ಪಾಟ್ನಾ, ನವೆಂಬರ್ 17: ಬಿಹಾರದ ರಾಜಕೀಯದಲ್ಲಿ ಮತ್ತೊಮ್ಮೆ ನಿತೀಶ್ ಮ್ಯಾಜಿಕ್ ಪುನರಾವರ್ತನೆಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಸಂಜೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ರಾಜೀನಾಮೆ ಸಲ್ಲಿಸಿ, ತಮ್ಮ ಸಂಪುಟದೊಂದಿಗೆ ಕೊನೆಯ ಸಭೆ ನಡೆಸಿದರು. ಆದರೆ ಇದು ಕೇವಲ ಔಪಚಾರಿಕತೆ ಮಾತ್ರ ! ಇದೇ ನವೆಂಬರ್ 20ರಂದು ಗುರುವಾರ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಅದ್ಧೂರಿ ಸಮಾರಂಭದಲ್ಲಿ ನಿತೀಶ್ ಕುಮಾರ್ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಗೆಲುವು ಸಾಧಿಸಿದೆ. 243 ಸ್ಥಾನಗಳಲ್ಲಿ ಬೃಹತ್ ಬಹುಮತದೊಂದಿಗೆ 202 ಸ್ಥಾನಗಳನ್ನು ಪಡೆದುಕೊಂದಿದೆ. ಬಿಜೆಪಿ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಜೆಡಿಯು 85 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದೆ. ಇತರ ಸಣ್ಣ ಪಕ್ಷಗಳು ಉಳಿದ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ವಿರೋಧ ಪಕ್ಷಗಳ ಮಹಾಘಟಬಂಧನ್ (ಆರ್ಜೆಡಿ + ಕಾಂಗ್ರೆಸ್ + ಇತರರು) ಕೇವಲ 35 ಸ್ಥಾನಗಳಿಗೆ ಸೀಮಿತವಾಗಿ ಭಾರೀ ಸೋಲು ಕಂಡಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಕೂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಈ ಐತಿಹಾಸಿಕ ಗೆಲುವಿನ ನಂತರ ಎನ್ಡಿಎಯಲ್ಲಿ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆಗೆ ತಕ್ಷಣ ಉತ್ತರ ಸಿಕ್ಕಿದೆ. ಅದೇ ನಿತೀಶ್ ಕುಮಾರ್..!
ಹೊಸ ಸರ್ಕಾರ ರಚನೆಗೆ ಈಗ ತೀವ್ರ ಚಟುವಟಿಕೆ ಆರಂಭವಾಗಿದೆ. ಬಿಜೆಪಿ ಮತ್ತು ಜೆಡಿಯು ನಾಯಕರು ಈಗಾಗಲೇ ಸಂಪುಟದ ಆಕಾರ, ಖಾತೆ ಹಂಚಿಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ನಿತೀಶ್ ಅವರ 10ನೇ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಎನ್ಡಿಎಯ ಎಲ್ಲ ಪ್ರಮುಖ ಮಿತ್ರಪಕ್ಷಗಳ ನಾಯಕರು ಆಗಮಿಸುವ ಸಾಧ್ಯತೆ ಇದೆ.
ಇತ್ತ ಚುನಾವಣೆಯಲ್ಲಿ ಸೋತು ನಿರಾಶೆಗೊಳಗಾದ ಕಾಂಗ್ರೆಸ್ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಬಿಹಾರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಎನ್ಡಿಎ ನಾಯಕರು ಮತ್ತು ಪ್ರಧಾನಿ ಮೋದಿ ಅವರು ಒಂದು ಮತಕ್ಕೆ ಮಹಿಳೆಯರಿಗೆ ₹10,000 ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಕ್ಕೆ ಯಾವುದೇ ಪುರಾವೆ ನೀಡದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿತೀಶ್ ಕುಮಾರ್ ಅವರ ರಾಜಕೀಯ ಜೀವನವೇ ಒಂದು ಅದ್ಭುತ ಕಥೆ. 2005ರಿಂದ ಇಲ್ಲಿಯವರೆಗೆ ಹಲವು ಬಾರಿ ಮೈತ್ರಿಕೂಟ ಬದಲಾಯಿಸಿ, ಎನ್ಡಿಎ-ಮಹಾಘಟಬಂಧನ್-ಮತ್ತೆ ಎನ್ಡಿಎ ಎಂದು ತಿರುಗುವ ಪ್ರಯಾಣದಲ್ಲಿ ಯಾವಾಗಲೂ ಸಿಎಂ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಬಾರಿ ಎನ್ಡಿಎಯ ಭರ್ಜರಿ ಗೆಲುವಿನೊಂದಿಗೆ ಅವರ 10ನೇ ಅವಧಿಯ ಸಿಎಂ ಆಗಿ ಪ್ರಮಾಣವಚನ ಇತಿಹಾಸದ ಪುಟ ಸೇರಲಿದೆ.
ಬಿಹಾರದ ಜನತೆಗೆ ಈಗ ನಿತೀಶ್ 4.0 ಸರ್ಕಾರದಿಂದ ಏನೆಲ್ಲಾ ನಿರೀಕ್ಷೆ? ಅಭಿವೃದ್ಧಿ, ಉದ್ಯೋಗ, ಮಹಿಳಾ ಸಬಲೀಕರಣ, ಗುಣಮಟ್ಟದ ಶಿಕ್ಷಣ-ಆರೋಗ್ಯ ಈ ಎಲ್ಲದಕ್ಕೂ ಹೊಸ ಸರ್ಕಾರ ಒತ್ತು ನೀಡುತ್ತದೆ ಎಂಬ ಭರವಸೆ ಎನ್ಡಿಎ ನಾಯಕರು ನೀಡಿದ್ದಾರೆ.ನವೆಂಬರ್ 20ರ ಸಮಾರಂಭದ ನಂತರ ಬಿಹಾರದ ಹೊಸ ಸಂಪುಟ ರೂಪುಗೊಳ್ಳಲಿದೆ. ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ನಿತೀಶ್ ಯುಗ ಆರಂಭವಾಗಲಿದೆ.





