ಡಾನ್ ಆಗಬೇಕೆಂದು ಹೆತ್ತ ತಾಯಿಯನ್ನೇ ಹ*ತ್ಯೆಗೈದ 16 ವರ್ಷದ ಮಗ

Untitled design 2026 05 16T162411.605

ವಿಜಯನಗರಂ: ಆಂಧ್ರಪ್ರದೇಶದಲ್ಲಿ ಶಾಕಿಂಗ್‌ ಘಟನೆಯೊಂದು ಬೆಳಕಿಗೆ ಬಂದಿದೆ. ಮಾಫಿಯಾ ಡಾನ್ ಆಗಬೇಕೆಂಬ ಕನಸು ಕಾಣುತ್ತಿದ್ದ 16 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ 9 ತೊಲ ಚಿನ್ನವನ್ನು ದೋಚಿ ಪರಾರಿಯಾಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಎಲ್ಲಿ ನಡೆಯಿತು ಘಟನೆ?

ಈ ಘಟನೆ ವಿಜಯನಗರಂ ಜಿಲ್ಲೆಯ ರಾಜಾಂ ಗ್ರಾಮದಲ್ಲಿ ನಡೆದಿದೆ. ಆರೋಪಿ ಮುಂಜೇಟಿ ಸತೀಶ್ ಮತ್ತು ಸ್ಪಂದನಾ ದಂಪತಿಯ ಮಗನಾಗಿದ್ದು, ಸ್ಥಳೀಯ ಶಾಲೆಯಲ್ಲಿ 10ನೇ ತರಗತಿಯವರೆಗೆ ಓದಿದ್ದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಇಂಟರ್‌ಮೀಡಿಯಟ್‌ಗೆ ಸೇರ್ಪಡೆಗಾಗಲು ಸಿದ್ಧನಾಗಿದ್ದ. 

ಲವ್ ಲೆಟರ್ ವಿವಾದವೇ ಕೊಲೆಗೆ ಕಾರಣ?

ಶಾಲೆಯಲ್ಲಿ ಒಬ್ಬ ಹುಡುಗಿಗೆ ಪ್ರೇಮಪತ್ರ ಬರೆದಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿಯು ಅವನ ತಾಯಿ ಸ್ಪಂದನಾ ಅವರನ್ನು ಕರೆಸಿ ದೂರು ನೀಡಿತ್ತು. ಇದರಿಂದ ತಾಯಿ ಅವನನ್ನು ಹಲವು ಬಾರಿ ಗದರಿಸಿದ್ದರು. ಶಿಸ್ತಿನಿಂದ ಇರಬೇಕೆಂದು ಬುದ್ಧಿ ಹೇಳಿದ್ದರು. ಪ್ರತಿದಿನ ಅವನ ಬ್ಯಾಗ್ ಅನ್ನು ತಪಾಸಣೆ ಮಾಡುತ್ತಿದ್ದರು. ಇದೇ ಕಾರಣದಿಂದ ಬಾಲಕ ತಾಯಿಯ ಮೇಲೆ ದ್ವೇಷ ಸಾಧಿಸಲು ಶುರುಮಾಡಿದ್ದ. 

