ಅಂಡಮಾನ್‌ನಲ್ಲಿ ಬೃಹತ್ ತೈಲ ನಿಕ್ಷೇಪ ಪತ್ತೆ: ಭಾರತದಲ್ಲಿ ಶುರುವಾಗುತ್ತ ತೈಲ ಮಾರುಕಟ್ಟೆ

Untitled design 2026 06 07T173258.011

ಭಾರತದ ಪ್ರಮುಖ ಪ್ರವಾಸಿ ತಾಣ ಹಾಗೂ ಆಯಕಟ್ಟಿನ ದ್ವೀಪ ಸಮೂಹವಾಗಿರುವ ಅಂಡಮಾನ್‌ನ ಸಮುದ್ರ ಭಾಗದಲ್ಲಿ ಬೃಹತ್ ತೈಲ ಮತ್ತು ನೈಸರ್ಗಿಕ ಅನಿಲದ ನಿಕ್ಷೇಪಗಳು ಪತ್ತೆಯಾಗಿವೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಮಾಹಿತಿ ಪ್ರಕಾರ, ಇಂಧನ ಪರಿಶೋಧನೆಯಲ್ಲಿ ತೊಡಗಿರುವ ‘ಆಯಿಲ್ ಇಂಡಿಯಾ ಲಿಮಿಟೆಡ್’ (OIL) ಸಂಸ್ಥೆಯು ಅಂಡಮಾನ್ ಸಮುದ್ರದಲ್ಲಿ ಯಶಸ್ವಿಯಾಗಿ ಇಂಧನ ನಿಕ್ಷೇಪವನ್ನು ಪತ್ತೆ ಹಚ್ಚಿದೆ.

‘ಶ್ರೀ ವಿಜಯಪುರಂ’ ಸಮುದ್ರದಾಳದಲ್ಲಿ ತೈಲ ಸೌರಭ

ಅಂಡಮಾನ್ ನಿಕೋಬಾರ್‌ನ ರಾಜಧಾನಿ ಶ್ರೀ ವಿಜಯಪುರಂ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದ ಸಮುದ್ರದಲ್ಲಿ ‘ಶ್ರೀ ವಿಜಯಪುರಂ-3’ ಎಂಬ ವಿಶೇಷ ಪರಿಶೋಧನಾ ಬಾವಿಯನ್ನು ಕೊರೆಯಲಾಗಿತ್ತು. ಸುಮಾರು 355 ಮೀಟರ್ ಆಳದ ಸಮುದ್ರದ ತಳಭಾಗದಲ್ಲಿ ಈ ಬಾವಿಯನ್ನು ಕೊರೆದಾಗ ಅಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲ ಇರುವುದು ದೃಢಪಟ್ಟಿದೆ. ಈ ಯಶಸ್ಸಿನ ಬೆನ್ನಲ್ಲೇ ಭಾರತ ಸರ್ಕಾರ ಅಂಡಮಾನ್ ಸುತ್ತಮುತ್ತಲಿನ ಸಮುದ್ರ ವಲಯದಲ್ಲಿ ಮತ್ತಷ್ಟು ತೀವ್ರ ಸಂಶೋಧನೆ ಮತ್ತು ಉತ್ಖನನ ನಡೆಸಲು ಮುಂದಾಗಿದೆ.

ಆಮದು ಅವಲಂಬನೆಗೆ ಸಿಗಲಿದೆಯೇ ಮುಕ್ತಿ?

ಪ್ರಸ್ತುತ ಭಾರತವು ತನ್ನ ದೇಶೀಯ ಬಳಕೆಗೆ ಅಗತ್ಯವಿರುವ ಶೇಕಡಾ 85 ಕ್ಕೂ ಹೆಚ್ಚು ಕಚ್ಚಾ ತೈಲವನ್ನು ರಷ್ಯಾ, ಇರಾನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ವಿದೇಶಿ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ಭಾರತ ಸರ್ಕಾರ ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ವ್ಯಯಿಸಬೇಕಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕೊಂಚ ಏರುಪೇರಾದರೂ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ರೇಟ್ ಗಗನಕ್ಕೇರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಅಂಡಮಾನ್‌ನಲ್ಲಿ ಇಂಧನ ನಿಕ್ಷೇಪ ಸಿಕ್ಕಿರುವುದು ಭಾರತದ ಪಾಲಿಗೆ ಆರ್ಥಿಕ ಸಂಜೀವಿನಿಯಾಗಿದೆ. ಒಂದು ವೇಳೆ ಭಾರತಕ್ಕೆ ಬೇಕಾದ ಇಂಧನ ದೇಶದ ಒಳಗೇ ಸಿಗಲು ಆರಂಭವಾದರೆ, ಮತ್ತೊಂದು ದೇಶದ ಮೇಲಿನ ಅವಲಂಬನೆ ಗಣನೀಯವಾಗಿ ತಪ್ಪುತ್ತದೆ ಎಂಬುದು ಜನರ ಆಶಯವಾಗಿದೆ.

ದೇಶದ ಇಂಧನ ಸಮಸ್ಯೆಗೆ ಸಿಗತ್ತಾ ಪರಿಹಾರ

ಅಂಡಮಾನ್‌‌ನಲ್ಲಿ ತೈಲ ನಿಕ್ಷೇಪ ಸಿಕ್ಕಿರುವುದು ಖುಷಿಯ ವಿಚಾರವಾದರೂ, ಇದರಿಂದ ತಕ್ಷಣವೇ ಪೆಟ್ರೋಲ್ ಬೆಲೆ ಕಡಿಮೆ ಆಗುವುದಿಲ್ಲ. ತಜ್ಞರ ಪ್ರಕಾರ, ಸಮುದ್ರದಾಳದಲ್ಲಿ ತೈಲ ನಿಕ್ಷೇಪ ಪತ್ತೆಯಾದ ತಕ್ಷಣ ಅದನ್ನು ಪಂಪ್ ಮಾಡಿ ಬಳಸಲು ಸಾಧ್ಯವಿಲ್ಲ. ಅಲ್ಲಿ ಸಿಕ್ಕಿರುವ ಇಂಧನದ ಒಟ್ಟು ಪ್ರಮಾಣ ಎಷ್ಟು? ಅದನ್ನು ಹೊರತೆಗೆಯಲು ಎಷ್ಟು ವೆಚ್ಚವಾಗುತ್ತದೆ? ಎಂಬಿತ್ಯಾದಿ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲು ಮತ್ತು ಅಲ್ಲಿ ಮೂಲಸೌಕರ್ಯ ನಿರ್ಮಿಸಲು ಕನಿಷ್ಠ 5 ರಿಂದ 10 ವರ್ಷಗಳ ಸುದೀರ್ಘ ಸಮಯ ಬೇಕಾಗುತ್ತದೆ.

ಇಡೀ ಭಾರತ ದೇಶದ ಇಂಧನ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸುವಷ್ಟು ಸಾಮರ್ಥ್ಯ ಈ ಅಂಡಮಾನ್ ನಿಕ್ಷೇಪಕ್ಕೆ ಇದೆಯೇ ಮತ್ತು ದೇಶದ ಇಂಧನ ಸಮಸ್ಯೆಗೆ ಇದು ಶಾಶ್ವತ ಇತಿಶ್ರೀ ಹಾಡಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಆದರೆ, ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಇದೊಂದು ಐತಿಹಾಸಿಕ ಹೆಜ್ಜೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Exit mobile version