ಯೋಗೀಶ್ ಗೌಡ ಕೊ*ಲೆ ಕೇಸ್: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು

Untitled design 2026 04 30T090416.456

ಬೆಂಗಳೂರು, (ಕರ್ನಾಟಕ): ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಬಿಜೆಪಿ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವು ತಾನಾಗಿಯೇ ರದ್ದಾಗಿದೆ. ಈ ಕುರಿತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸ್ಪಷ್ಟನೆ ನೀಡಿದ್ದು, ಕಾನೂನಿನ ಪ್ರಕಾರ ಈ ಅನರ್ಹತೆ ಸ್ವಯಂಚಾಲಿತವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಖಾದರ್, “ವಿಧಾನಸಭೆಯ ಯಾವುದೇ ಸದಸ್ಯರು ಕಾನೂನಾತ್ಮಕವಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದಾಗ, ಅವರ ಶಾಸಕತ್ವ ತಾನಾಗಿಯೇ ರದ್ದಾಗುತ್ತದೆ. ಅದರಂತೆಯೇ ವಿನಯ್ ಕುಲಕರ್ಣಿ ಅವರ ಸದಸ್ಯ ಸ್ಥಾನವೂ ರದ್ದಾಗಿದೆ. ಈ ಸಂದರ್ಭದಲ್ಲಿ ಸ್ಪೀಕರ್ ಆಗಿ ನನಗೆ ಸದಸ್ಯತ್ವವನ್ನು ಪ್ರತ್ಯೇಕವಾಗಿ ರದ್ದುಪಡಿಸುವ ಯಾವುದೇ ಅಧಿಕಾರವಿಲ್ಲ. ಇದು ಕಾನೂನಿನ ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ” ಎಂದು ವಿವರಿಸಿದರು.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆ ಈ ಪ್ರಶ್ನೆ ಎದುರಾಗಿತ್ತು. ಸ್ಪೀಕರ್ ಖಾದರ್ ಮತ್ತಷ್ಟು ಸ್ಪಷ್ಟನೆ ನೀಡುತ್ತಾ, “ವಿಧಾನಸಭೆಯೊಳಗೆ ಅವ್ಯವಹಾರ, ಗಲಾಟೆ ಅಥವಾ ಇತರ ಯಾವುದೇ ಘಟನೆಗಳು ನಡೆದಾಗ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ಗೆ ಇದೆ. ಆದರೆ, ಸದನದ ಹೊರಗಿನ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಶಿಕ್ಷೆ ವಿಧಿಸಿದಾಗ ಯಾವುದೇ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ. ಅದು ಸಂವಿಧಾನ ಮತ್ತು ಜನಪ್ರತಿನಿಧಿ ಕಾಯ್ದೆಯ ನಿಯಮಗಳ ಪ್ರಕಾರ ತಾನಾಗಿಯೇ ರದ್ದಾಗುತ್ತದೆ” ಎಂದರು.

ಶಾಸಕ ಸ್ಥಾನ ರದ್ದಾದ ಬಳಿಕವೂ ವಿನಯ್ ಕುಲಕರ್ಣಿ ಅವರಿಗೆ ಕಾನೂನಿನ ಪ್ರಕಾರವೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್, “ಒಂದು ವೇಳೆ ನ್ಯಾಯಾಲಯದಲ್ಲಿ ದೋಷಿ ಎಂಬ ತೀರ್ಪಿಗೆ ತಡೆ (ಸ್ಟೇ) ದೊರಕಿದಲ್ಲಿ, ಅಥವಾ ಮೇಲ್ಮನವಿ ನ್ಯಾಯಾಲಯವು ಶಿಕ್ಷೆಯನ್ನು ರದ್ದುಪಡಿಸಿದಲ್ಲಿ, ತಾನಾಗಿಯೇ ರದ್ದಾಗಿದ್ದ ಶಾಸಕ ಸ್ಥಾನವು ಮತ್ತೆ ತಾನಾಗಿಯೇ ವಾಪಸ್ ಬರುತ್ತದೆ. ಆದರೆ, ಇಲ್ಲಿಯವರೆಗೆ ನ್ಯಾಯಾಲಯದಿಂದ ಯಾವುದೇ ತಡೆ ಇಲ್ಲದ ಕಾರಣ, ವಿನಯ್ ಕುಲಕರ್ಣಿ ಅವರು ಪ್ರಸ್ತುತ ಶಾಸಕರಾಗಿ ಮುಂದುವರೆಯಲು ಸಾಧ್ಯವಿಲ್ಲ” ಎಂದು ಹೇಳಿದರು.

Exit mobile version