ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಲುಮಿಗು ರೇಣುಗುಂಬಲ ಅಮ್ಮನ ದೇವಾಲಯಕ್ಕೆ ನಿವೃತ್ತ ಸೇನಾಧಿಕಾರಿಯೊಬ್ಬರು ತಮ್ಮ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಿರುವ ಅಪರೂಪದ ಘಟನೆ ನಡೆದಿದೆ. ಅರಣಿ ಸಿಟಿಯ ಕೇಶವಪುರಂ ಗ್ರಾಮದ ವಿಜಯನ್ ಎಂಬ ನಿವೃತ್ತ ಸೇನಾಧಿಕಾರಿ, ಬಾಲ್ಯದಿಂದಲೂ ರೇಣುಗುಂಬಲ ಅಮ್ಮನ ಭಕ್ತರಾಗಿದ್ದರು. ಆದರೆ, ಕಳೆದ 10 ವರ್ಷಗಳಿಂದ ಕಾರಣಾಂತರಗಳಿಂದ ಪತ್ನಿಯಿಂದ ದೂರವಿದ್ದ ಅವರಿಗೆ ಕುಟುಂಬದಿಂದ ಯಾವುದೇ ಬೆಂಬಲ ಸಿಗಲಿಲ್ಲ.
ಇದೇ ವೇಳೆ, ತಮ್ಮ ಇಬ್ಬರು ಮಕ್ಕಳು ಆಸ್ತಿಯ ಪಾಲನ್ನು ಕೇಳಿ ದಿನನಿತ್ಯ ಗಲಾಟೆ ಮಾಡುತ್ತಿದ್ದರು. ಮಕ್ಕಳ ಈ ವರ್ತನೆ ಮತ್ತು ಅವರಿಂದಾಗುತ್ತಿದ್ದ ಅಪಮಾನದಿಂದ ಬೇಸತ್ತ ವಿಜಯನ್, ತಮ್ಮ ಆಸ್ತಿಯನ್ನು ದೇವಾಲಯಕ್ಕೆ ಅರ್ಪಿಸಲು ನಿರ್ಧರಿಸಿದರು. ವಿಜಯನ್ ಅವರ ಆಸ್ತಿಯಲ್ಲಿ ಒಂದು 3 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇನ್ನೊಂದು 1 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಜೂನ್ 24ರಂದು ದೇವಾಲಯದ ಹುಂಡಿಯನ್ನು ಎಣಿಕೆ ಮಾಡುವ ವೇಳೆ, ವಿಜಯನ್ ಅವರು ಹಾಕಿದ್ದ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಪರಿಶೀಲನೆಯಲ್ಲಿ ಈ ದಾಖಲೆಗಳು ಒರಿಜಿನಲ್ ಎಂದು ದೃಢಪಟ್ಟಿದೆ. ದೇವಾಲಯದ ಆಡಳಿತ ಮಂಡಳಿ ವಿಜಯನ್ ಅವರನ್ನು ಸಂಪರ್ಕಿಸಿ ಮಾತನಾಡಿದಾಗ, ಅವರು ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳದೆ, ಆಸ್ತಿಗಾಗಿ ಸತಾಯಿಸುತ್ತಿದ್ದಾರೆ. ಒಂದು ರೂಪಾಯಿ ಕೂಡ ಕೊಡದೆ, ಆಸ್ತಿ ಮಾರುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಮಕ್ಕಳಿಗೆ ಆಸ್ತಿ ಸಿಗಬಾರದೆಂದು, ಕಾನೂನುಬದ್ಧವಾಗಿ ನನ್ನ ಆಸ್ತಿಯನ್ನು ರೇಣುಗುಂಬಲ ಅಮ್ಮನಿಗೆ ಅರ್ಪಿಸಿದ್ದೇನೆ,” ಎಂದು ವಿಜಯನ್ ತಿಳಿಸಿದ್ದಾರೆ. ಈ ಘಟನೆಯು ತಮಿಳುನಾಡಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.