ಶಿಕ್ಷಕಿ ಮೇಲೆ ಲವ್..ಒಪ್ಪದಿದ್ದಕ್ಕೆ ಬೆಂಕಿ ಹಚ್ಚಿದ ವಿದ್ಯಾರ್ಥಿ

Untitled design (20)

ಭೋಪಾಲ್: ವಿದ್ಯಾರ್ಥಿಯೊಬ್ಬ ಅತಿಥಿ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಶಿಕ್ಷಕಿಯ ದೇಹದ ಕೆಲ ಭಾಗ ಸುಟ್ಟಿದ್ದು, ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೂರ್ಯಾಂಶ್ ಕೊಚಾರ್ ಎಂಬುವವನು, ಎಕ್ಸಲೆನ್ಸ್ ಸ್ಕೂಲ್ ಮಾಜಿ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯನ್ನು ಒಂದು ವರ್ಷದ ಹಿಂದೆ ಪಾಸಾಗಿದ್ದಾನೆ. ಮಂಗಳವಾರ (ಆಗಸ್ಟ್ 19) ಮಧ್ಯಾಹ್ನ 3:30ರ ಸುಮಾರಿಗೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಸೂರ್ಯಾಂಶ್ ಎಂಬ ಶಿಕ್ಷಕಿಯ ಮನೆಗೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ತೆರಳಿ, ಯಾವುದೇ ಮುನ್ಸೂಚನೆಯಿಲ್ಲದೆ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯ ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸೂರ್ಯಾಂಶ್ ಶಿಕ್ಷಕಿಯನ್ನು ಆ ವಿದ್ಯಾರ್ಥಿ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ.  ಆದರೆ, ಶಿಕ್ಷಕಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಈ ಕೃತ್ಯಕ್ಕೆ ಕೈಹಾಕಿದ್ದಾನೆ. ಇದರ ಜೊತೆಗೆ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಿಕ್ಷಕಿಯು ಸೀರೆ ಧರಿಸಿದ್ದಕ್ಕೆ ಸೂರ್ಯಾಂಶ್ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕಿಯು ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು ಸೂರ್ಯಾಂಶ್‌ಗೆ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಆತ ಕೋಪಗೊಂಡು ಶಿಕ್ಷಕಿಗೆ ತೊಂದರೆ ಕೊಡಲು ಈ ಕೃತ್ಯವನ್ನು ಯೋಜಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಶಿಕ್ಷಕಿಯನ್ನು ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಎಕ್ಸಲೆನ್ಸ್ ಸ್ಕೂಲ್‌ಗೆ, ಅತಿಥಿ ಶಿಕ್ಷಕಿಯಾಗಿ ಮತ್ತು ಲ್ಯಾಬ್ ಟೆಕ್ನಿಷಿಯನ್ ಆಗಿ ನೇಮಕ ಮಾಡಲಾಗಿತ್ತು. ಕೊತ್ವಾಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 124ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಉಪಾಧೀಕ್ಷಕ ಸಂದೀಪ್ ಭೂರಿಯಾ ಅವರ ಪ್ರಕಾರ, ಈ ಘಟನೆಯ ಹಿಂದೆ ಪ್ರೀತಿಯ ಜೊತೆಗೆ ವೈಯಕ್ತಿಕ ದ್ವೇಷವೂ ಕಾರಣವಾಗಿರಬಹುದು. ಆರೋಪಿಯು ಶಿಕ್ಷಕಿಯನ್ನು ಕಳೆದ ಎರಡು ವರ್ಷಗಳಿಂದ ತಿಳಿದಿದ್ದಾನೆ. ತನಿಖೆಯು ಈಗಲೂ ಮುಂದುವರಿದಿದ್ದು, ಆರೋಪಿಯ ಹೇಳಿಕೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

Exit mobile version