ಅಯೋಧ್ಯೆಯಲ್ಲಿ ಪತ್ನಿ, ಮೂರು ವರ್ಷದ ಮಗು ಕೊಂದು ಪರಾರಿಯಾದ ಭೂಪ

Shn (22)

ಉತ್ತರ ಪ್ರದೇಶದ ಅಯೋಧ್ಯೆಯ ಬಚ್ರಾ ಸುಲ್ತಾನ್‌ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ 35 ವರ್ಷದ ಪತ್ನಿ ಮತ್ತು ಮೂರು ವರ್ಷದ ಮಗನನ್ನು ಕೊಂದು ಪರಾರಿಯಾದ ಆಘಾತಕಾರಿ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಅಯೋಧ್ಯೆಯ ಬಚ್ರಾ ಸುಲ್ತಾನ್‌ಪುರದಲ್ಲಿ ಅಸ್ಸಾಂ ಮೂಲದ ಸುಮಾರು 40 ಕುಟುಂಬಗಳು ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳು ತ್ಯಾಜ್ಯ ಸಂಗ್ರಹಣೆಯ ಮೂಲಕ ಜೀವನ ಸಾಗಿಸುತ್ತಿವೆ. ಶನಿವಾರ ರಾತ್ರಿ, ಶಹಜನ್ ಖಂಡಕರ್ ತನ್ನ 13 ವರ್ಷದ ಹಿರಿಯ ಮಗನನ್ನು ಗುಡಿಸಲಿನಿಂದ ಹೊರಗೆ ಮಲಗಲು ಸೂಚಿಸಿದ್ದಾನೆ. ನಂತರ, ತನ್ನ ಪತ್ನಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ, ಆಕೆಯ ಮುಖಕ್ಕೆ ಗಂಭೀರ ಗಾಯಗಳನ್ನು ಮಾಡಿದ್ದಾನೆ. ಬಳಿಕ ತನ್ನ ಮೂರು ವರ್ಷದ ಕಿರಿಯ ಮಗನನ್ನೂ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಮರುದಿನ ಬೆಳಗ್ಗೆ, 13 ವರ್ಷದ ಮಗ ಗುಡಿಸಲಿಗೆ ಮರಳಿದಾಗ, ತಾಯಿ ಮತ್ತು ತಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯವನ್ನು ಕಂಡು ಕಿರುಚಿಕೊಂಡಿದ್ದಾನೆ. ಈ ಶಬ್ದ ಕೇಳಿ ಸುತ್ತಲಿನ ನಿವಾಸಿಗಳು ಧಾವಿಸಿ ಬಂದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಧಿವಿಜ್ಞಾನ ತಂಡದೊಂದಿಗೆ ಪರಿಶೀಲನೆ ನಡೆಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯು ಕೊಲೆಗೆ ಬಳಸಿದ ಆಯುಧ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖೆ ಚುರುಕುಗೊಂಡಿದೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version