ಗುಜರಾತ್‌ನಲ್ಲಿ ಮತ್ತೊಂದು ದುರಂತ: ಸೇತುವೆ ಕುಸಿದು 8 ಮಂದಿ ಸಾವು

Your paragraph text (7)

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಪದ್ರಾದಲ್ಲಿ ನಡೆದ ಭೀಕರ ಸೇತುವೆ ಕುಸಿದಿದ್ದು, ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆಯಲ್ಲಿ ಹಲವರು ಸೇತುವೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ಬೆಳಿಗ್ಗೆ ಸುಮಾರು 7:30 ಗಂಟೆಗೆ  ಸೇತುವೆಯ ಒಂದು ಭಾಗ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.

ಈ ದುರಂತದಲ್ಲಿ ಸೇತುವೆಯ ಒಂದು ಭಾಗ ಕುಸಿದು ಮಹಿಸಾಗರ್ ನದಿಯಲ್ಲಿ ಬಿದ್ದಿದೆ. ಈ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಹಲವಾರು ವಾಹನಗಳು ನೀರಿನೊಳಗೆ ಮುಳುಗಿವೆ. ಘಟನೆಯಲ್ಲಿ ಎರಡು ಟ್ರಕ್‌ಗಳು ಮತ್ತು ಎರಡು ವ್ಯಾನ್‌ಗಳು ಸೇರಿದಂತೆ ಹಲವು ವಾಹನಗಳು ನದಿಯಲ್ಲಿ ಮುಳುಗಿರುವುದಾಗಿ ವರದಿಯಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇದುವರೆಗೆ ನಾಲ್ಕು ಜನರನ್ನು ರಕ್ಷಿಸಲಾಗಿದೆ ಎಂದು ಪದ್ರಾ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಚರಣ್ ತಿಳಿಸಿದ್ದಾರೆ.

ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಕಾರ್ಯದರ್ಶಿ ಪಿಆರ್ ಪಟೇಲಿಯಾ ಅವರು, ಸೇತುವೆಯ ರಚನೆಗೆ ಹಾನಿಯಾಗಿರುವುದು ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ತಜ್ಞರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಸೇತುವೆ ಕುಸಿತದ ನಿಖರ ಕಾರಣವನ್ನು ತನಿಖೆಯ ನಂತರ ತಿಳಿಯಲಿದೆ,” ಎಂದು ಅವರು ಹೇಳಿದ್ದಾರೆ. ತಜ್ಞರ ತಂಡವು ಸೇತುವೆಯ ರಚನೆಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ದುರಂತದ ಕಾರಣವನ್ನು ಕಂಡುಹಿಡಿಯಲು ಶೋಧ ಕಾರ್ಯ ನಡೆಸುತ್ತಿದೆ.

ಗಂಭೀರಾ ಸೇತುವೆಯು ವಡೋದರಾ ಮತ್ತು ಆನಂದ್ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಈ ಸೇತುವೆಯ ಮೇಲೆ ಸಂಚರಿಸುತ್ತವೆ. ಈ ದುರಂತದಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸ್ಥಳೀಯ ಆಡಳಿತವು ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (NDRF), ಮತ್ತು ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ.

 ರಾಜ್ಯ ಸರಕಾರವು ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದು, ಸೇತುವೆಯ ನಿರ್ಮಾಣದ ಗುಣಮಟ್ಟ ಮತ್ತು ನಿರ್ವಹಣೆಯ ಕೊರತೆಯನ್ನು ಪರಿಶೀಲಿಸಲಾಗುವುದು.

Exit mobile version