ಮುಂಬೈಗೆ ಜಲ ಸಂಕಷ್ಟ: ಈಜುಕೊಳಗಳಿಗೆ, ಕಟ್ಟಡ ಕಾಮಗಾರಿಗಳಿಗೆ ನೀರು ಸ್ಥಗಿತ

Untitled design 2026 06 17T132704.465

ಮುಂಬೈ, ಜೂನ್ 17: ದೇಶದ ಹಣಕಾಸಿನ ರಾಜಧಾನಿ ಮುಂಬೈ (Mumbai) ನಗರವು ತೀವ್ರ ನೀರಿನ ಬಿಕ್ಕಟ್ಟನ್ನು (Mumbai Water Crisis) ಎದುರಿಸುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಪ್ರವೇಶಿಸಿದ್ದರೂ, ಮುಂಬೈನಲ್ಲಿ ಮಳೆಯ ಕೊರತೆ ಮುಂದುವರೆದಿದೆ. ಇದರ ಪರಿಣಾಮ ನಗರಕ್ಕೆ ನೀರು ಪೂರೈಸುವ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ನಗರದ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಜೂನ್ 17 ರಿಂದಲೇ ಈ ನಿರ್ಬಂಧಗಳು ಅನ್ವಯವಾಗಲಿವೆ.

ಪಾಲಿಕೆಯ ಹೊಸ ಕಟ್ಟುನಿಟ್ಟಿನ ಆದೇಶಗಳು
BMC ಹೊರಡಿಸಿರುವ ಹೊಸ ನಿರ್ದೇಶನದ ಪ್ರಕಾರ, ನಗರದಲ್ಲಿ ನಡೆಯುತ್ತಿರುವ ಎಲ್ಲಾ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ (Construction Activities) ಒದಗಿಸಲಾಗಿದ್ದ ನೀರಿನ ಸಂಪರ್ಕಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಅಲ್ಲದೆ, ಹೊಸ ನಿರ್ಮಾಣ ಯೋಜನೆಗಳಿಗೆ ನೀರಿನ ಸಂಪರ್ಕಗಳ ಅನುಮೋದನೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ಅಮಾನತುಗೊಳಿಸಲಾಗಿದೆ. ನಗರದಲ್ಲಿರುವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಈಜುಕೊಳಗಳಿಗೆ (Swimming Pools) ನೀರಿನ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಹೋಟೆಲ್‌ಗಳು, ರೆಸಾರ್ಟ್ ಗಳು ಮತ್ತು ಜಲಕ್ರೀಡಾ ಕೇಂದ್ರಗಳಿಗೂ ನೀರು ಪೂರೈಕೆಯಲ್ಲಿ ಕಡಿತವನ್ನು ಜಾರಿಗೊಳಿಸಲಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ವಲಯಕ್ಕೆ ಕಠಿಣ
ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ತಮ್ಮ ನೀರಿನ ಬಳಕೆಯನ್ನು ಶೇ.20 ರಷ್ಟು ಕಡಿತಗೊಳಿಸಬೇಕಾಗಿದೆ. ಕೈಗಾರಿಕಾ ಘಟಕಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕ್ರೀಡಾ ಕ್ಲಬ್‌ಗಳಿಗೆ ನೀರಿನ ಪೂರೈಕೆಯಲ್ಲಿ ಈ ಕಡಿತವನ್ನು ಜಾರಿಗೊಳಿಸಲಾಗಿದೆ. ಪ್ಯಾಕೇಜ್ ಕುಡಿಯುವ ನೀರು (ವಾಟರ್ ಬಾಟಲ್) ಮತ್ತು ಪಾನೀಯ ತಯಾರಕ ಕಂಪನಿಗಳು ಕೂಡ ಅತ್ಯಗತ್ಯ ಬಳಕೆಗೆ ಮಾತ್ರ ನೀರನ್ನು ಬಳಸಿಕೊಳ್ಳಬೇಕು ಎಂದು BMC ಸೂಚಿಸಿದೆ. ವ್ಯಾಪಾರ ಮಳಿಗೆಗಳು, ಕಾರ್ ವಾಶ್ ಕೇಂದ್ರಗಳು ಮತ್ತು ತೋಟಗಾರಿಕೆ ಸ್ಥಳಗಳು ತಮ್ಮ ನೀರಿನ ಬಳಕೆಯನ್ನು ಗಣನೀಯವಾಗಿ ಕಡಿತಗೊಳಿಸುವಂತೆ ಸೂಚಿಸಲಾಗಿದೆ. ಬೃಹತ್ ನೀರಿನ ಬಳಕೆದಾರರಿಗೆ ವಿಶೇಷ ನಿಗಾ ಇಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜಲಾಶಯಗಳ ಆತಂಕಕಾರಿ ಮಟ್ಟ
ಮುಂಬೈಗೆ ನೀರು ಪೂರೈಸುವ ಮೊದಲು, ತುಲಶಿ, ವಿಹಾರ್, ಪವೈ, ಭಾತ್ಸಾ, ಮೋದಕ್ಕುಳ, ತಾನ್ಸಾ ಮತ್ತು ಮಧ್ಯವರ್ತಿ ಜಲಾಶಯಗಳಲ್ಲಿ ನೀರಿನ ಸಾಮರ್ಥ್ಯವು ಶೇ.10.35ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಗೆ ಈ ಜಲಾಶಯಗಳಲ್ಲಿ ಶೇ.14.5 ರಷ್ಟು ನೀರು ಇತ್ತು.

