ಮಂಗಳೂರು, ಏಪ್ರಿಲ್ 30: ಮಂಗಳೂರು ಸಮೀಪ ಕುಡುಪು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಉಂಟಾದ ಘರ್ಷಣೆಯು ಯುವಕನ ಹತ್ಯೆಯೊಂದಿಗೆ ಅಂತ್ಯಗೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಪಂದ್ಯಾವಳಿಯ ವೇಳೆ “ಪಾಕಿಸ್ತಾನ್ ಜಿಂದಾಬಾದ್” ಎಂಬ ಘೋಷಣೆ ಕೇಳಿ ಬಂದ ಹಿನ್ನೆಲೆಯಲ್ಲಿ ಗಲಾಟೆ ಉಂಟಾಗಿ, ಗುಂಪುಗಳ ನಡುವೆ ತೀವ್ರ ವಾಗ್ವಾದ ಮತ್ತು ಹಲ್ಲೆ ನಡೆದಿದೆ. ಕೇರಳದ ವಯನಾಡ್ ಜಿಲ್ಲೆಗೆ ಸೇರಿದ್ದ ಮಹಮ್ಮದ್ ಅಶ್ರಫ್ (ವಯಸ್ಸು ಸುಮಾರು 23) ಎಂಬ ಯುವಕ ಜೀವ ಕಳೆದುಕೊಂಡಿದ್ದಾನೆ.
ಅಶ್ರಫ್ ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದ ಎನ್ನಲಾಗಿದೆ. ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಸ್ಥಳದಲ್ಲಿ ಪಾಕಿಸ್ತಾನ ಪರ ಘೋಷಣೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರ ಗುಂಪೊಂದು ಅಶ್ರಫ್ನೊಂದಿಗೆ ವಾಗ್ವಾದ ನಡೆಯಿತು. ಈ ವಾಗ್ವಾದ ತೀವ್ರಗೊಂಡು ಹಲ್ಲೆಗೆ ತಿರುಗಿ, ಅಶ್ರಫ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಅಶ್ರಫ್ ಮತ್ತು ಕ್ರಿಕೆಟ್ ನೋಡಲು ಬಂದಿದ್ದ ಸಚಿನ್ ಎಂಬಾತನ ನಡುವೆ ಪ್ರಾರಂಭವಾದ ವಾದವು ವೈಮನಸ್ಸಿಗೆ ಕಾರಣವಾಯಿತು. ಘಟನೆಯ ದಿನ, ಏಪ್ರಿಲ್ 27ರಂದು, ಈ ತಕರಾರು ತೀವ್ರ ಸ್ವರೂಪಕ್ಕೆ ತಿರುಗಿ ಸುಮಾರು 25-30 ಮಂದಿಯ ಗುಂಪು ಅಶ್ರಫ್ ಮೇಲೆ ಸಾಮೂಹಿಕ ಹಲ್ಲೆ ನಡೆಸಿತು. ಕೈ, ಕಾಲು ಮತ್ತು ಕಟ್ಟಿಗೆಯಿಂದ ಅವನನ್ನು ಥಳಿಸಿ, ತೀವ್ರ ಗಾಯಗಳಾದ ಹಿನ್ನೆಲೆಯಲ್ಲಿ ಅಶ್ರಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತಕ್ಷಣ ಕಾರ್ಯನಿರ್ವಹಿಸಿ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇಲ್ಲಿವರೆಗೆ ಸುಮಾರು 20 ಮಂದಿಯನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಗಳಲ್ಲಿ ಕೆಲವರು ಸ್ಥಳೀಯರು ಎಂಬ ಮಾಹಿತಿ ಹೊರಬಿದ್ದಿದೆ. ಮತ್ತಷ್ಟು ಜನ ಈ ದಾಳಿಯಲ್ಲಿ ಭಾಗಿಯಾಗಿರಬಹುದೆಂದು ಪೊಲೀಸರಿಗೆ ಅನುಮಾನವಿದ್ದು, ಉಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ತೀವ್ರಗೊಳಿಸಲಾಗಿದೆ.
ಹತ್ಯೆಗೊಳಗಾದ ಅಶ್ರಫ್ನ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿ ತಮ್ಮ ಊರಿಗೆ ಕರೆದೊಯ್ದಿದ್ದಾರೆ. ಘಟನೆ ಮಂಗಳೂರಿನಲ್ಲಿ ತೀವ್ರ ಆತಂಕ ಮೂಡಿಸಿದೆ.