ಖಾವಿ ತೊಟ್ಟು ಯಾರಿವಳು..ಯಾರಿವಳು..ಹಾಡು ಹಾಡಿದ ಸ್ವಾಮೀಜಿ..!: ವಿಡಿಯೋ ವೈರಲ್‌

Untitled design 2026 08 17T214648.761

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿಯವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾವಿಧಾರಿ ಸ್ವಾಮೀಜಿ ಮಠದ ಆವರಣದಲ್ಲಿ ಮೈಕ್ ಹಿಡಿದು ಸಿನಿಮಾ ಹಾಡು ಹಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಸ್ವಾಮೀಜಿ ಮೈಕ್ ಹಿಡಿದು ನಟ ರವಿಚಂದ್ರನ್ ಅಭಿನಯದ ಜನಪ್ರಿಯ ಸಿನಿಮಾ ಹಾಡು “ಯಾರಿವಳು ಯಾರಿವಳು…” ಹಾಡುತ್ತಿರುವುದು ಕಂಡುಬರುತ್ತದೆ. ಹಾಡನ್ನು ಉತ್ಸಾಹದಿಂದ ಹಾಡುತ್ತಿರುವ ಸಂದರ್ಭದಲ್ಲಿ ಅವರ ಎದುರು ಮದ್ಯದ ಬಾಟಲಿ ಇರುವುದು ವಿಡಿಯೋದಲ್ಲಿ ಗೋಚರಿಸುತ್ತದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸ್ವಾಮೀಜಿಯವರ ನಡೆ-ನುಡಿಗಳ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

ಪವಿತ್ರ ಶ್ರಾವಣ ಮಾಸದ ಆರಂಭದಲ್ಲೇ ಮಠದ ಆವರಣದಲ್ಲಿ ಇಂತಹ ದೃಶ್ಯಗಳು ಕಾಣಿಸಿಕೊಂಡಿರುವುದು ಕೆಲ ಭಕ್ತರು ಹಾಗೂ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಮಠ ಹಾಗೂ ಧಾರ್ಮಿಕ ಪೀಠಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿಯ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮತ್ತೊಂದೆಡೆ, ವೈರಲ್ ಆಗಿರುವ ವಿಡಿಯೋವನ್ನು ಸಂಪೂರ್ಣ ಹಿನ್ನೆಲೆಯೊಂದಿಗೆ ಪರಿಶೀಲಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಮರುಳಾರಾಧ್ಯ ಸ್ವಾಮೀಜಿ ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು ನೀಡಿದ್ದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. “ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ಖಡ್ಗ ಕೊಡಿ” ಎಂಬರ್ಥದ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು.

ಇದೀಗ ಅದೇ ಸ್ವಾಮೀಜಿಯವರದ್ದು ಎನ್ನಲಾದ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಮತ್ತೊಮ್ಮೆ ಅವರು ಸುದ್ದಿಯಲ್ಲಿದ್ದಾರೆ. ಕಾವಿ ಧರಿಸಿ ಮಠದ ಪೀಠಾಧಿಪತಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿಯೊಬ್ಬರು ಮದ್ಯದ ಬಾಟಲಿಯ ಎದುರು ಸಿನಿಮಾ ಹಾಡು ಹಾಡುತ್ತಿರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಿವೆ.

ಆದರೆ ಮಠದ ಆವರಣದಲ್ಲಿಯೇ ಈ ರೀತಿಯ ವಿಡಿಯೋ ಚಿತ್ರೀಕರಣಗೊಂಡಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆ, ಘಟನೆ ಕುರಿತು ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ವೈರಲ್ ವಿಡಿಯೋ ಕುರಿತು ಸ್ವಾಮೀಜಿಯವರ ಪ್ರತಿಕ್ರಿಯೆ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಸದ್ಯ “ಕಾವಿ ತೊಟ್ಟ ಸ್ವಾಮೀಜಿ, ಕೈಯಲ್ಲಿ ಮೈಕ್, ಬಾಯಲ್ಲಿ ‘ಯಾರಿವಳು ಯಾರಿವಳು’ ಹಾಡು, ಎದುರುಗಡೆ ಮದ್ಯದ ಬಾಟಲಿ” ಎಂಬ ರೀತಿಯ ಬರಹಗಳೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಈ ವಿಡಿಯೋ ಸತ್ಯಾಸತ್ಯತೆ, ಚಿತ್ರೀಕರಣದ ಸಂದರ್ಭ ಮತ್ತು ಘಟನೆಯ ಹಿನ್ನೆಲೆ ಕುರಿತು ಸಂಬಂಧಪಟ್ಟವರಿಂದ ಸ್ಪಷ್ಟನೆ ಬಂದ ಬಳಿಕವೇ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

Exit mobile version