ಜೆನಿತ್ ಜಲಪಾತದಲ್ಲಿ ಜಲಪ್ರಳಯ: 100ಕ್ಕೂ ಹೆಚ್ಚು ಪ್ರವಾಸಿಗರ ರೋಚಕ ರಕ್ಷಣೆ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆ ನಡುವೆ ಜೆನಿತ್ ಜಲಪಾತದಲ್ಲಿ ಸಂಭವಿಸಿದ ಆಕಸ್ಮಿಕ ಜಲಪ್ರಳಯದಂತ ಪರಿಸ್ಥಿತಿ ನೂರಕ್ಕೂ ಹೆಚ್ಚು ಪ್ರವಾಸಿಗರನ್ನು ಭೀತಿಗೆ ತಳ್ಳಿದ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ನೀರಿನ ಮಟ್ಟ ಏರಿದ ಪರಿಣಾಮ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಹಲವು ಕುಟುಂಬಗಳು ಮಧ್ಯೆ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಆತಂಕದಿಂದ ಚೀರಾಡಿದ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಪ್ರವಾಸಕ್ಕೆ ಬಂದಿದ್ದ ಜನರಿಗೆ ಇದು ಮರೆಯಲಾಗದ ಭಯಾನಕ ಅನುಭವವಾಗಿದ್ದು, ಸ್ಥಳೀಯರ ಸಮಯೋಚಿತ ನೆರವಿನಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ಮಾಹಿತಿಯ ಪ್ರಕಾರ, ರಾಯಗಢ ಜಿಲ್ಲೆಯ ಪ್ರಸಿದ್ಧ ಜೆನಿತ್ ಜಲಪಾತಕ್ಕೆ ವಾರಾಂತ್ಯದ ಹಿನ್ನೆಲೆ ಅನೇಕ ಪ್ರವಾಸಿಗರು ಭೇಟಿ ನೀಡಿದ್ದರು. ಮಳೆಗಾಲದ ಸೊಬಗು ನೋಡುವ ಉದ್ದೇಶದಿಂದ ಕುಟುಂಬ ಸಮೇತ ಬಂದಿದ್ದವರು ಜಲಪಾತದ ಸುತ್ತಮುತ್ತ ಸಮಯ ಕಳೆಯುತ್ತಿದ್ದರು. ಆದರೆ ಮೇಲ್ಭಾಗದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಕೆಲವೇ ಕ್ಷಣಗಳಲ್ಲಿ ಜಲಪಾತದ ನೀರಿನ ಹರಿವು ಉಗ್ರ ರೂಪ ತಾಳಿತು. ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಿದ ಪರಿಣಾಮ ಜಲಪಾತದ ಕಲ್ಲುಗಳು, ದಾಟುವ ದಾರಿಗಳು ಹಾಗೂ ಸುತ್ತಲಿನ ಭಾಗಗಳು ನೀರಿನಲ್ಲಿ ಮುಳುಗತೊಡಗಿದವು.

ಈ ವೇಳೆ ಅಲ್ಲಿದ್ದ ಅನೇಕ ಪ್ರವಾಸಿಗರು ಯಾವ ದಿಕ್ಕಿಗೆ ತೆರಳಬೇಕು ಎಂಬುದೇ ಗೊತ್ತಾಗದೆ ಪರದಾಡಿದರು. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೆಚ್ಚು ಆತಂಕಕ್ಕೊಳಗಾದರು. ಕೆಲವರು ಕಲ್ಲಿನ ಮೇಲೆಯೇ ಸಿಲುಕಿಕೊಂಡರೆ, ಇನ್ನೂ ಕೆಲವರು ವೇಗವಾಗಿ ಹರಿಯುತ್ತಿದ್ದ ನೀರಿನ ನಡುವೆ ಸಿಕ್ಕಿಹಾಕಿಕೊಂಡರು. ಸ್ವಲ್ಪ ಯಾಮಾರಿದ್ದರೂ ಹಲವು ಕುಟುಂಬಗಳು ನೀರಿನ ಹೊಳೆಯೊಡನೆ ಕೊಚ್ಚಿ ಹೋಗುವ ಅಪಾಯ ಎದುರಿಸಬೇಕಾಗಿತ್ತು. ಈ ದೃಶ್ಯ ಕಂಡ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿದರು.

ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಹಗ್ಗಗಳನ್ನು ತರಿಸಿ ಪ್ರವಾಸಿಗರ ಕಡೆಗೆ ಎಸೆದು, ಒಬ್ಬೊಬ್ಬರಾಗಿ ಸುರಕ್ಷಿತ ಸ್ಥಳಕ್ಕೆ ಕರೆತಂದರು. ಕೆಲವರು ನೀರಿನ ಹೊಳೆಯ ಮಧ್ಯೆ ನಿಂತು ಮಾನವ ಸರಪಳಿ ರಚಿಸಿ ಜನರನ್ನು ದಾಟಿಸಿದರು. ಮಕ್ಕಳನ್ನು ಕೈಯಲ್ಲಿ ಎತ್ತಿಕೊಂಡು, ಮಹಿಳೆಯರಿಗೆ ಧೈರ್ಯ ತುಂಬುತ್ತಾ, ವೃದ್ಧರನ್ನು ಹಿಡಿದುಕೊಂಡು ಹೊರತೆಗೆದ ರೀತಿ ನಿಜಕ್ಕೂ ರೋಚಕವಾಗಿತ್ತು. ಸುಮಾರು 100ಕ್ಕೂ ಹೆಚ್ಚು ಪ್ರವಾಸಿಗರನ್ನು ಹೀಗೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆ ಮತ್ತೆ ಮಳೆಗಾಲದ ಪ್ರವಾಸದ ಅಪಾಯಗಳನ್ನು ನೆನಪಿಸಿದೆ. ಜಲಪಾತ, ನದಿ, ಅಣೆಕಟ್ಟು ಪ್ರದೇಶಗಳಲ್ಲಿ ಹವಾಮಾನ ಕ್ಷಣಾರ್ಧದಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಮೇಲ್ಭಾಗದಲ್ಲಿ ಮಳೆ ಸುರಿದರೂ ಕೆಳಭಾಗದಲ್ಲಿ ಏಕಾಏಕಿ ನೀರಿನ ಮಟ್ಟ ಏರಬಹುದು. ಆದ್ದರಿಂದ ಮುನ್ನೆಚ್ಚರಿಕೆ ಇಲ್ಲದೆ ಇಂತಹ ಸ್ಥಳಗಳಿಗೆ ತೆರಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸ್ಥಳೀಯ ಆಡಳಿತವೂ ಪ್ರವಾಸಿಗರು ಮಳೆಗಾಲದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು, ಅಪಾಯದ ಸೂಚನೆಗಳನ್ನು ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದೆ.

Exit mobile version