ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಸಣ್ಣ ಮಕ್ಕಳ ಜಗಳ ತಡೆಯಲು ಮುಂದಾದ ಮಹಿಳೆಯೊಬ್ಬರ ಜೀವವೇ ಕೊನೆಗೊಂಡಿರುವ ದಾರುಣ ಘಟನೆ ನಡೆದಿದೆ. ಸುನೀತಾ ಎಂಬ ಮಹಿಳೆ, ತನ್ನ ಮೊಮ್ಮಗ ಮತ್ತು ಇತರ ಮಕ್ಕಳ ನಡುವಿನ ಜಗಳವನ್ನು ತಡೆಯಲು ಹೋದಾಗ, ವಿಷಯ ಗಂಭೀರವಾಗಿ ತಿರುಗಿ, ಹಿಂಸಾತ್ಮಕ ಘರ್ಷಣೆಯಲ್ಲಿ ಕೊಲೆಯಾಗಿದ್ದಾಳೆ.
ಸುನೀತಾ ತನ್ನ ಮೊಮ್ಮಗನೊಂದಿಗೆ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೊಮ್ಮಗನೊಬ್ಬ ನೀರು ತರಲು ಹೋದಾಗ ಇತರ ಮಕ್ಕಳೊಂದಿಗೆ ಜಗಳವಾಡಿದ್ದಾನೆ. ಈ ಸಣ್ಣ ವಿಷಯ ದೊಡ್ಡವರಿಗೆ ತಲುಪಿ, ವಾಗ್ವಾದ ತೀವ್ರಗೊಂಡು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಸೀತಾಪುರ ಜಿಲ್ಲೆಯ ಸಿಧೌಲಿಯ ರಾಜ್ಕುಮಾರ್, ರಾಮ್ಕಿಶೋರ್ ಮತ್ತು ಕಮಲಾಪುರದ ರಾಮ್ಭರೋಸ್ ಎಂಬವರು ಸುನೀತಾ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಬಳಿಕ ಇಟ್ಟಿಗೆಯಿಂದ ಪದೇ ಪದೇ ಹೊಡೆದಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡ ಸುನೀತಾರನ್ನು ರಾಮಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆಯ ನಂತರ ಆರೋಪಿಗಳಾದ ರಾಜ್ಕುಮಾರ್, ರಾಮ್ಕಿಶೋರ್ ಮತ್ತು ರಾಮ್ಭರೋಸ್ ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರಂಬಾ ಕಾಲುವೆ ಸೇತುವೆಯ ಬಳಿ ಅವರನ್ನು ಬಂಧಿಸಿದ್ದಾರೆ.
ಸುನೀತಾ ಅವರ ಪತಿ ಖೇಲವಾನ್ ಮಾಂಝಿ ಅವರ ದೂರಿನ ಆಧಾರದ ಮೇಲೆ ಇಟೌಂಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಉತ್ತರ ವಲಯ ಡಿಸಿಪಿ ಗೋಪಾಲ್ ಚೌಧರಿ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳು ಒಂದೇ ಇಟ್ಟಿಗೆ ಫ್ಯಾಕ್ಟರಿಯ ಕಾರ್ಮಿಕರಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.