ಚೇತನ್ ಅಹಿಂಸಾ ಸೇರಿ 29 ಪರಿಸರ ಹೋರಾಟಗಾರರಿಂದ ರಾಹುಲ್ ಗಾಂಧಿಗೆ ಪತ್ರ

ಈಶ್ವರ ಖಂಡ್ರೆ (10)

ಬೆಂಗಳೂರು, (ಜುಲೈ 31): ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಕುರಿತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೌನ ವಹಿಸಿರುವುದನ್ನು ಪ್ರಶ್ನಿಸಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಸೇರಿದಂತೆ 29 ಪರಿಸರ ಹೋರಾಟಗಾರರು, ಪರಿಸರ ತಜ್ಞರು, ಲೇಖಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಬಹಿರಂಗ ಪತ್ರ ಬರೆದಿದ್ದಾರೆ.

ಅಂಡಮಾನ್-ನಿಕೋಬಾರ್‌ನ ಗ್ರೇಟ್ ನಿಕೋಬಾರ್ ಯೋಜನೆ ವಿರುದ್ಧ ರಾಹುಲ್ ಗಾಂಧಿ ಧ್ವನಿ ಎತ್ತಿದ್ದರೂ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಪರಿಸರದ ಮೇಲೆ ಪರಿಣಾಮ ಬೀರುವ ಯೋಜನೆಗಳ ಬಗ್ಗೆ ಮೌನವಾಗಿರುವುದು ಸೂಕ್ತವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳ ಆಧಾರದ ಮೇಲೆ ಅಲ್ಲ, ಒಂದೇ ರೀತಿಯ ನಿಲುವು ಇರಬೇಕು ಎಂದು ಪತ್ರದ ಸಹಿದಾರರು ಒತ್ತಾಯಿಸಿದ್ದಾರೆ.

ಮೇಕೆದಾಟು ಯೋಜನೆಗೆ ವಿರೋಧ

ಬಹಿರಂಗ ಪತ್ರದಲ್ಲಿ ಪ್ರಮುಖವಾಗಿ ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸುಮಾರು ₹14,000 ಕೋಟಿ ವೆಚ್ಚದ ಈ ಯೋಜನೆಯಿಂದ 5,173 ಹೆಕ್ಟೇರ್ (ಸುಮಾರು 12,350 ಎಕರೆ) ಭೂಮಿ ಜಲಾವೃತವಾಗುವ ಸಾಧ್ಯತೆ ಇದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಇದರಿಂದ ಕಾವೇರಿ ವನ್ಯಜೀವಿ ಅಭಯಾರಣ್ಯದ ಅರಣ್ಯ ಪ್ರದೇಶ, ಆನೆಗಳ ಸಂಚಾರ ಮಾರ್ಗಗಳು, ಜೀವ ವೈವಿಧ್ಯತೆ ಹಾಗೂ ಐದು ಗ್ರಾಮಗಳಿಗೆ ಹಾನಿಯಾಗುವ ಆತಂಕವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಡದಿ ಟೌನ್‌ಶಿಪ್ ಮೇಲೂ ಕಳವಳ

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಕೂಡ ತೀವ್ರ ವಿರೋಧ ವ್ಯಕ್ತವಾಗಿದೆ. ಸುಮಾರು 9,600 ಎಕರೆ ಫಲವತ್ತಾದ ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳುವುದರಿಂದ ರೈತರಿಗೆ ಅನ್ಯಾಯವಾಗುವುದಲ್ಲದೆ, ಆಹಾರ ಭದ್ರತೆ ಮತ್ತು ನೀರಿನ ಲಭ್ಯತೆಯ ಮೇಲೂ ದುಷ್ಪರಿಣಾಮ ಉಂಟಾಗಲಿದೆ ಎಂದು ಪರಿಸರ ಹೋರಾಟಗಾರರು ಎಚ್ಚರಿಸಿದ್ದಾರೆ.

ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನು ಕೃಷಿಗೆ ಸೂಕ್ತವಲ್ಲದ ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಅವರು ಸಲಹೆ ನೀಡಿದ್ದಾರೆ.

ಗಣಿಗಾರಿಕೆ ಅನುಮತಿ ವ್ಯವಸ್ಥೆಗೆ ವಿರೋಧ

ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಏಕಗವಾಕ್ಷಿ (Single Window) ಗಣಿಗಾರಿಕೆ ಅನುಮತಿ ವ್ಯವಸ್ಥೆಗೂ ಪತ್ರದಲ್ಲಿ ವಿರೋಧ ವ್ಯಕ್ತಪಡಿಸಲಾಗಿದೆ. ತ್ವರಿತ ಅನುಮೋದನೆಗಳಿಂದ ಪರಿಸರ ಮೌಲ್ಯಮಾಪನ ಪ್ರಕ್ರಿಯೆ ದುರ್ಬಲಗೊಳ್ಳುವ ಸಾಧ್ಯತೆ ಇದ್ದು, ಅರಣ್ಯ ಹಾಗೂ ಅಂತರ್ಜಲ ಸಂಪನ್ಮೂಲಗಳಿಗೆ ಹಾನಿಯಾಗಬಹುದು ಎಂದು ಸಹಿದಾರರು ಅಭಿಪ್ರಾಯಪಟ್ಟಿದ್ದಾರೆ.

ಮೂರು ಪ್ರಮುಖ ಬೇಡಿಕೆಗಳು

ಪರಿಸರ ಹೋರಾಟಗಾರರು ರಾಜ್ಯ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಹಲವು ಗಣ್ಯರ ಸಹಿ

ಈ ಬಹಿರಂಗ ಪತ್ರಕ್ಕೆ ಹಿರಿಯ ಪರಿಸರವಾದಿಗಳಾದ ಯಲ್ಲಪ್ಪ ರೆಡ್ಡಿ, ನಾಗೇಶ್ ಹೆಗ್ಡೆ, ವಿಜಯ್ ನಿಶಾಂತ್, ಹವಾಮಾನ ಕಾರ್ಯಕರ್ತೆ ದಿಶಾ ಎ. ರವಿ, ಅಪ್ಪಿಕೋ ಚಳವಳಿಯ ನಾಯಕ ಪಾಂಡುರಂಗ ಹೆಗ್ಡೆ, ಲೇಖಕಿ ಬಿ.ಟಿ. ಲಲಿತಾ ನಾಯಕ್, ಕವಿತಾ ಲಂಕೇಶ್, ನಟಿಯರಾದ ನೀತು ಶೆಟ್ಟಿ, ನಟ ಕಿರಣ್ ಶ್ರೀನಿವಾಸ್, ವಕೀಲ ಕೆ.ಎನ್. ಜಗದೀಶ್ ಸೇರಿದಂತೆ ಹಲವು ಪರಿಸರ ಹೋರಾಟಗಾರರು ಹಾಗೂ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

Exit mobile version