ಅಹಮದಾಬಾದ್: ಕಳೆದ ವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಬ್ರಿಟನ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್, ತನ್ನ ಸಹೋದರ ಅಜಯ್ ರಮೇಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕಣ್ಣೀರು ಹಾಕಿದ್ದಾರೆ. ಈ ದುರಂತದಲ್ಲಿ 270 ಮಂದಿ ಮೃತಪಟ್ಟಿದ್ದು, ವಿಶ್ವಾಸ್ ಒಬ್ಬರೇ ಜೀವಂತವಾಗಿ ಉಳಿದಿದ್ದರು. ಗಾಯಗೊಂಡಿದ್ದ ಅವರು ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದುರಂತದ ಹಿನ್ನೆಲೆ
ಜೂನ್ 12, 2025 ರಂದು, ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ-171) ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನವು ರನ್ವೇಯಿಂದ ಗಗನಕ್ಕೆ ಏರಿದ ಕೆಲವೇ ಸೆಕೆಂಡ್ಗಳಲ್ಲಿ ನಿಯಂತ್ರಣ ತಪ್ಪಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆಯಿತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಕಟ್ಟಡದಲ್ಲಿದ್ದ 29 ಮಂದಿ ಸೇರಿ ಒಟ್ಟು 270 ಮಂದಿ ಮೃತಪಟ್ಟರು. ಆದರೆ, 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ರಮೇಶ್ ಅವರು ಬದುಕುಳಿದರು.
#WATCH | Diu | Lone survivor of AI-171 flight crash, Vishwas Ramesh Kumar, mourns the death of his brother Ajay Ramesh, who was travelling on the same flight
Vishwas Ramesh Kumar is a native of Diu and is settled in the UK. pic.twitter.com/fSAsCNwGz5
— ANI (@ANI) June 18, 2025
ವಿಶ್ವಾಸ್ ಮತ್ತು ಅಜಯ್ ರಮೇಶ್ ಸಹೋದರರು ಬ್ರಿಟನ್ನಿಂದ ದಿಯುಗೆ ಕುಟುಂಬದೊಂದಿಗೆ ಸಮಯ ಕಳೆಯಲು ಬಂದಿದ್ದರು. ಜೂನ್ 12 ರಂದು ಲಂಡನ್ಗೆ ಮರಳುವಾಗ ಈ ದುರಂತ ಸಂಭವಿಸಿತು. ಗಂಭೀರವಾಗಿ ಗಾಯಗೊಂಡಿದ್ದ ವಿಶ್ವಾಸ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಅವರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡ ಅವರು ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಭಾವುಕ ಕ್ಷಣ
ದಿಯುವಿನಲ್ಲಿ ಬುಧವಾರ ಬೆಳಿಗ್ಗೆ ಅಜಯ್ ರಮೇಶ್ ಅವರ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಕೂಡ ಹಾಜರಿದ್ದರು. ಸಹೋದರನ ಶವಕ್ಕೆ ಹೆಗಲುಕೊಟ್ಟು, ಅವರು ಬಿಕ್ಕಿಬಿಕ್ಕಿ ಅತ್ತ ದೃಶ್ಯವು ಎಲ್ಲರ ಮನ ಕಲಕಿತ್ತು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಈ ದುಃಖದ ಸಂದರ್ಭದಲ್ಲಿ ವಿಶ್ವಾಸ್ ಅವರೊಂದಿಗೆ ಇದ್ದರು.
ಪ್ರಧಾನಿಯಿಂದ ಭೇಟಿ
ವಿಶ್ವಾಸ್ ಆಸ್ಪತ್ರೆಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರಧಾನಿ, ದುರಂತದಿಂದ ಬದುಕುಳಿದ ವಿಶ್ವಾಸ್ ಅವರ ಧೈರ್ಯವನ್ನು ಶ್ಲಾಘಿಸಿದ್ದರು.