ್ಛತೆ ಕಾಪಾಡಬೇಕು.

  2. ಸೋಂಕಿತ ವ್ಯಕ್ತಿಗಳ ಬಟ್ಟೆ, ಪಾತ್ರೆ ಮತ್ತು ಹಾಸಿಗೆಗಳನ್ನು ಪ್ರತ್ಯೇಕವಾಗಿ ಬಳಸಬೇಕು.

  3. ಲಕ್ಷಣಗಳು ಕಡಿಮೆಯಾದ ಬಳಿಕವೂ ಕನಿಷ್ಠ ಎರಡು ವಾರಗಳ ಕಾಲ ಸಾರ್ವಜನಿಕ ಆಹಾರ ವಿತರಣೆ ಅಥವಾ ಹೋಟೆಲ್ ಆಹಾರವನ್ನು ತಪ್ಪಿಸುವುದು ಒಳಿತು.

  4. ಕುಡಿಯುವ ನೀರನ್ನು ಕಡ್ಡಾಯವಾಗಿ ಕುದಿಸಿ ಬಳಸಬೇಕು.

  5. ಬೇಯಿಸದ ಆಹಾರ ಮತ್ತು ನಿನ್ನೆ-ಮೊನ್ನೆ ಮಾಡಿಟ್ಟ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು.

  6. ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸುವುದು ಉತ್ತಮ.

  7. ಮಳೆಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು.

ಆರೋಗ್ಯ ಇಲಾಖೆಯ ಸಿದ್ಧತೆಗಳು

ಕೇರಳ ಆರೋಗ್ಯ ಇಲಾಖೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಭಾವಿತ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಲಾಗಿದೆ. ಆಸ್ಪತ್ರೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಅಲ್ಲದೆ, ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಚ್ಚರಿಕೆ: ವೈದ್ಯರ ಸಲಹೆ ಕಡ್ಡಾಯ

ಯಾವುದೇ ರೀತಿಯ ಅತಿಸಾರ, ಜ್ವರ ಅಥವಾ ವಾಂತಿಯ ಲಕ್ಷಣಗಳು ಕಂಡುಬಂದಲ್ಲಿ ಸ್ವ-ಚಿಕಿತ್ಸೆ ಮಾಡಿಕೊಳ್ಳದೆ, ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯಬೇಕು. 

Exit mobile version