ದಿಢೀರ್ ಹಾಸ್ಟೆಲ್ ಪರಿಶೀಲನೆ ನಡೆಸಿದ ಸಿಎಂ ವಿಜಯ್: ವಿದ್ಯಾರ್ಥಿಗಳ ದೂರುಗಳಿಗೆ ಸ್ಪಂದನೆ..!

ಸ್ಪಂದನೆ

ಚೆನ್ನೈ,(ಜುಲೈ.18) : ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಸೈದಾಪೇಟೆಯಲ್ಲಿರುವ ಎಂಸಿ ರಾಜಾ ಆದಿ ದ್ರಾವಿಡರ್ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಹಾಸ್ಟೆಲ್‌ಗೆ ಆಗಮಿಸಿದ ಮುಖ್ಯಮಂತ್ರಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಪರಿಶೀಲನೆ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ದೂರಿದರು. ಊಟದಲ್ಲಿ ಹುಳುಗಳು ಮತ್ತು ಕೀಟಗಳು ಕಂಡುಬರುತ್ತಿವೆ ಎಂದು ಆರೋಪಿಸಿದ ಅವರು, ಕಳೆದ ವರ್ಷ ಪ್ರತಿಭಟನೆ ನಡೆಸಿದ ಬಳಿಕ ಕೆಲ ದಿನಗಳ ಕಾಲ ಮಾತ್ರ ಆಹಾರದ ಗುಣಮಟ್ಟ ಸುಧಾರಿಸಿತ್ತು, ನಂತರ ಮತ್ತೆ ಹಳೆಯ ಪರಿಸ್ಥಿತಿ ಮುಂದುವರಿದಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನೀರಿನ ಕೊರತೆ, ಗಲೀಜಾದ ಶೌಚಾಲಯಗಳು, ಸಿಬ್ಬಂದಿ ಅಭಾವ, ಅಡುಗೆಮನೆಯಲ್ಲಿ ನೈರ್ಮಲ್ಯದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು. ಅಡುಗೆ ಸಿಬ್ಬಂದಿ ಆಹಾರ ತಯಾರಿಸುವ ವೇಳೆ ಕೈಗ್ಲೌಸ್ ಮತ್ತು ಕ್ಯಾಪ್‌ಗಳನ್ನು ಬಳಸುವುದಿಲ್ಲ ಎಂದು ಕೂಡ ಆರೋಪಿಸಿದರು.

ಹಾಸ್ಟೆಲ್‌ನಲ್ಲಿ ಅಳವಡಿಸಬೇಕಾಗಿದ್ದ 64 ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಭದ್ರತಾ ಕೊರತೆಯಿಂದ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಟಿಎನ್‌ಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು, ರಾತ್ರಿ 9.30ರ ಬಳಿಕ ಹಾಸ್ಟೆಲ್ ಗೇಟ್‌ಗಳನ್ನು ಮುಚ್ಚಲಾಗುತ್ತದೆ ಎಂದು ದೂರಿದರು. ಉದ್ಯೋಗ ಅಥವಾ ಕೋಚಿಂಗ್ ತರಗತಿಗಳಿಂದ ತಡವಾಗಿ ಬರುವ ವಿದ್ಯಾರ್ಥಿಗಳು ಹೊರಗಡೆ ಕಾಯಬೇಕಾಗುತ್ತದೆ ಎಂದು ಹೇಳಿದರು.

ಕೆಲವು ವಾರ್ಡನ್‌ಗಳು ಮತ್ತು ವಾಚ್‌ಮೆನ್‌ಗಳು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಮುಖ್ಯಮಂತ್ರಿಗೆ ವಿವರಿಸಿದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ ವಿಜಯ್, ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ತಮ್ಮೊಂದಿಗೆ ಇದ್ದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜೊತೆಗೆ ಹಾಸ್ಟೆಲ್‌ನ ವಿವಿಧ ಸೌಲಭ್ಯಗಳು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸಿದರು.

ಸೈದಾಪೇಟೆಯಲ್ಲಿರುವ ಈ 10 ಅಂತಸ್ತಿನ ವಿದ್ಯಾರ್ಥಿ ನಿಲಯವನ್ನು ಆದಿ ದ್ರಾವಿಡ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ವತಿಯಿಂದ ಹಿಂದಿನ ಡಿಎಂಕೆ ಸರ್ಕಾರ 44.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಇದೀಗ ವಿದ್ಯಾರ್ಥಿಗಳ ದೂರುಗಳ ಹಿನ್ನೆಲೆಯಲ್ಲಿ ಹಾಸ್ಟೆಲ್‌ನ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

 

Exit mobile version