ರಾಜಸ್ಥಾನದಲ್ಲೂ ಹನಿಮೂನ್ ಮರ್ಡರ್: ಪ್ರಿಯಕರನಿಂದ ಪತಿ ಕೊಲ್ಲಿಸಿದ ಪತ್ನಿ

ಸುಜಯೇಂದ್ರ (3)

ಮೇಘಾಲಯದಲ್ಲಿ ಸೋನಮ್ ರಘುವಂಶಿ ಎಂಬ ಮಹಿಳೆ ತನ್ನ ಪತಿ ರಾಜಾರಘುವಂಶಿಯನ್ನು ಪ್ಲಾನ್‌ ಮಾಡಿ ಹನಿಮೂನ್‌ ಹತ್ಯೆ ಮಾಡಿದ್ದಳು. ಆದರೆ ಇದೀಗ ರಾಜಸ್ಥಾನದಲ್ಲಿ ಅದೇ ಮಾದರಿಯ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಮೊದಲ ನೋಟಕ್ಕೆ ಇದು ಸಾಮಾನ್ಯ ಹಿಟ್ & ರನ್ ಹಾಗೂ ಲೂಟಿ ಪ್ರಕರಣವೆಂದು ಕಂಡಿತ್ತು. ತನಿಖೆ ಮುಂದುವರಿದಂತೆ ಇದು ನವವಿವಾಹಿತ ಪತ್ನಿಯೇ ರೂಪಿಸಿದ್ದ ಹನಿಮೂನ್ ಕೊಲೆ ಸಂಚು ಎಂಬುದು ಬಹಿರಂಗವಾಗಿದೆ.

ಜನವರಿ 30ರ ಸಂಜೆ, ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ಊಟದ ನಂತರ ವಾಕಿಂಗ್‌ಗೆ ಹೊರಟಿದ್ದರು. ಆ ವೇಳೆ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ರಸ್ತೆಯಲ್ಲಿ ಆಶಿಶ್ ಮೃತದೇಹವನ್ನು ಹಾಗೂ ಪತ್ನಿ ಅಂಜು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಶಿಶ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಆರಂಭದಲ್ಲಿ ಅಂಜು, ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ನಂತರ ದುಷ್ಕರ್ಮಿಗಳು ತನ್ನ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆ ಪೊಲೀಸರು ಹಿಟ್ & ರನ್ ಹಾಗೂ ಲೂಟಿ ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆ ಮುಂದುವರಿದಂತೆ ಹಲವು ಅನುಮಾನಾಸ್ಪದ ಅಂಶಗಳು ಪೊಲೀಸರ ಗಮನ ಸೆಳೆದವು.

ವಿಧಿವಿಜ್ಞಾನ ತಂಡದ (FSL) ಪರಿಶೀಲನೆ ವೇಳೆ ಆಶಿಶ್ ದೇಹದಲ್ಲಿ ಕಂಡುಬಂದ ಗಾಯದ ಗುರುತುಗಳು ಅಪಘಾತಕ್ಕೆ ಹೊಂದಿಕೆಯಾಗಿರಲಿಲ್ಲ. ವೈದ್ಯಕೀಯ ವರದಿಯ ಪ್ರಕಾರ ಆಶಿಶ್ ಅವರನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬ ಅನುಮಾನ ಮೂಡಿತ್ತು. ಇನ್ನೊಂದೆಡೆ, ಅಂಜು ಅವರ ದೇಹದಲ್ಲಿ ಯಾವುದೇ ಗಂಭೀರ ಗಾಯಗಳಿರಲಿಲ್ಲ. ಇದು ಪೊಲೀಸರಿಗೆ ಇನ್ನಷ್ಟು ಅನುಮಾನಕ್ಕೆ ಕಾರಣವಾಯಿತು.

ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಅವರ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿತು. ಅಂಜು ನೀಡುತ್ತಿದ್ದ ಹೇಳಿಕೆಗಳು ಪದೇಪದೇ ಬದಲಾಗುತ್ತಿದ್ದವು. ಇದರ ಬೆನ್ನಲ್ಲೇ ಪೊಲೀಸರು ಅಂಜು ಅವರ ಮೊಬೈಲ್ ಫೋನ್ ದಾಖಲೆಗಳನ್ನು ಪರಿಶೀಲಿಸಿದರು.