ಡಾನ್ ಆಗುವ ಕನಸು ಮತ್ತು ಜಪಾನ್ ಸಿನಿಮಾಗಳ ಪ್ರಭಾವ

ಇದಕ್ಕೂ ಮಧ್ಯೆ, ತಂದೆ ಕುಟುಂಬದಿಂದ ದೂರವಾಗಿ ಬೇರೆ ಮಹಿಳೆಯೊಂದಿಗೆ ವಾಸಿಸುತ್ತಿರುವ ವಿಚಾರವೂ ಬಾಲಕನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ. ತನ್ನ ಸ್ನೇಹಿತನೊಂದಿಗೆ ಮುಂಬೈಗೆ ಹೋಗಿ “ಮಾಫಿಯಾ ಡಾನ್” ಆಗಬೇಕೆಂದು ಮಾತನಾಡುತ್ತಿದ್ದ ಆತ, ಅದಕ್ಕಾಗಿ ಮೊದಲು ಕ್ರೈಮ್ ಹಿಸ್ಟರಿ ಬೇಕೆಂದು ಭಾವಿಸಿದ್ದಾನೆ. ಕೆಲವು ಆ್ಯಕ್ಷನ್ ಹಾಗೂ ಅನಿಮೇಷನ್ ಸಿನಿಮಾಗಳಿಂದ ಪ್ರೇರಿತನಾಗಿ ಅಪರಾಧದ ದಾರಿಗೆ ಕಾಲಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಯಿಯನ್ನು ಕೊಲೆ ಮಾಡಲು ಬಾಲಕ ತನ್ನ ಸ್ನೇಹಿತನೊಂದಿಗೆ ಸೇರಿ ಪ್ಲಾನ್‌ ರೂಪಿಸಿದ್ದ. ಸ್ಪಂದನಾ ಹೊರಗೆ ಹೋಗಿದ್ದ ವೇಳೆ ಸ್ನೇಹಿತನನ್ನು ಮನೆಗೆ ಕರೆಸಿ ಬಾತ್‌ರೂಂನಲ್ಲಿ ಅಡಗಿಸಿಟ್ಟಿದ್ದಾನೆ. ಮನೆಗೆ ಮರಳಿದ ಸ್ಪಂದನಾ ಕಾಲು ತೊಳೆಯಲು ಬಾತ್‌ರೂಂಗೆ ಹೋದಾಗ ಇಬ್ಬರೂ ಸೇರಿ ದಾಳಿ ನಡೆಸಿದ್ದಾರೆ. ಮೊದಲು ಉಸಿರುಗಟ್ಟಿಸಲು ಯತ್ನಿಸಿದ್ದು, ಬಳಿಕ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ಕೊಲೆ ಬಳಿಕ ರಕ್ತದ ಕಲೆಗಳನ್ನು ಅಳಿಸಿ, ಮನೆಯಲ್ಲಿ ಇದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ನಂತರ ಮೃತದೇಹವನ್ನು ಸೀರೆಯಲ್ಲಿ ಸುತ್ತಿ ಸಮೀಪದ ಕೆರೆಯಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದಾಗ ನಿಜಾಂಶ ಹೊರಬಿದ್ದಿದೆ. ಆರೋಪಿಗಳು ಭುವನೇಶ್ವರ, ಮುಂಬೈ, ವೈಜಾಗ್ ಮತ್ತು ತಿರುಪತಿ ಕಡೆ ಸಂಚರಿಸಿ ಕೊನೆಗೆ ಪಲಾಸಾಗೆ ತೆರಳುವ ವೇಳೆ ಚಿಲಕಪಾಲಂ ಬಳಿ ಬಂಧಿತರಾಗಿದ್ದಾರೆ.

 ಆರೋಪಿಗಳು ತಪ್ಪಿಸಿಕೊಳ್ಳಲು ಫೋನ್ ಸಿಮ್ ಕಾರ್ಡ್‌ಗಳನ್ನು ತೆಗೆದುಹಾಕಿ ಹೊಸ ಸಿಮ್ ಬಳಸಿದ್ದರೂ, ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದದ್ದು ಪೊಲೀಸರಿಗೆ ಸುಳಿವು ನೀಡಿದೆ. ಸಾಮಾಜಿಕ ಜಾಲತಾಣದ ಮೆಸೇಜ್ ಹಾಗೂ ಲೊಕೇಶನ್ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

ಬಂಧನದ ನಂತರ ಬಾಲಕ ನೀಡಿದ ಹೇಳಿಕೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. “ಮಾಫಿಯಾದಲ್ಲಿ ಸೇರಬೇಕಾದರೆ ದೊಡ್ಡ ಅಪರಾಧ ಮಾಡಿರಬೇಕು ಎಂದು ಸಿನಿಮಾಗಳಿಂದ ಪ್ರೇರಣೆ ಪಡೆದಿದ್ದೆ. ಅದಕ್ಕಾಗಿ ತಾಯಿಯನ್ನೇ ಕೊಂದೆ” ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version