ಕಳೆದ ಐದು ವರ್ಷಗಳ ಸರಾಸರಿಗೆ ಹೋಲಿಸಿದರೆ ಇದು ಶೇ.4.5 ರಷ್ಟು ಕಡಿಮೆಯಾಗಿದೆ. ಹೀಗಾಗಿ ಮುಂಬೈನಲ್ಲಿ ಮಳೆಯಾಗುವ ತನಕ ಕುಡಿಯುವ ನೀರಿನ ಪೂರೈಕೆಯನ್ನು ಸುಗಮಗೊಳಿಸಲು BMC ಈ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಮೇ 15 ರಿಂದಲೇ ನಗರದಲ್ಲಿ ಶೇ.10 ರಷ್ಟು ನೀರಿನ ಬಳಕೆಯನ್ನು ಕಡಿಮೆ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ನೀರಿನ ಮಟ್ಟ ಮತ್ತಷ್ಟು ಕುಸಿದಿರುವುದರಿಂದ, ಹೊಸ ಕ್ರಮಗಳು ಅನಿವಾರ್ಯವಾಗಿವೆ.

ನೀರು ಪೋಲು ಮಾಡಿದರೆ ಕಠಿಣ ಕ್ರಮ
ಕುಡಿಯುವ ನೀರನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ BMC ಕಠಿಣ ಕ್ರಮ ಕೈಗೊಳ್ಳಲಿದೆ. ನೀರಿನ ಮೋಟಾರ್‌‌ಗಳ ಅಕ್ರಮ ಸಂಪರ್ಕ, ಪೈಪ್ಗಳಲ್ಲಿ ಸೋರಿಕೆ, ಮತ್ತು ನೀರನ್ನು ವ್ಯರ್ಥವಾಗಿ ಹರಿಸಿಬಿಡುವ ಪ್ರಕರಣಗಳನ್ನು ಗುರುತಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಅನಗತ್ಯ ಬಳಕೆಯನ್ನು ತಪ್ಪಿಸಬೇಕು ಮತ್ತು ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.

ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹೊಸ ನೀರಿನ ಸಂಪರ್ಕಗಳನ್ನು ಅನುಮೋದಿಸಲಾಗುವುದು. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು ನೀರಿನ ಮರುಬಳಕೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ BMC ಸೂಚಿಸಿದೆ.

ಅಂದಾಜು 8 ರಿಂದ 10 ದಿನಗಳಲ್ಲಿ ಮುಂಗಾರು ಮುಂಬೈನಲ್ಲಿ ಪ್ರವೇಶಿಸುವ ಸಾಧ್ಯತೆಯಿದ್ದು, ಅಲ್ಲಿಯವರೆಗೆ ಜನರು ಉಳಿತಾಯದ ಬದುಕಿಗೆ ಸಿದ್ಧರಾಗಬೇಕಾಗಿದೆ. BMC ಈ ನಿರ್ಬಂಧಗಳನ್ನು ಮಳೆ ಸುರಿಯುವವರೆಗೆ ಅಥವಾ ಜಲಾಶಯಗಳ ಮಟ್ಟ ಸುಧಾರಿಸುವವರೆಗೆ ಮುಂದುವರಿಸಲಿದೆ.

Exit mobile version