ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಹೊಸ ವಿಷಯವೇನಲ್ಲ. ಆದರೆ, ಈ ವಿಳಂಬವು ಒಬ್ಬ ವ್ಯಕ್ತಿಯ ಜೀವನವನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸಮೃದ್ಧಿ ಎಂಬ ವಿದ್ಯಾರ್ಥಿನಿಯ ಪ್ರಕರಣವೇ ಸಾಕ್ಷಿ. ರೈಲ್ವೇ ಇಲಾಖೆಯ ಸಮಯಪ್ರಜ್ಞೆಯ ಕೊರತೆಯಿಂದಾಗಿ ತನ್ನ ಒಂದು ವರ್ಷದ ಶೈಕ್ಷಣಿಕ ಜೀವನವನ್ನು ಕಳೆದುಕೊಂಡಿದ್ದ ಒಬ್ಬ ಯುವತಿ, ನ್ಯಾಯಾಲಯದಲ್ಲಿ ದೊಡ್ಡ ಮಟ್ಟದ ಜಯ ಗಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮೇ 7, 2018 ರಂದು ಸಮೃದ್ಧಿ ಎಂಬ ಯುವತಿಗೆ ಲಕ್ನೋದ ಜೈ ನಾರಾಯಣ್ ಪಿಜಿ ಕಾಲೇಜಿನಲ್ಲಿ ಬಿಎಸ್ಸಿ ಬಯೋಟೆಕ್ನಾಲಜಿ (B.Sc Biotechnology) ಪ್ರವೇಶ ಪರೀಕ್ಷೆ ಇತ್ತು. ಮಧ್ಯಾಹ್ನ 12:30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕಿತ್ತು. ಅಂದು ಬೆಳಿಗ್ಗೆಯೇ ಅವರು ಲಕ್ನೋ ತಲುಪುವ ಇಂಟರ್ಸಿಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಏರಿದ್ದರು. ವೇಳಾಪಟ್ಟಿಯ ಪ್ರಕಾರ ಈ ರೈಲು ಬೆಳಿಗ್ಗೆ 11 ಗಂಟೆಗೆ ಲಕ್ನೋ ತಲುಪಬೇಕಿತ್ತು.
ಆದರೆ, ಅಂದು ರೈಲು ಸುಮಾರು ಎರಡುವರೆ ಗಂಟೆ ತಡವಾಗಿ ಬಂದಿತು. ಇದರಿಂದಾಗಿ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ವರ್ಷಪೂರ್ತಿ ಪಟ್ಟ ಕಠಿಣ ಪರಿಶ್ರಮ ಮತ್ತು ಒಂದು ವರ್ಷದ ಶೈಕ್ಷಣಿಕ ಭವಿಷ್ಯ ರೈಲ್ವೆಯ ವಿಳಂಬದಿಂದಾಗಿ ಹಾಳಾಯಿತು ಎಂದು ವಿದ್ಯಾರ್ಥಿನಿ ಬೇಸರಗೊಂಡಿದ್ದಳು.
7 ವರ್ಷಗಳ ಸುದೀರ್ಘ ಕಾನೂನು ಸಮರ
ತನ್ನ ಭವಿಷ್ಯ ಹಾಳಾಗಲು ರೈಲ್ವೇ ಇಲಾಖೆಯೇ ನೇರ ಹೊಣೆ ಎಂದು ನಿರ್ಧರಿಸಿದ ಸಮೃದ್ಧಿ ಸುಮ್ಮನೆ ಕೂರಲಿಲ್ಲ. ಬದಲಿಗೆ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (Consumer Forum) ಮೆಟ್ಟಿಲೇರಿದ್ದರು. ರೈಲ್ವೇ ಇಲಾಖೆಯ ವಿರುದ್ಧ ದೂರು ದಾಖಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ರೈಲ್ವೇ ಇಲಾಖೆಗೆ ನೋಟಿಸ್ ಜಾರಿ ಮಾಡಿತು. ಇಲಾಖೆಯು ರೈಲು ತಡವಾಗಿರುವುದನ್ನು ಒಪ್ಪಿಕೊಂಡಿತಾದರೂ, ವಿಳಂಬಕ್ಕೆ ಯಾವುದೇ ತಾಂತ್ರಿಕ ಅಥವಾ ಅನಿವಾರ್ಯ ಕಾರಣಗಳನ್ನು ನೀಡಲು ವಿಫಲವಾಯಿತು.
ಗ್ರಾಹಕ ನ್ಯಾಯಾಲಯದ ಐತಿಹಾಸಿಕ ತೀರ್ಪು
ಸುದೀರ್ಘ 7 ವರ್ಷಗಳ ಕಾಲ ನಡೆದ ಈ ವಿಚಾರಣೆಯಲ್ಲಿ ನ್ಯಾಯಾಲಯವು ವಿದ್ಯಾರ್ಥಿನಿಯ ಪರವಾಗಿ ನಿಂತಿದ್ದು, ಪ್ರಯಾಣಿಕರನ್ನು ನಿಗದಿತ ಸಮಯಕ್ಕೆ ತಲುಪಿಸುವುದು ಮತ್ತು ಸೇವೆಯನ್ನು ಸಮರ್ಪಕವಾಗಿ ಒದಗಿಸುವುದು ರೈಲ್ವೇ ಇಲಾಖೆಯ ಕರ್ತವ್ಯ. ಈ ಪ್ರಕರಣದಲ್ಲಿ ಇಲಾಖೆಯ ನಿರ್ಲಕ್ಷ್ಯ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ವಿದ್ಯಾರ್ಥಿನಿಯ ಭವಿಷ್ಯಕ್ಕೆ ಆಗಿರುವ ನಷ್ಟವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲದಿದ್ದರೂ, ಇಲಾಖೆಯು ದಂಡ ತೆರಲೇಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಕೊನೆಗೆ, ಸಮೃದ್ಧಿಗೆ 9.10 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ರೈಲ್ವೇ ಇಲಾಖೆಗೆ ಆದೇಶಿಸಿದೆ. ಈ ತೀರ್ಪು ರೈಲ್ವೇ ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.





