2026ರ ತಮಿಳುನಾಡು ಚುನಾವಣೆಗೆ BJP-AIADMK ಮೈತ್ರಿ

Download (1)

2026ರ ತಮಿಳುನಾಡು ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷವೇ ಬಾಕಿ ಇರುವಾಗ, ರಾಜ್ಯ ರಾಜಕೀಯದಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯ ತೀವ್ರಗೊಂಡಿದೆ. ಪ್ರಮುಖ ಬೆಳವಣಿಗೆಯೊಂದಿಗೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರ ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯನ್ನು ಉಂಟು ಮಾಡಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತಮಿಳುನಾಡಿನಲ್ಲಿ ತನ್ನ ಹಾದಿಯನ್ನು ಬಲಪಡಿಸಲು ಮತ್ತು ದೊಡ್ಡ ಮೈತ್ರಿಕೂಟವನ್ನು ರೂಪಿಸಿ ಆಡಳಿತಕ್ಕೆ ಬರಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಭಾಗವಾಗಿ, ತಮಿಳುನಾಡಿನ ಪ್ರಮುಖ ವಿರೋಧಪಕ್ಷವಾದ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆಗೂಡಿ ನಡೆಯಲಿದೆ.

ADVERTISEMENT
ADVERTISEMENT
ಅಮಿತ್ ಶಾ – ಎಡಪ್ಪಾಡಿ ಪಳನಿಸ್ವಾಮಿ ಮಹತ್ವದ ಭೇಟಿ

ಏಪ್ರಿಲ್ 10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಿ ಗಿಂಡಿಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಇದೇ ವೇಳೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರ ಭೇಟಿ ಕುರಿತು ಸುದೀರ್ಘ  ಮಾತುಕತೆ ನಡೆಯುವ ನಿರೀಕ್ಷೆ ಮೂಡಿತ್ತು. ನಿರೀಕ್ಷೆಯಂತೆ, ಸಂಜೆ ವೇಳೆ ಪಳನಿಸ್ವಾಮಿ ಅಮಿತ್ ಶಾರನ್ನು ಭೇಟಿಯಾಗಿ, ಮುಂದಿನ ಚುನಾವಣಾ ತಯಾರಿಗಳ ಬಗ್ಗೆ ಚರ್ಚೆ ನಡೆಸಿದರು.

ಈ ಭೇಟಿಯ ನಂತರ ಇಬ್ಬರೂ ಮಾಧ್ಯಮದವರನ್ನು ಭೇಟಿಯಾಗಿ ಮಹತ್ವದ ಘೋಷಣೆಗಳನ್ನು ಪ್ರಕಟಿಸಿದರು. ಅಮಿತ್ ಶಾ ಈ ಸಂದರ್ಭ, “2026ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಒಂದು ಸೇನೆಯಂತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಡಿ ಸ್ಪರ್ಧೆ ನಡೆಸಲಿವೆ. ಈ ಮೈತ್ರಿಗೆ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವ ನೀಡಲಿದ್ದಾರೆ,” ಎಂದು ಹೇಳಿದರು.

“ಸಹಜ ಮೈತ್ರಿ” ಎಂದ ಅಮಿತ್ ಶಾ

ಅಮಿತ್ ಶಾ ತಮ್ಮ ಭಾಷಣದಲ್ಲಿ, ಎಐಎಡಿಎಂಕೆ – ಬಿಜೆಪಿ ಮೈತ್ರಿ ಯಾವುದೇ ಲಾಭದ ಲೆಕ್ಕಾಚಾರದ ಮೇಲೆ ಸ್ಥಾಪಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು. “ಇದು ಸಹಜವಾಗಿ ರೂಪುಗೊಂಡ ಮೈತ್ರಿ. ಯಾವುದೇ ಗೊಂದಲ ಇಲ್ಲ. ಇಪಿಎಸ್ ಅವರ ನೇತೃತ್ವದಲ್ಲಿ ಈ ಮೈತ್ರಿ ಬಲವಾಗಿ ಮುಂದುವರಿಯುತ್ತದೆ. ಗೆಲುವು ನಮ್ಮದ್ದೇ ಆಗುತ್ತದೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸ್ಥಾನ ಹಂಚಿಕೆ ಕುರಿತಂತೆ ಮಾತನಾಡಿದ ಅವರು, “ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ನಂತರ ನಿರ್ಧರಿಸಲಾಗುವುದು. ಆದರೆ ಎಐಎಡಿಎಂಕೆಯ ಆಂತರಿಕ ವಿಷಯಗಳಲ್ಲಿ ನಾವು ತಲೆಹಾಕುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಈ ನಡುವೆ ತಮಿಳುನಾಡು ಬಿಜೆಪಿ ಘಟಕದಲ್ಲಿ ಪ್ರಮುಖ ಬದಲಾವಣೆ ನಡೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ನಯಿನಾರ್ ನಾಗೇಂದ್ರನ್ ಅವರು ನಾಮಪತ್ರ ಸಲ್ಲಿಸಿದ್ದು, ಈ ಬೆಳವಣಿಗೆಯು ಪಕ್ಷದ ಆಂತರಿಕ ಸಂಘಟನೆಯಲ್ಲಿಯೂ ಹೊಸ ಹಾದಿಗೆ ನಾಂದಿ ಹಾಡಲಿದೆ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.

2026ರ ಚುನಾವಣೆ ತಮಿಳುನಾಡು ರಾಜಕೀಯದ ದಿಕ್ಕು ನಿರ್ಧರಿಸಲಿದೆ ಎಂಬ ನಿರೀಕ್ಷೆ ಇದೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯಿಂದ ರಾಜ್ಯದ ರಾಜಕೀಯದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎಂಬುದನ್ನು ಮುಂದೆ ಕಾದುನೋಡಬೇಕಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version