ಬೆಂಗಳೂರು: ನಾಡಿನಾದ್ಯಂತ ಇಂದು ವೈಕುಂಠ ಏಕಾದಶಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ, ವಿಶೇಷವಾಗಿ ವೈಷ್ಣವ ಪಂಥದವರಿಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ದಿನವಾಗಿರುವ ವೈಕುಂಠ ಏಕಾದಶಿಗೆ ಅಪಾರ ಧಾರ್ಮಿಕ ಮಹಿಮೆ ಇದೆ. ಈ ದಿನ ಉಪವಾಸ, ವ್ರತ, ಜಪ–ತಪ ಹಾಗೂ ಭಗವಂತನ ಆರಾಧನೆಯ ಮೂಲಕ ಭಕ್ತರು ತಮ್ಮ ಜೀವನಕ್ಕೆ ಪುಣ್ಯವನ್ನು ಗಳಿಸುತ್ತಾರೆ ಎಂಬ ನಂಬಿಕೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.
ವೈಕುಂಠ ಏಕಾದಶಿಯಂದು ಶ್ರೀಮನ್ ನಾರಾಯಣನನ್ನು ಭಕ್ತಿಯಿಂದ ಪೂಜಿಸಿದರೆ ಪಾಪವಿಮೋಚನೆ ಆಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ದೃಢ ನಂಬಿಕೆ ಇದೆ. ಇದೇ ಕಾರಣಕ್ಕೆ ಇಂದು ರಾಜ್ಯದಾದ್ಯಂತ ಇರುವ ಶ್ರೀ ವೆಂಕಟೇಶ್ವರ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತರ ಮಹಾಪೂರವೇ ಹರಿದುಬಂದಿದೆ. ದೇವಾಲಯಗಳ ಬಳಿ ಸಾಲುಗಳು, ಭಜನೆ, ನಾಮಸ್ಮರಣೆಗಳಿಂದ ಭಕ್ತಿಮಯ ವಾತಾವರಣ ನಿರ್ಮಾಣವಾಗಿದೆ.
ಇಂದು ಮುಂಜಾನೆ 7.50 ರಿಂದ ನಾಳೆ ಬೆಳಗ್ಗೆ 5.00 ಗಂಟೆಯವರೆಗೆ ಏಕಾದಶಿ ತಿಥಿ ಇರುವುದರಿಂದ, ಇಡೀ ದಿನ ಹಾಗೂ ರಾತ್ರಿಯವರೆಗೂ ದೇಗುಲಗಳಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನಡೆಯಲಿವೆ. ಈ ದಿನ ದೇವಾಲಯಗಳಲ್ಲಿ ವೈಕುಂಠದ್ವಾರವನ್ನು ತೆರೆಯಲಾಗುತ್ತದೆ. ಆ ದ್ವಾರದಿಂದ ದರ್ಶನ ಪಡೆದರೆ ಭಕ್ತರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇರುವ ಪ್ರಸಿದ್ಧ ದೇವಾಲಯಗಳಿಗೆ ಇಂದು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ನಗರದ ಇಸ್ಕಾನ್ ದೇವಸ್ಥಾನ, ಚಿಕ್ಕತಿರುಪತಿ, ಮಲ್ಲೇಶ್ವರದ ಟಿಟಿಡಿ ಶ್ರೀನಿವಾಸ ದೇವಾಲಯ ಸೇರಿದಂತೆ ಹಲವು ಪ್ರಸಿದ್ಧ ಕ್ಷೇತ್ರಗಳಲ್ಲಿ ಬೆಳಗ್ಗಿನಿಂದಲೇ ಭಕ್ತರ ದಟ್ಟಣೆ ಹೆಚ್ಚಾಗಿದೆ. ಕೆಲವೆಡೆ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ವಿಶೇಷ ಕ್ಯೂ ವ್ಯವಸ್ಥೆ, ಟೋಕನ್ ವ್ಯವಸ್ಥೆ ಹಾಗೂ ಹೆಚ್ಚುವರಿ ಸೇವೆಗಳನ್ನು ಮಾಡಲಾಗಿದೆ.
ವೈಕುಂಠ ಏಕಾದಶಿಯಂದು ಬಹುತೇಕ ಭಕ್ತರು ಸಂಪೂರ್ಣ ಉಪವಾಸ ಅಥವಾ ಫಲಾಹಾರ ವ್ರತವನ್ನು ಆಚರಿಸುತ್ತಾರೆ. ಕೆಲವರು ಹಗಲಿಡೀ ಉಪವಾಸವಿದ್ದು, ರಾತ್ರಿ ಭಜನೆ–ಹರಿಕಥೆಗಳಲ್ಲಿ ಭಾಗವಹಿಸಿ, ನಾಳೆ ದ್ವಾದಶಿಯಂದು ಪಾರಣೆ ಮಾಡುತ್ತಾರೆ. ದೇವಾಲಯಗಳಲ್ಲಿ ವಿಶೇಷ ನೈವೇದ್ಯ, ತೀರ್ಥ–ಪ್ರಸಾದ ಹಾಗೂ ಲಾಡು ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.
ಭಕ್ತರ ಸುರಕ್ಷತೆಗಾಗಿ ಎಲ್ಲಾ ಪ್ರಮುಖ ದೇವಾಲಯಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸಂಚಾರ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ಮತ್ತು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.
ವೈಕುಂಠ ಏಕಾದಶಿ ಹಬ್ಬವು ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿ ನಾಡಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
