‘ಪಂಚ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ’ ಎಂದು ಹೇಳಿ ಗ್ರಾಮೀಣ ಭಾಗದಲ್ಲಿ ಬಡವರ ಬಿಪಿಎಲ್ ಕಾರ್ಡ್ಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
6ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಡವರ ವಿರೋಧಿ, ರೈತ ವಿರೋಧಿ ಸರ್ಕಾರವನ್ನು ಎಷ್ಟು ಬೇಗ ಅಧಿಕಾರದಿಂದ ಇಳಿಸುತ್ತೀರೋ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಜನ ತೀರ್ಮಾನಿಸಿದ್ದಾರೆ. ನಮ್ಮ ಈ ಪಾದಯಾತ್ರೆಗೆ ದಲಿತರು, ರೈತರು, ಬಡವರು, ತಾಯಂದಿರು ಮತ್ತು ಯುವಕರು ಸೇರಿದಂತೆ ಸರ್ವ ಸಮುದಾಯದವರೂ ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಾದಯಾತ್ರೆ ನೋಡಿ ಮುಖ್ಯಮಂತ್ರಿಗಳು ನಿದ್ರೆ ಕಳೆದುಕೊಂಡಿದ್ದಾರೆ ಎಂದರು.
ರೈತರ ಸಮಸ್ಯೆ ಮತ್ತು ಬರಗಾಲ
ಭೀಕರ ಬರಗಾಲದ ಸಂದರ್ಭದಲ್ಲಿ ನಾಡಿನ ದೊರೆ ಮುಖ್ಯಮಂತ್ರಿಗಳು ಮತ್ತು ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಕುಳಿತು ರಿಯಲ್ ಎಸ್ಟೇಟ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆದರೆ ರೈತರು ಪಡುತ್ತಿರುವ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮದ ಹಗರಣ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟಿದ್ದ 187 ಕೋಟಿ ರೂ. ಹಣವನ್ನು ವಾಪಸ್ ತರಬೇಕು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್ಸಿಪಿ, ಟಿಎಸ್ಪಿ ಯ 52,000 ಕೋಟಿ ರೂ. ಹಣವನ್ನು ಬೇರೆ ಬೇರೆ ಯೋಜನೆಗಳಿಗೆ ದುರುಪಯೋಗ ಮಾಡಿಕೊಳ್ಳಲಾಗಿದ್ದು, ಅದೆಲ್ಲವೂ ದಲಿತ ಸಮುದಾಯಕ್ಕೆ ವಾಪಸ್ ಸೇರಬೇಕು ಎಂದು ಆಗ್ರಹಿಸಿದರು.
ವಿದ್ಯುತ್ತಿಲ್ಲದೇ ಬೆಳೆ ನಾಶ
ರೈತರ ಬೋರ್ವೆಲ್ಗಳಿಗೆ 4 ರಿಂದ 10 ತಾಸು ವಿದ್ಯುತ್ ಕೊಡುವುದಾಗಿ ಹೇಳಿದ್ದರು. ಆದರೆ, ಪವರ್ ಇಲ್ಲದೆ ಬೆಳೆಗಳು ನಾಶವಾಗಿವೆ. ವಿಕಲಚೇತನರ ಪಿಂಚಣಿ, ವಿಧವಾ ವೇತನ ಎಲ್ಲವೂ ಬಂದ್ ಆಗಿವೆ. ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಬಡವರು, ದಲಿತರಿಗೆ ನ್ಯಾಯ ಕೊಡಿ. ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಕಾನೂನು- ಸುವ್ಯವಸ್ಥೆ ಸರಿಪಡಿಸಿ ತಾಯಂದಿರಿಗೆ ರಕ್ಷಣೆ ಕೊಡಿ ಎಂದು ಆಗ್ರಹಿಸಿದರು. ಬಡವರ ವಿರೋಧಿ, ರೈತ ವಿರೋಧಿಯನ್ನು ಅಧಿಕಾರದಿಂದ ಇಳಿಸಲು ಜನತೆ ತೀರ್ಮಾನ ಮಾಡಿದ್ದಾರೆ ಎಂದರು.





