ಭಾರತ-ಫ್ರಾನ್ಸ್ ಸ್ನೇಹ ಮತ್ತಷ್ಟು ಗಟ್ಟಿ: 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದ ಪ್ರಧಾನಿ ಮೋದಿ

Untitled design 2026 02 17T224121.393

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಭಾರತ ಭೇಟಿಗೆ ಆಗಮಿಸಿದ್ದು, ಭಾರತ–ಫ್ರಾನ್ಸ್ ಸಂಬಂಧಕ್ಕೆ ಹೊಸ ಉತ್ತೇಜನ ದೊರಕಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮ್ಯಾಕ್ರನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಭೇಟಿ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಮಧ್ಯಾಹ್ನದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಮುಂಬೈನ ಲೋಕಭವನದಲ್ಲಿ ಭೇಟಿಯಾಗಿ ರಕ್ಷಣಾ, ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಕುರಿತು ವ್ಯಾಪಕ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಕ್ಷಣೆ, ನವೀನತೆ, ವಿದ್ಯಾರ್ಥಿಗಳ ಚಲನಶೀಲತೆ, ಸಂಸ್ಕೃತಿ, ಜೈವಿಕ ತಂತ್ರಜ್ಞಾನ, ನಿರ್ಣಾಯಕ ಖನಿಜಗಳು ಹಾಗೂ ಶುದ್ಧ ಇಂಧನ ಕ್ಷೇತ್ರಗಳಲ್ಲಿ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಇದಲ್ಲದೆ, ಫ್ರಾನ್ಸ್‌ನಿಂದ 114 ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಸ್ತಾವನೆ ಕೂಡ ಪ್ರಮುಖ ಒಪ್ಪಂದಗಳಲ್ಲೊಂದು. ಈ ಹೆಜ್ಜೆ ಭಾರತ–ಫ್ರಾನ್ಸ್ ರಕ್ಷಣಾ ಸಹಕಾರವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಹೇಳಲಾಗಿದೆ. ಉಭಯ ದೇಶಗಳು ವಿಶ್ವಾಸಾರ್ಹ ಮತ್ತು ಉನ್ನತ ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಿವೆ.

ಭೇಟಿಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಮುಂಬೈಗೆ ಸ್ವಾಗತಿಸುವುದು ನನಗೆ ಸಂತೋಷ ತಂದಿದೆ. ಭಾರತ–ಫ್ರಾನ್ಸ್ ನವೀನತೆಯ ವರ್ಷವನ್ನು ಆರಂಭಿಸುವ ಮೂಲಕ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನಪಾಲುದಾರಿಕೆಯಾಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಎಐ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ‘ಇಂಡೋ–ಫ್ರೆಂಚ್ ಸೆಂಟರ್ ಫಾರ್ ಎಐ ಇನ್ ಹೆಲ್ತ್’, ‘ಇಂಡೋ–ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಅಂಡ್ ಟೆಕ್ನಾಲಜಿ’ ಹಾಗೂ ‘ನ್ಯಾಷನಲ್ ಸೆಂಟರ್ ಫಾರ್ ಅಲೈಯನ್ಸ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್’ ಸಂಸ್ಥೆಗಳ ಸ್ಥಾಪನೆ ಘೋಷಿಸಲಾಯಿತು. ಇವು ಕೇವಲ ಸಂಶೋಧನಾ ಕೇಂದ್ರಗಳಲ್ಲ, ಭವಿಷ್ಯದ ತಂತ್ರಜ್ಞಾನ ಮತ್ತು ನವೀನತೆಯನ್ನು ರೂಪಿಸುವ ವೇದಿಕೆಗಳಾಗಿವೆ ಎಂದು ಮೋದಿ ತಿಳಿಸಿದರು.

ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಭಾರತ–ಫ್ರಾನ್ಸ್ ಪಾಲುದಾರಿಕೆ ವಿಶ್ವ ಸ್ಥಿರತೆಗೆ ಶಕ್ತಿಯಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಬಹುಪಕ್ಷೀಯತೆ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಮೃದ್ಧಿ ಸಾಧಿಸಲು ಎರಡೂ ದೇಶಗಳು ಬದ್ಧವಾಗಿವೆ ಎಂದರು.

ಸಾವರ್ಕರ್ ನೆನೆದ ಮೋದಿ

ಪ್ರಧಾನಿ ಮೋದಿ ಫ್ರಾನ್ಸ್‌ನ ಮಾರ್ಸಿಲ್ಲೆ ನಗರದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದರು. ಮೊದಲ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರು ಯುರೋಪಿನಲ್ಲಿ ಕಾಲಿಟ್ಟ ಪ್ರಮುಖ ನಗರ ಮಾರ್ಸಿಲ್ಲೆ ಎಂದು ಅವರು ಹೇಳಿದರು. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಘಟನೆಯನ್ನೂ ಉಲ್ಲೇಖಿಸಿದರು. ಅವರ ಆ ಧೈರ್ಯ ಭಾರತದ ಸ್ವಾತಂತ್ರ್ಯ ಹೋರಾಟದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ನಡೆದ ಎಐ ಶೃಂಗಸಭೆಗೆ ಮ್ಯಾಕ್ರನ್ ನೀಡಿದ ಆಹ್ವಾನವನ್ನು ಸ್ಮರಿಸಿದ ಮೋದಿ, ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಮೂಲಕ ದ್ವಿಪಕ್ಷೀಯ ಸಹಕಾರ ಮತ್ತಷ್ಟು ಬಲವಾಗಲಿದೆ ಎಂದರು.

ಅಧ್ಯಕ್ಷ ಮ್ಯಾಕ್ರನ್ ಮಾತನಾಡಿ, “ನಾಲ್ಕನೇ ಬಾರಿ ಭಾರತಕ್ಕೆ ಆಗಮಿಸಿರುವುದು ಸಂತೋಷ ತಂದಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ವಿಶೇಷ ಮತ್ತು ಗಮನಾರ್ಹವಾಗಿದೆ. ನಮ್ಮ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ಮಹತ್ವದ್ದಾಗಿದೆ” ಎಂದು ಹೇಳಿದರು.

Exit mobile version