ಸಾಲಬಾಧೆ: ವಿಷ ಸೇವಿಸಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

Untitled design 2025 05 27t082329.923

ಹರಿಯಾಣ: ಸಾಲದ ಹೊರೆ ತಾಳಲಾರದೇ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ. ಒಂದೇ ಕುಟುಂಬದ ಏಳು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಶವಗಳು ಪಂಚಕುಲದ ಸೆಕ್ಟರ್ 27 ರ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿವೆ. ಈ ದುರಂತಕ್ಕೆ  ಕುಟುಂಬದ ಮೇಲಿನ ಭಾರೀ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟ ಕಾರಣವೆಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಡೆಹ್ರಾಡೂನ್‌ನ ನಿವಾಸಿಯಾದ 42 ವರ್ಷದ ಪ್ರವೀಣ್ ಮಿತ್ತಲ್, ತಮ್ಮ ಕುಟುಂಬದೊಂದಿಗೆ ಪಂಚಕುಲದ ಬಾಗೇಶ್ವರ ಧಾಮದಲ್ಲಿ ನಡೆದ ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ನಂತರ, ಕುಟುಂಬವು ಡೆಹ್ರಾಡೂನ್‌ಗೆ ಹಿಂದಿರುಗುವಾಗ ಈ ದುರಂತ ಸಂಭವಿಸಿದೆ. ಮೃತರಲ್ಲಿ ಪ್ರವೀಣ್ ಮಿತ್ತಲ್, ಅವರ ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಮತ್ತು ಪ್ರವೀಣ್‌ರ ತಂದೆ-ತಾಯಿ ಸೇರಿದಂತೆ ಒಟ್ಟು ಏಳು ಜನರಿದ್ದಾರೆ.

ಸ್ಥಳೀಯರು ಮೊದಲು ಕಾರಿನೊಳಗೆ ಕುಟುಂಬ ಸದಸ್ಯರು ಹೆಣಗಾಡುತ್ತಿರುವುದನ್ನು ಗಮನಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಕಾರಿನ ಬಾಗಿಲನ್ನು ಒಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕುಟುಂಬ ಸದಸ್ಯರನ್ನು ರಕ್ಷಿಸಲು ಪ್ರಯತ್ನಿಸಿದರು. ತಕ್ಷಣವೇ ಅವರನ್ನು ಪಂಚಕುಲದ ಖಾಸಗಿ ಆಸ್ಪತ್ರೆ ಹಾಗೂ ನಾಗರಿಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪಿದಾಗ ವೈದ್ಯರು ಎಲ್ಲರೂ ಮೃತಪಟ್ಟಿರುವುದಾಗಿ ತಿಳಿಸಿದರು.

ಪೊಲೀಸರ ಆರಂಭಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯೆ ಪ್ರಕರಣವೆಂದು ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಹಿಮಾದ್ರಿ ಕೌಶಿಕ್, “ವಿಧಿವಿಜ್ಞಾನ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಲಾಗುವುದು. ಈ ಘಟನೆಯ ಸಂಪೂರ್ಣ ಸತ್ಯವನ್ನು ಕಂಡುಹಿಡಿಯಲು ತನಿಖೆ ತೀವ್ರಗೊಳಿಸಲಾಗಿದೆ,” ಎಂದು ಹೇಳಿದ್ದಾರೆ.

Exit mobile version