ಶಬರಿಮಲೆ ದೆಗುಲದ ಚಿನ್ನ ಕಳವು ಪ್ರಕರಣ: ‘ಕಾಂತಾರ’ ಸಿನಿಮಾ ನಟ ಜಯರಾಮ್ ವಿಚಾರಣೆ

Untitled design 2026 01 31T125812.142

ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಇದೀಗ ಸಿನಿ ನಟ ಜಯರಾಮ್ ಹೆಸರು ಮುನ್ನೆಲೆಗೆ ಬಂದಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಜಯರಾಮ್ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಗೆ ಒಳಪಡಿಸಿದೆ. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯೊಂದಿಗೆ ಜಯರಾಮ್‌ಗೆ ಇರುವ ಪರಿಚಯ ಹಾಗೂ ಸಂಪರ್ಕದ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆದಿದೆ.

ಈ ಪ್ರಕರಣವು 2019ರಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದೆ. ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಕಾರ್ಯ ನಡೆಯುತ್ತಿದ್ದ ವೇಳೆ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಗಂಭೀರ ಪ್ರಕರಣವು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ತನಿಖೆ ವೇಳೆ ಉನ್ನಿಕೃಷ್ಣನ್ ಪೊಟ್ಟಿ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು, ಆತನ ಚಟುವಟಿಕೆಗಳು ಮತ್ತು ಸಂಪರ್ಕ ವಲಯದ ಮೇಲೂ ತನಿಖಾಧಿಕಾರಿಗಳು ಕಣ್ಣಿಟ್ಟಿದ್ದಾರೆ.

ತನಿಖೆಯ ಭಾಗವಾಗಿ ಉನ್ನಿಕೃಷ್ಣನ್ ಪೊಟ್ಟಿಯೊಂದಿಗೆ ಸಂಪರ್ಕ ಹೊಂದಿದ್ದವರ ಪಟ್ಟಿ ತಯಾರಿಸಲಾಗಿದ್ದು, ಅದರಲ್ಲಿ ನಟ ಜಯರಾಮ್ ಹೆಸರು ಕೂಡ ಕಾಣಿಸಿಕೊಂಡಿದೆ. 2019ರಲ್ಲಿ ಚೆನ್ನೈನಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಜಯರಾಮ್ ಭಾಗವಹಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವಿಡಿಯೋ ವಿಶೇಷ ತನಿಖಾ ತಂಡದ ಗಮನ ಸೆಳೆದಿದ್ದು, ಈ ಹಿನ್ನೆಲೆಯಲ್ಲಿ ಜಯರಾಮ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ.

ವಿಚಾರಣೆ ವೇಳೆ ತನಿಖಾಧಿಕಾರಿಗಳು ಜಯರಾಮ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಉನ್ನಿಕೃಷ್ಣನ್ ಪೊಟ್ಟಿಯೊಂದಿಗೆ ಅವರ ಪರಿಚಯ ಹೇಗೆ ಆರಂಭವಾಯಿತು, ಎಷ್ಟು ಬಾರಿ ಅವರು ಆಯೋಜಿಸಿದ ಪೂಜೆಗಳಲ್ಲಿ ಭಾಗವಹಿಸಿದ್ದಾರೆ. ಇವರ ನಡುವೆ ಯಾವುದೇ ಆರ್ಥಿಕ ಅಥವಾ ವೈಯಕ್ತಿಕ ವ್ಯವಹಾರಗಳಿವೆಯೇ ಎಂಬ ವಿಚಾರಗಳ ಬಗ್ಗೆ ವಿವರವಾಗಿ ಪ್ರಶ್ನಿಸಲಾಗಿದೆ. ಆದರೆ ಲಭ್ಯ ಮಾಹಿತಿಯ ಪ್ರಕಾರ, ಈ ವಿಚಾರಣೆ ಸಂಪೂರ್ಣವಾಗಿ ಪರಿಚಯ ಮತ್ತು ಪೂಜೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ತಿಳಿದುಬಂದಿದೆ.

ನಟ ಜಯರಾಮ್ ಅವರು ಕೇವಲ ಪರಿಚಯದ ಮಟ್ಟಿಗೆ ಉನ್ನಿಕೃಷ್ಣನ್ ಪೊಟ್ಟಿಯನ್ನು ಬಲ್ಲವರಾಗಿದ್ದು, ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ತನಿಖಾ ಮೂಲಗಳು ಸೂಚಿಸಿವೆ.

ಜಯರಾಮ್ ಅವರು ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಮಲಯಾಳಂ ಮೂಲದವರಾಗಿದ್ದರೂ ಕನ್ನಡ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ಘೋಸ್ಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ಕನ್ನಡವನ್ನು ಶುದ್ಧವಾಗಿ ಮಾತನಾಡುವ ಮತ್ತು ಸ್ವತಃ ಡಬ್ಬಿಂಗ್ ಮಾಡುವ ಅಪರೂಪದ ಕಲಾವಿದರಲ್ಲೊಬ್ಬರು.

ಇತ್ತೀಚೆಗೆ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಾಜಶೇಖರ ಎಂಬ ಪಾತ್ರದ ಮೂಲಕ ಗಮನ ಸೆಳೆದಿರುವ ಜಯರಾಮ್, ತಮ್ಮ ಅಭಿನಯದಿಂದ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.

Exit mobile version