ಆತನದು 5 ಕೊಲೆ, ಆಕೆಯದ್ದು1: ಜೀವಾವಧಿ ಶಿಕ್ಷೆಗೊಳಗಾದ ಇಬ್ಬರು ಅಪರಾಧಿಗಳಿಗೆ ಮದುವೆಯಾಗಲು ಕೋರ್ಟ್ ಪೆರೋಲ್

BeFunky collage (38)

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳ ನಡುವೆ ಜೈಲಿನೊಳಗೇ ಪ್ರೀತಿ ಮೂಡಿ ಮದುವೆಯಾಗುವ ನಿರ್ಧಾರಕ್ಕೆ ರಾಜಸ್ಥಾನ ಹೈಕೋರ್ಟ್ ಸಹಕಾರ ನೀಡಿದೆ. ಭೀಕರ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ 34 ವರ್ಷದ ಪ್ರಿಯಾ ಸೇಠ್ ಮತ್ತು 29 ವರ್ಷದ ಹನುಮಾನ್ ಪ್ರಸಾದ್ ಎಂಬವರು ಜೈಲಿನಲ್ಲೇ ಪರಿಚಯವಾಗಿ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಈ ಜೋಡಿಯ ಮದುವೆಗಾಗಿ ಹೈಕೋರ್ಟ್ 15 ದಿನಗಳ ಪೆರೋಲ್ ಮಂಜೂರು ಮಾಡಿದ್ದು, ಈ ನಿರ್ಧಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಿಯಾ ಸೇಠ್ 2018ರಲ್ಲಿ ಜೈಪುರದಲ್ಲಿ ಡೇಟಿಂಗ್ ಆ್ಯಾಪ್ ಮೂಲಕ ಪರಿಚಯವಾದ ದುಷ್ಯಂತ್ ಶರ್ಮಾ (27) ಎಂಬುವವನ್ನು ಬಂಧಿಸಿ ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಆಕೆಯ ಬಾಡಿಗೆ ಫ್ಲಾಟ್‌ನಲ್ಲಿ ದುಷ್ಯಂತ್‌ನ್ನು ಬಂಧಿಸಿ ಕೊಲೆ ಮಾಡಿದ್ದ ಆಕೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇನ್ನು ಹನುಮಾನ್ ಪ್ರಸಾದ್ ಇಬ್ಬರಿಗಿಂತಲೂ ಭಯಾನಕ ಅಪರಾಧಿ. 2017ರಲ್ಲಿ ಅಲ್ವಾರ್ ಜಿಲ್ಲೆಯಲ್ಲಿ ವಿವಾಹಿತ ಮಹಿಳೆ ಸಂತೋಷ್ ಶರ್ಮಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ ಆತ, ಆಕೆಯ ಗಂಡ, ಮೂವರು ಗಂಡು ಮಕ್ಕಳು ಮತ್ತು ಸೋದರಳಿಯನನ್ನು ಸೇರಿ ಒಟ್ಟು ಐವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿಯಾಗಿದ್ದಾನೆ. ಈ ಭೀಕರ ಕೃತ್ಯಕ್ಕೆ ಆತನಿಗೂ 2023ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇಬ್ಬರೂ ಸಂಗನೇರ್‌ನ ತೆರೆದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಸುಮಾರು ಒಂದು ವರ್ಷದಿಂದ ಪರಸ್ಪರ ಪರಿಚಯವಾಗಿ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದರು. ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ ಇಬ್ಬರೂ ಪೆರೋಲ್ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜನವರಿ 7ರಂದು ಹೈಕೋರ್ಟ್ ಪೆರೋಲ್ ಸಮಿತಿಗೆ ಏಳು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಆ ಆದೇಶದಂತೆ ಸಮಿತಿ ಇಬ್ಬರಿಗೂ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಹನುಮಾನ್ ಪ್ರಸಾದ್‌ನ ಹುಟ್ಟೂರಾದ ಅಲ್ವಾರ್ ಜಿಲ್ಲೆಯ ಬರೋದಮಿಯೊದ ಗ್ರಾಮದಲ್ಲಿ ಇವರ ಮದುವೆ ನಿಗದಿಯಾಗಿದೆ ಎಂದು ತಿಳಿದುಬಂದಿದೆ.

ರಾಜಸ್ಥಾನ ಕೈದಿಗಳ ಮುಕ್ತ ವಾಯು ಶಿಬಿರ ನಿಯಮ 1972ರ ಅಡಿಯಲ್ಲಿ ಆರು ಸದಸ್ಯರ ಸಮಿತಿ ಇಬ್ಬರನ್ನು ತೆರೆದ ಗಾಳಿ ಶಿಬಿರಕ್ಕೆ ವರ್ಗಾಯಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ಈ ಶಿಬಿರದಲ್ಲಿ ಕೈದಿಗಳು ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮರಳಬಹುದು ಎಂಬ ಸೌಲಭ್ಯವಿದೆ.

ಆದರೆ ಈ ನಿರ್ಧಾರಕ್ಕೆ ಕೊಲೆ ಸಂತ್ರಸ್ತರ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಿಯಾ ಸೇಠ್ ಪ್ರಕರಣದ ಸಂತ್ರಸ್ತ ದುಷ್ಯಂತ್ ಶರ್ಮಾ ಕುಟುಂಬದ ವಕೀಲ ಸಂದೀಪ್ ಲೋಹರಿಯಾ, ಪೆರೋಲ್ ಮಂಜೂರಾತಿಗೆ ಸಂತ್ರಸ್ತರ ಕುಟುಂಬಕ್ಕೆ ಮಾಹಿತಿ ನೀಡದೇ ಇರುವುದನ್ನು ಖಂಡಿಸಿ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. “ಇಂತಹ ಭೀಕರ ಅಪರಾಧಿಗಳಿಗೆ ಪೆರೋಲ್ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೈಲಿನೊಳಗೇ ಪ್ರೀತಿ ಬೆಳೆಸಿ ಮದುವೆಯಾಗುತ್ತಿರುವ ಈ ಜೋಡಿಯ ನಿರ್ಧಾರ ನ್ಯಾಯ ವ್ಯವಸ್ಥೆಯ ಮಾನವೀಯ ಮುಖವನ್ನು ತೋರಿಸುತ್ತದೆಯೇ ಅಥವಾ ಸಂತ್ರಸ್ತರ ಕುಟುಂಬಗಳಿಗೆ ಅನ್ಯಾಯವೇ? ಈ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

Exit mobile version