ವಿಜಯಪುರದಲ್ಲಿ ಭಾರಿ ಚಳಿ: ಶಾಲಾ ಸಮಯದಲ್ಲಿ ದಿಢೀರ್ ಬದಲಾವಣೆ..!

Untitled design (56)

ವಿಜಯಪುರ: ಜಿಲ್ಲೆಯಲ್ಲಿ ವಾತಾವರಣದ ತಾಪಮಾನದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಶೀತಗಾಳಿ ಮತ್ತು ಚಳಿಯ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕೆ.ಆನಂದ್ ಶಾಲಾ ಅವಧಿಯನ್ನು ಬದಲಾವಣೆ ಮಾಡುವ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 10 ಗಂಟೆಗೆ ಶಾಲೆ ಆರಂಭ:

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿಯಾದ ಚಳಿಯಿಂದಾಗಿ ಪುಟ್ಟ ಮಕ್ಕಳು ಮುಂಜಾನೆ ಶಾಲೆಗೆ ಹೋಗಲು ತೀವ್ರ ಕಷ್ಟವಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳನ್ನು (ಪ್ರಾಥಮಿಕ ಮತ್ತು ಪ್ರೌಢಶಾಲೆ) ಮುಂಜಾನೆ ಬದಲಾಗಿ ಬೆಳಗ್ಗೆ 10 ಗಂಟೆಯಿಂದ ಆರಂಭಿಸುವಂತೆ ಸೂಚಿಸಿದ್ದಾರೆ.

ಹತ್ತು ದಿನಗಳ ಕಾಲ ಆದೇಶ ಜಾರಿ:

ಈ ತಾತ್ಕಾಲಿಕ ಸಮಯ ಬದಲಾವಣೆಯು ಮುಂದಿನ 10 ದಿನಗಳವರೆಗೆ ಅನ್ವಯವಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಪ್ರಸ್ತುತ ಚಳಿಯ ವಾತಾವರಣವನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಹತ್ತು ದಿನಗಳ ನಂತರ ಹವಾಮಾನದ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಕುಸಿದಿರುವುದರಿಂದ ಮಕ್ಕಳಿಗೆ ಜ್ವರ, ಶೀತ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮುಂಜಾನೆಯ ಶೀತಗಾಳಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದು ಪೋಷಕರಿಗೂ ಆತಂಕ ಹೆಚ್ಚಿಸಿದೆ. ಹೀಗಾಗಿ ಶಾಲಾ ಸಮಯವನ್ನು ಮುಂದೂಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಪೋಷಕರ ಮನವಿಗೆ ಸ್ಪಂದಿಸಿದ ಡಿಸಿ ಕೆ. ಆನಂದ್ ಅವರು ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ಪೋಷಕರು ಮತ್ತು ಶಿಕ್ಷಕರು ಈ ಆದೇಶವನ್ನ ಸ್ವಾಗತಿಸಿದ್ದಾರೆ.

ಖಾಸಗಿ ಶಾಲೆಗಳಿಗೂ ಕಡ್ಡಾಯ:

ಈ ಆದೇಶವು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ಮುಂಜಾನೆಯೇ ಶಾಲೆ ಆರಂಭಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಬದಲಾವಣೆಯಿಂದ ಮಕ್ಕಳಿಗೆ ಬೆಳಗಿನ ಚಳಿಯಿಂದ ರಕ್ಷಣೆ ಸಿಗಲಿದ್ದು, ನಿರಾತಂಕವಾಗಿ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಶಾಲೆಗೆ ತೆರಳುವಾಗ ಮಕ್ಕಳು ಚಳಿ ಇದೆ ಎಂದು ಶಾಲೆ ತಪ್ಪಿಸುವುದೂ ಸಹ ಕಡಿಮೆಯಾಗುತ್ತದೆ ಹಾಗೂ ಮಕ್ಕಳ ಆರೋಗ್ಯವೂ ಸಹ ಸುಧಾರಿಸುತ್ತದೆ.

Exit mobile version