ಬೆಂಗಳೂರು: ಯುಗಾದಿ ಹಬ್ಬದ ಹೊಸ ವರ್ಷದ ತೊಡಕು ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಾಂಸ ಖರೀದಿಗೆ ಜನರು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ.. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಮುಂಜಾನೆಂದೇ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಗುಡ್ಡೆ ಮಾಂಸ ಖರೀದಿಗೆ ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ಈ ಬಾರಿ ವಿಶೇಷವಾಗಿ ಗುಡ್ಡೆ ಮಾಂಸಕ್ಕೆ ಭಾರೀ ಬೇಡಿಕೆ ಕಂಡುಬಂದಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಯಲಿಯೂರು ಗ್ರಾಮಕ್ಕೆ ಮಾಂಸ ಖರೀದಿಗೆ ಆಗಮಿಸಿದ್ದಾರೆ.
ಮಾಂಸ ಪ್ರಿಯರ ಬೇಡಿಕೆಯನ್ನು ಪೂರೈಸಲು ವ್ಯಾಪಾರಿಗಳು ರಾತ್ರಿಯಿಂದಲೇ ಮೇಕೆಗಳನ್ನು ಕಟಾವು ಮಾಡಿ ಮಾಂಸ ಸಿದ್ಧಪಡಿಸಲು ಮುಂದಾಗಿದ್ದರು. ಬೆಳಗ್ಗಿನ ಜಾವದಿಂದಲೇ ಅಂಗಡಿಗಳ ಮುಂದೆ ಜನರು ಕ್ಯೂನಲ್ಲಿ ನಿಂತು ಮಾಂಸ ಖರೀದಿಸಲು ಕಾಯುತ್ತಿದ್ದು, ಕೆಲವರು ಮುಂಜಾನೆ 4-5 ಗಂಟೆಯಲ್ಲೇ ಬಂದು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಈ ಬಾರಿ ಸಾವಿರಾರು ಕೆಜಿ ಮಾಂಸ ಮಾರಾಟವಾಗಿದ್ದು, ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಿದೆ. ಗುಡ್ಡೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕೆಲ ಕಡೆಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ಮಾಂಸ ಬೇಗನೆ ಮುಗಿದಿದೆ. ಇದರಿಂದಾಗಿ ಕೆಲವರು ಮತ್ತಷ್ಟು ದೂರದ ಗ್ರಾಮಗಳಿಗೆ ತೆರಳಿ ಮಾಂಸ ಖರೀದಿಸಲು ಮುಂದಾಗಿದ್ದಾರೆ.
ಸಕ್ಕರೆನಾಡು ಎಂದೇ ಪ್ರಸಿದ್ಧವಾದ ಮಂಡ್ಯ ಜಿಲ್ಲೆಯಲ್ಲೂ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗುಡ್ಡೆ ಮಾಂಸವನ್ನು ಹಂಚುವುದು ಕಂಡುಬಂದರೆ, ನಗರ ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ ಜನರು ಕ್ಯೂ ನಿಂತು ಮಾಂಸ ಖರೀದಿಸಿದರು. ಯುಗಾದಿ ಹಬ್ಬದ ವರ್ಷದ ತೊಡಕಿನ ಸಂಭ್ರಮದಲ್ಲಿರುವ ಜನರು ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ..
ಯುಗಾದಿ ಹಬ್ಬದ ಹೊಸ ವರ್ಷದ ಆರಂಭವನ್ನು ಜನರು ಭರ್ಜರಿಯಾಗಿ ಸ್ವಾಗತಿಸಿದ್ದು, ಮಾಂಸ ಖರೀದಿಯಲ್ಲಿ ತೊಡಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲೂ ಒಂದೇ ರೀತಿಯ ಉತ್ಸಾಹ ಕಂಡುಬಂದಿದೆ.
