ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್ ಸಾಲ ಕೊಡಿಸಲು ನೆರವಾಗುವ ಷರತ್ತಿನೊಂದಿಗೆ ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಒಟ್ಟು 25000 ಕೋಟಿ ರು. ಸಾಲಕ್ಕೆ ಬೇಡಿಕೆ ಇರಿಸಿತ್ತು. ಆದರೆ, ಮೊದಲ ಕಂತಿನ 8500 ಕೋಟಿ ರು. ಬಿಡುಗಡೆಗೆ ಟ್ರಂಪ್ ಅವರು ಕದನ ವಿರಾಮವನ್ನು ಷರತ್ತಾಗಿ ಇರಿಸಿದ್ದಾರೆ ಎನ್ನಲಾಗಿದೆ.
ದೆಹಲಿ ಮೇಲೆ ದಾಳಿಗೆ ಯತ್ನ:
ಇಸ್ಲಾಮಾಬಾದ್ ಮೇಲಿನ ಭಾರತದ ದಾಳಿಯನ್ನು ತಡೆಯಲಾಗದೇ ಮುಖಭಂಗಕ್ಕೊಳಗಾದ ಪಾಕಿಸ್ತಾನವು ಪ್ರತೀಕಾರವಾಗಿ ನವದೆಹಲಿ ಮೇಲೆ ದಾಳಿಗೆ ಯತ್ನಿಸಿ ವಿಫಲವಾಗಿದೆ. ಶುಕ್ರವಾರ ರಾತ್ರಿ ಪಾಕಿಸ್ತಾನವು ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಪಂಜಾಬ್ ಗಡಿಯಲ್ಲೇ ನಿಷ್ಕ್ರಿಯಗೊಳಿಸಿವೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶನಿವಾರ ನಸುಕಿನ 1.40ಕ್ಕೆ ಪಾಕಿಸ್ತಾನವು ಅತಿವೇಗದ ಕ್ಷಿಪಣಿಯನ್ನು ಉಡಾಯಿಸಿತ್ತು. ಇದನ್ನು ಪಂಜಾಬ್ ಮೇಲೆ ಹಾರುವಾಗ ನಾವು ವಾಯುರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಿದೆವು” ಎಂದು ತಿಳಿಸಿದರು.
ಪಾಕಿಸ್ತಾನವು ಶ್ರೀನಗರ, ಅವಂತಿಪುರ, ಮತ್ತು ಉಧಂಪುರದ ವೈದ್ಯಕೀಯ ಘಟಕಗಳ ಮೇಲೆ ಭಾರೀ ಕ್ಷಮತೆಯ ಕ್ಷಿಪಣಿಗಳೊಂದಿಗೆ ದಾಳಿಗೆ ಯತ್ನಿಸಿತು. ಇದಲ್ಲದೆ, ಭಾರತದ ಪಶ್ಚಿಮ ಗಡಿಯ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಮತ್ತು ಜೆಟ್ಗಳನ್ನು ಬಳಸಿತು. ಈ ಎಲ್ಲ ಕ್ರಮಗಳಿಗೆ ಭಾರತವು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.