ತಾಯಿಯ ಜೊತೆ ಮಾತನಾಡುತ್ತಿದ್ದ ಯುವತಿ ಕುಸಿದು ಬಿದ್ದು ಸಾ*ವು

Untitled design 2026 04 27T142144.415

ಬೆಂಗಳೂರು, ಏಪ್ರಿಲ್ 27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಜೊತೆ ನಗುನಗುತ್ತಾ ಮಾತನಾಡುತ್ತಿದ್ದ ಯುವ ಟೆಕ್ಕಿಯೊಬ್ಬರು ಏಕಾಏಕಿ ಬ್ರೈನ್ ಸ್ಟೋಕ್ (Brain Stroke) ಗೆ ಒಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಮೂಲದ ಶ್ವೇತಾ (25) ಮೃತ ದುರ್ದೈವಿ.

ತಾಯಿಯ ಜೊತೆ ಮಾತನಾಡುತ್ತಿದ್ದಾಗಲೇ ದುರಂತ

ಶ್ವೇತಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಕಳೆದ ಏಪ್ರಿಲ್ 25ರ ಶನಿವಾರದಂದು ಅವರು ಕೆಲಸ ಮುಗಿಸಿ ಮನೆಗೆ ಆಗಮಿಸಿದ್ದರು. ಸಂಜೆ ಮನೆಯಲ್ಲಿ ತಾಯಿಯ ಜೊತೆ ಅತ್ಯಂತ ಲವಲವಿಕೆಯಿಂದ ಮಾತನಾಡುತ್ತಿದ್ದಾಗಲೇ ಶ್ವೇತಾ ಅವರಿಗೆ ದಿಢೀರ್ ಬ್ರೈನ್ ಸ್ಟೋಕ್ ಸಂಭವಿಸಿದೆ. ಕೇಲವೇ ಕ್ಷಣಾರ್ಧದಲ್ಲಿ ಅವರು ಕುಸಿದು ಬಿದ್ದರು. ಕೂಡಲೇ ಮಾತನಾಡಲಾರದ ಸ್ಥಿತಿಗೆ ತಲುಪಿದ ಅವರನ್ನು ಕುಟುಂಬದವರು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

ಚಿಕಿತ್ಸೆ ವಿಫಲ, ಮೆದುಳು ನಿಷ್ಕ್ರಿಯ

ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು, ಅಷ್ಟರಲ್ಲಾಗಲೇ ಶ್ವೇತಾ ಕೋಮಾಗೆ ಜಾರಿದ್ದರು. ವೈದ್ಯರು ಅವರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ (Brain Dead) ಎಂದು ತಿಳಿಸಿದರು. ಪೋಷಕರು ತಮ್ಮ ಮಗಳ ಅಂಗಾಂಗ ದಾನಕ್ಕೆ ಮುಂದಾದರು.

ಅಂಗಾಂಗ ದಾನಕ್ಕೂ ಸಿಗದ ಅವಕಾಶ

ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಶ್ವೇತಾ ಸಾವನ್ನಪ್ಪಿದರು. ಇದರಿಂದಾಗಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಶ್ವೇತಾ ಅವರ ಸಾವಿನ ನಂತರ ಅಂಗಾಂಗಗಳನ್ನು ಸಂರಕ್ಷಿಸಿಡಲು ಸಾಧ್ಯವಾಗದ ಕಾರಣ, ಪೋಷಕರ ಆಸೆ ನುಚ್ಚುನೂರಾಯಿತು.

ಬಸ್ ಚಾಲನೆ ಮಾಡುತ್ತಿದ್ದ ವೇಳೆ ಬಿಎಂಟಿಸಿ ಚಾಲಕನಿಗೆ ಹೃದಯಾಘಾತ: ಸ್ಥಳದಲ್ಲೇ ಸಾ*ವು

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಬಿಎಂಟಿಸಿ (BMTC) ಬಸ್ ಚಾಲಕರೊಬ್ಬರು ಕರ್ತವ್ಯದಲ್ಲೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಂಗಳೂರಿನ ಹೊರವಲಯದಲ್ಲಿ ಸಂಭವಿಸಿದೆ. ಮೃತರನ್ನು 32 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ-ಬೊಮ್ಮಸಂದ್ರ ಮಾರ್ಗದ ಬಳಿ ಈ ದುರಂತ ಸಂಭವಿಸಿದೆ. ಮೃತ ಚಾಲಕ ರಮೇಶ್ (32) ಅವರು ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಚಾಲಕರಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಅವರು, ಜಿಗಣಿಯಿಂದ ಬೊಮ್ಮಸಂದ್ರಕ್ಕೆ ಬಸ್ ಚಾಲನೆ ಮಾಡುತ್ತಿದ್ದರು. ಮಾರ್ಗಮಧ್ಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಪ್ರಜ್ಞಾಪೂರ್ವಕವಾಗಿ ಬಸ್ ಅನ್ನು ರಸ್ತೆಯ ಬದಿಗೆ ನಿಲ್ಲಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು. ಪ್ರಯಾಣಿಕರು ಮತ್ತು ಸ್ಥಳೀಯರು ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾಗಿ ತಿಳಿಸಿದರು.

ಸಹೋದ್ಯೋಗಿಗಳ ಪ್ರತಿಭಟನೆ-ಪರಿಹಾರ ಆಗ್ರಹ

ರಮೇಶ್ ಅವರ ದುರ್ಮರಣದ ಸುದ್ದಿ ತಿಳಿದು, ಬಿಎಂಟಿಸಿ ಚಾಲಕರು ಮತ್ತು ಸಿಬ್ಬಂದಿ ತೀವ್ರ ಆಕ್ರೋಶಕ್ಕೊಳಗಾಗಿದ್ದಾರೆ. ಜಿಗಣಿ ಘಟಕ 27 ಡಿಪೋ ಮುಂದೆ ಅವರು ತಮ್ಮ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಯಿಂದಾಗಿ ಜಿಗಣಿ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನಾಕಾರರು, “ಮೃತನ ಕುಟುಂಬಕ್ಕೆ ಕೂಡಲೇ ತಕ್ಕ ಪರಿಹಾರ ನೀಡಬೇಕು. ಹಿಂದೆ ಬಿಎಂಟಿಸಿಯ ಇನ್ನೊಬ್ಬ ಚಾಲಕ ಮೃತಪಟ್ಟಾಗ ಅವರಿಗೆ ಸೂಕ್ತ ಪರಿಹಾರ ನೀಡಲಾಗಿರಲಿಲ್ಲ. ಆ ತಪ್ಪನ್ನು ಪುನರಾವರ್ತಿಸಬಾರದು” ಎಂದು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆ ಈಡೇರದಿದ್ದಲ್ಲಿ, ಮೃತ ರಮೇಶ್ ಅವರ ಶವವನ್ನೇ ಡಿಪೋ ಮುಂದೆ ತಂದು ನಿಲ್ಲಿಸಿ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Exit mobile version