ಅಬಕಾರಿ ಹಗರಣ: ಕೇಜ್ರಿವಾಲ್ ಬಿಡುಗಡೆ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ಸಿಬಿಐ

Untitled design 2026 02 27T201413.349

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 23 ಆರೋಪಿಗಳನ್ನು ಕೆಳ ನ್ಯಾಯಾಲಯವು ಬಿಡುಗಡೆಗೊಳಿಸಿ ಎಂದು ಆದೇಶಿಸಿದೆ. ಆದರೆ, ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕೇಂದ್ರ ತನಿಖಾ ದಳ (CBI) ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಮೇಲ್ಮನವಿ ಸಲ್ಲಿಸಿದೆ.

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿ, ತನಿಖಾ ಸಂಸ್ಥೆ ಸಲ್ಲಿಸಿದ್ದ ಆರೋಪಪಟ್ಟಿಯನ್ನು ತಿರಸ್ಕರಿಸಿತು. ಪ್ರಮುಖ ಆರೋಪಿಗಳ ವಿರುದ್ಧ ಭ್ರಷ್ಟಾಚಾರದ ಬಲವಾದ ಸಾಕ್ಷ್ಯಗಳಿಲ್ಲ ಎಂಬ ಕಾರಣ ನೀಡಿ ಎಲ್ಲರನ್ನೂ ಬಿಡುಗಡೆಗೊಳಿಸಿದೆ. ಈ ತೀರ್ಪನ್ನು ಅರವಿಂದ್ ಕೇಜ್ರಿವಾಲ್ ಸತ್ಯಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ಆಮ್ ಆದ್ಮಿ ಪಕ್ಷದ (AAP) ನಾಯಕರು ಸತ್ಯಮೇವ ಜಯತೇ ಎಂಬ ಘೋಷಣೆಗಳೊಂದಿಗೆ ವಿಜಯೋತ್ಸವ ಆಚರಿಸಿದರು.

ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ: ಪ್ರಮುಖ ವಾದಗಳೇನು ?

ಖುಲಾಸೆ ಆದೇಶದಿಂದ ದೆಹಲಿ ಸರ್ಕಾರಕ್ಕೆ ನೆಮ್ಮದಿ ಸಿಕ್ಕ ಬೆನ್ನಲ್ಲೇ ಸಿಬಿಐ ಹೈಕೋರ್ಟ್ ಮೊರೆ ಹೋಗಿದೆ. ಕೆಳ ನ್ಯಾಯಾಲಯದ ತೀರ್ಪು ದೋಷಪೂರಿತವಾಗಿದೆ ಎಂದು ವಾದಿಸಿರುವ ಸಿಬಿಐ, ಆರೋಪಿಗಳು ಹಗರಣಕ್ಕೆ ಸಂಬಂಧಿಸಿದ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದ್ದಾರೆ. ಪ್ರಕರಣದಲ್ಲಿ ಭ್ರಷ್ಟಾಚಾರದ ಸ್ಪಷ್ಟ ಕುರುಹುಗಳಿದ್ದು, ಕೆಳ ನ್ಯಾಯಾಲಯವು ಆರೋಪಪಟ್ಟಿಯನ್ನು ಸರಿಯಾಗಿ ಪರಿಗಣಿಸಿಲ್ಲ.ಹೀಗಾಗಿ ಹೈಕೋರ್ಟ್ ಈ ಕೂಡಲೇ ಬಿಡುಗಡೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಿಬಿಐ ಮನವಿ ಮಾಡಿದೆ.

ನ್ಯಾಯಾಲಯದ ತೀರ್ಪಿನ ನಂತರ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷ, ನಮ್ಮ ನಾಯಕರ ಹೆಸರು ಕೆಡಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪಿತೂರಿ ನಡೆಸಿದ್ದಾರೆ. ಇಡೀ ಸರ್ಕಾರಿ ಯಂತ್ರದ ಶಕ್ತಿ ಬಳಸಿದರೂ ಒಂದು ಪೈಸೆ ಭ್ರಷ್ಟಾಚಾರವನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ನಮ್ಮ ಪಕ್ಷವು ಅತ್ಯಂತ ಪ್ರಾಮಾಣಿಕ ಎಂಬುದು ಈಗ ಸಾಬೀತಾಗಿದೆ ಎಂದು ಹೇಳಿದೆ.

ಇನ್ನೊಂದೆಡೆ, ಸಿಬಿಐ ಮೇಲ್ಮನವಿ ಸಲ್ಲಿಸಿರುವುದರಿಂದ ಹಗರಣದ ಕಳಂಕ ಇನ್ನೂ ಕೇಜ್ರಿವಾಲ್ ಅವರಿಂದ ದೂರವಾಗಿಲ್ಲ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Exit mobile version