ಕೋಲ್ಕತ್ತಾ: ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು 5 ಮಂದಿ ಮೃತಪಟ್ಟಿದ್ದು, 23 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಅವಘಡ ಪಶ್ಚಿಮ ಬಂಗಾಳದ ಕೋಲ್ಕತ್ತಾದ ತಾರತಲಾ ಪ್ರದೇಶದಲ್ಲಿಪಶ್ಚಿಮ ಬಂಗಾಳದ ಕೋಲ್ಕತ್ತಾದ ತಾರತಲಾ ಪ್ರದೇಶದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಘಟನೆ ಹೇಗೆ ನಡೆಯಿತು?
ಪಶ್ಚಿಮ ಕೋಲ್ಕತ್ತಾದ ಬ್ರೇಸ್ ಬ್ರಿಡ್ಜ್ ಸಮೀಪದ ಟ್ರಾನ್ಸ್ಪೋರ್ಟ್ ಡಿಪೋ ರಸ್ತೆಯಲ್ಲಿರುವ ನಿರ್ಮಾಣ ಹಂತದ ಗೋದಾಮಿನ ಮೇಲ್ಛಾವಣಿ ಇಂದು ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ನಡೆದ ವೇಳೆ ಸುಮಾರು 50-60 ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮೇಲ್ಛಾವಣಿ ಕುಸಿದ ತಕ್ಷಣ ಹಲವಾರು ಕಾರ್ಮಿಕರು ಭಾರೀ ಕಬ್ಬಿಣದ ಕಂಬಗಳು ಮತ್ತು ಕಟ್ಟಡ ಸಾಮಗ್ರಿಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೋಲ್ಕತ್ತಾ ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರೀ ಕಬ್ಬಿಣದ ಕಂಬಗಳು ಹಾಗೂ ಕಟ್ಟಡದ ವಸ್ತುಗಳನ್ನು ಕ್ರೇನ್ಗಳ ಸಹಾಯದಿಂದ ತೆರವುಗೊಳಿಸಲಾಗುತ್ತಿದೆ. ಸಿಲುಕಿರುವ ಕಾರ್ಮಿಕರನ್ನು ಹೊರೆತೆಗಿಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಇಲ್ಲಿಯವರೆಗೆ 13 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ದುರಂತದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದು, ಸುಮಾರು 23 ಮಂದಿ ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು ಎಷ್ಟು ಕಾರ್ಮಿಕರು ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವಘಡದ ಬಳಿಕ ಕೆಲವು ಕಾರ್ಮಿಕರು ತಾವಾಗಿಯೇ ಹೊರಗೆ ಬಂದಿದ್ದು, ಇನ್ನು ಹಲವರು ಸಿಲುಕಿಕೊಂಡಿರುವ ಸಾಧ್ಯತೆಯಿದೆ.
ಕಾರಣ ತನಿಖೆ ಆರಂಭ
ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣವು ಇನ್ನೂ ತಿಳಿದುಬಂದಿಲ್ಲ. ಹೆಚ್ಚುವರಿ ತನಿಖೆಗೆ ಅಧಿಕಾರಿಗಳು ತಂಡವನ್ನು ರಚಿಸಿದ್ದಾರೆ. ಸರ್ಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು 15 ಪೊಲೀಸ್ ಸಿಬ್ಬಂದಿ ಮತ್ತು 50 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೆಸಿಬಿ ಯಂತ್ರಗಳು, ಕ್ರೇನ್ಗಳು ಮತ್ತು ಹ್ಯಾಂಡ್ ಟೂಲ್ಸ್ ಮೂಲಕ ಅವಶೇಷಗಳನ್ನು ಸ್ಥಳಾಂತರಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಸರ್ಚ್ ಲೈಟ್ಗಳ ಸಹಾಯದಿಂದ ಕಾರ್ಯಾಚರಣೆ ಮುಂದುವರಿದಿದೆ.