ಫೋನ್ ಕಾಲ್ ಡೀಟೇಲ್ಸ್ ಪರಿಶೀಲನೆಯ ವೇಳೆ, ಅಂಜು ತನ್ನ ಮನೆಯ ಸಮೀಪ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎಂಬುದು ಬಯಲಾಯಿತು. ತನಿಖೆಯಲ್ಲಿ ತಿಳಿದುಬಂದಂತೆ, ಅಂಜು ಮತ್ತು ಆಶಿಶ್ ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಆಗಿತ್ತು. ಆದರೆ ಅಂಜುಗೆ ಈ ಮದುವೆ ಇಷ್ಟವಿರಲಿಲ್ಲ. ಮದುವೆಯ ಬಳಿಕವೂ ಅವಳು ಬೇಸರಗೊಂಡಿದ್ದಳು ಮತ್ತು ಕೆಲವೇ ದಿನಗಳಲ್ಲಿ ತನ್ನ ತವರಿಗೆ ತೆರಳಿದ್ದಳು. ಅಲ್ಲಿ ಅವಳು ತನ್ನ ಮಾಜಿ ಪ್ರಿಯಕರ ಸಂಜು ಜೊತೆ ಮತ್ತೆ ಸಂಪರ್ಕ ಬೆಳೆಸಿಕೊಂಡಿದ್ದಳು.

ಪೊಲೀಸ್ ತನಿಖೆ ಪ್ರಕಾರ, ಅಂಜು ಮತ್ತು ಸಂಜು ಸೇರಿ ಆಶಿಶ್ ಕೊಲೆ ಸಂಚನ್ನು ರೂಪಿಸಿದ್ದರು. ಜನವರಿ 30ರ ರಾತ್ರಿ, ಅಂಜು ಉದ್ದೇಶಪೂರ್ವಕವಾಗಿ ಆಶಿಶ್‌ನನ್ನು ಒಂಟಿ ರಸ್ತೆಯತ್ತ ವಾಕಿಂಗ್‌ಗೆ ಕರೆದೊಯ್ದಳು. ಅಲ್ಲಿ ಸಂಜು ಹಾಗೂ ಅವನ ಸಹಚರರಾದ ರೋಹಿತ್ ಅಲಿಯಾಸ್ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ ಪೊದೆಗಳಲ್ಲಿ ಅಡಗಿಕೊಂಡಿದ್ದರು.

ಪೂರ್ವನಿಯೋಜಿತ ಸಂಚಿನಂತೆ, ಮೂವರು ದಾಳಿಕೋರರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಅದನ್ನು ರಸ್ತೆ ಅಪಘಾತವೆಂದು ತೋರಿಸಲು ಯತ್ನಿಸಲಾಯಿತು. ಅಲ್ಲದೇ ಅಂಜು ತನ್ನ ಫೋನ್ ಹಾಗೂ ಕಿವಿಯೋಲೆಗಳನ್ನು ಆರೋಪಿಗಳಿಗೆ ನೀಡಿದ್ದಳು. ದಾಳಿ ಬಳಿಕ ಅವಳು ರಸ್ತೆಯಲ್ಲಿ ಪ್ರಜ್ಞಾಹೀನಳಂತೆ ನಟಿಸಿದ್ದಳು.

ಆದರೆ ಆಶಿಶ್ ದೇಹದ ಗಾಯದ ಗುರುತುಗಳು, ಅಂಜು ನೀಡಿದ ಹೇಳಿಕೆಯಲ್ಲಿನ ವ್ಯತ್ಯಾಸಗಳು ಮತ್ತು ತಾಂತ್ರಿಕ ಸಾಕ್ಷ್ಯಗಳು ಕೊನೆಗೂ ಸತ್ಯವನ್ನು ಬಯಲಿಗೆಳೆದಿದೆ. ಪೊಲೀಸರು ಅಂಜು, ಆಕೆಯ ಪ್ರಿಯಕರ ಸಂಜು ಹಾಗೂ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Exit mobile version