ಬೆಂಗಳೂರು: 3 ವರ್ಷದ ಪ್ರೀತಿಯನ್ನು (Love) ಬಿಟ್ಟು ಬೇರೆ ಮದುವೆಗೆ (Marriage) ಒಪ್ಪಿಕೊಂಡ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಯುವಕ ತಾನೂ ಆತ್ಮಹತ್ಯೆಗೆ (Suicide Attempt) ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru) ವರ್ತೂರಿನಲ್ಲಿ (Varthuru) ನಡೆದಿದೆ.
ಯಾರು ಆರೋಪಿ, ಯಾರು ಬಲಿಪಶು?
ಕೋಲಾರದ (Kolar) ನರಸಾಪುರ ಮೂಲದ ಯುವಕ ಬಂಡೆ ನವಾಜ್ (18) ತನ್ನ ಲವ್ವರ್ ಆಗಿದ್ದ ಪಶ್ಚಿಮ ಬಂಗಾಳ (West Bengal) ಮೂಲದ ನಂದಿನಿ ದಾಸ್ (18) ಗೆ ಚಾಕುವಿನಿಂದ ಇರಿದಿದ್ದಾನೆ. ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದರು. ಆದರೆ, ಇಬ್ಬರ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ (Family Disapproval) ಸಿಗದ ಕಾರಣ ಯುವತಿ ನವಾಜ್ನಿಂದ ದೂರವಿದ್ದು, ಬೇರೆ ಮದುವೆಗೆ ಒಪ್ಪಿಗೆ ನೀಡಿದ್ದಳು. ಇದರಿಂದ ಇಬ್ಬರ ನಡುವೆ ಗಲಾಟೆಯಾಗಿತ್ತು.
ಘಟನೆ ಹೇಗೆ ನಡೆಯಿತು?
ಯಾರೂ ಇಲ್ಲದ ವೇಳೆ ನವಾಜ್ ಯುವತಿಯ ಮನೆಗೆ ನುಗ್ಗಿ, ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ, ಕೈ, ತೊಡೆ (Neck, Hand, Thigh) ಸೇರಿದಂತೆ ಹಲವು ಭಾಗಗಳಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನೂ ತನ್ನ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸ್ಥಳೀಯ ಮನೆ ಮಾಲೀಕ ಕೃಷ್ಣ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. “ಬೆಳಗ್ಗೆ 9.30 ಕ್ಕೆ ಈ ಘಟನೆ ನಡೆದಿದೆ. ಆ ಹುಡುಗಿಗೆ ಮೊದಲು ಚಾಕು ಇರಿದು ಬಾಗಿಲು ಹಾಕಿಕೊಂಡಿದ್ದ. ನಾನು ಹೋಗಿ ಬಾಗಿಲು ತೆಗೆಯುವಂತೆ ಹೇಳಿದಾಗ ತೆಗೆಯಲಿಲ್ಲ. ‘ಯಾರಾದರೂ ಹತ್ತಿರ ಬಂದ್ರೆ ಕುತ್ತಿಗೆ ಕೊಯ್ದುಕೊಂಡು ಬಿಡ್ತಿನಿ’ ಎಂದು ಚಾಕು ಇಟ್ಟುಕೊಂಡು ನಿಂತಿದ್ದ. ಆಮೇಲೆ ಸಿಲಿಂಡರ್ ತಂದು ಅದನ್ನು ಓಪನ್ ಮಾಡಿ ಬೆಂಕಿ ಹಾಕೋಕೆ ರೆಡಿ ಮಾಡುತ್ತಿದ್ದ. ತಕ್ಷಣ ಪೊಲೀಸರಿಗೆ ಕರೆ ಮಾಡಿದ್ವಿ” ಎಂದು ಅವರು ವಿವರಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ
ವಿಷಯ ತಿಳಿಯುತ್ತಿದ್ದಂತೆ ವರ್ತೂರು ಪೊಲೀಸರು (Varthuru Police) ಸ್ಥಳಕ್ಕೆ ಆಗಮಿಸಿ ಬಾಗಿಲು ತೆಗೆಸಿದ್ದಾರೆ. ಆಷ್ಟರಲ್ಲೇ ಯುವತಿಗೆ ಚುಚ್ಚಿ, ತಾನು ಕುತ್ತಿಗೆಗೆ ಚಾಕು ಇರಿದುಕೊಂಡಿದ್ದನು. ಇಬ್ಬರೂ ರಕ್ತದ ಮಡುವಿನಲ್ಲಿ (Pool of Blood) ಒದ್ದಾಡುತ್ತಿದ್ದರು. ಕಿರುಚಾಟ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆಸ್ಪತ್ರೆಗೆ ದಾಖಲು
ಸದ್ಯ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ನಂದಿನಿ ದಾಸ್ ಅವರ ಸ್ಥಿತಿ ಗಂಭೀರವಾಗಿದ್ದು, ಆಕೆಗೆ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ನವಾಜ್ ಕೂಡ ಆಸ್ಪತ್ರೆಯಲ್ಲಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ
ಕಳೆದ ಎಂಟು ತಿಂಗಳಿನಿಂದ ಯುವತಿ ಮತ್ತು ಆಕೆಯ ಕುಟುಂಬದವರು ವರ್ತೂರಿನಲ್ಲಿ ವಾಸವಿದ್ದರು. ಮನೆಯವರು ಈ ಸಂಬಂಧಕ್ಕೆ ಒಪ್ಪದ ಕಾರಣ ಯುವತಿಯನ್ನು ಬೇರೆಯವರೊಂದಿಗೆ ಮದುವೆ ಮಾಡಲು ಪ್ಲಾನ್ ಮಾಡಿದ್ದರು. ಈ ವಿಚಾರ ತಿಳಿದ ನವಾಜ್ ಆಕ್ರೋಶಕೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾನೆ. ‘ಮನೆಯಲ್ಲಿ ಒಪ್ಪಲ್ಲ, ಮನೆಯವರು ಹೇಳಿದಂತೆ ಕೇಳುತ್ತೇನೆ’ ಎಂದು ಯುವತಿ ಹೇಳಿದಾಗ ಆಕ್ರೋಶದಿಂದ ಚಾಕು ಇರಿದಿರುವುದಾಗಿ ತಿಳಿದುಬಂದಿದೆ.
ಪೊಲೀಸ್ ತನಿಖೆ
ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
