ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಕಳುಹಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್‌

Untitled design (33)

ಉಡುಪಿ, ನವೆಂಬರ್ 21: ಭಾರತೀಯ ನೌಕಾಪಡೆಗೆ ಯುದ್ಧನೌಕೆಗಳು ಮತ್ತು ಟಗ್‌ಗಳನ್ನು ನಿರ್ಮಿಸುವ ಕೊಚ್ಚಿನ್ ಶಿಪ್‌ಯಾರ್ಡ್‌ನ ಮಲ್ಪೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಉತ್ತರ ಪ್ರದೇಶ ಮೂಲದ ಉದ್ಯೋಗಿಗಳನ್ನು ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದಡಿ ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ರೋಹಿತ್ ಕುಮಾರ್ (26) ಮತ್ತು ಸಂತ್ರಿ (28) ಎಂದು ಗುರುತಿಸಲಾಗಿದೆ. ಇಬ್ಬರೂ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯವರಾಗಿದ್ದಾರೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಭಾರತದ ಪ್ರಮುಖ ರಕ್ಷಣಾ ಹಡಗು ನಿರ್ಮಾಣ ಸಂಸ್ಥೆಯಾಗಿದ್ದು, ಇದರ ಪ್ರಧಾನ ಕಚೇರಿ ಕೇರಳದ ಎರ್ನಾಕುಲಂನಲ್ಲಿದೆ. ಮಲ್ಪೆಯಲ್ಲಿ ಇರುವ ಈ ಘಟಕವು ಭಾರತೀಯ ನೌಕಾಪಡೆಗೆ ಟಗ್‌ಗಳು ಮತ್ತು ಇತರ ಹಡಗುಗಳನ್ನು ನಿರ್ಮಿಸುತ್ತಿದೆ. ಆರೋಪಿಗಳು ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್ ಎಂಬ ಗುತ್ತಿಗೆ ಸಂಸ್ಥೆಯ ಮೂಲಕ ಈ ಯಾರ್ಡ್‌ಗೆ ಗುತ್ತಿಗೆ ಆಧಾರದಲ್ಲಿ ಸೇರಿಕೊಂಡಿದ್ದರು.

ತನಿಖೆಯಲ್ಲಿ ಬೆಳಕಿಗೆ ಬಂದಿರುವ ಅತ್ಯಂತ ಗಂಭೀರ ವಿಚಾರವೆಂದರೆ ಕಳೆದ ಒಂದೂವರೆ ವರ್ಷಗಳಿಂದ ಇಬ್ಬರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಜೊತೆ ಸಂಪರ್ಕದಲ್ಲಿದ್ದು, ಹಡಗು ನಿರ್ಮಾಣಕ್ಕೆ ಸಂಬಂಧಿಸಿದ ಗೋಪ್ಯ ತಾಂತ್ರಿಕ ಚಿತ್ರಗಳು, ಡಿಸೈನ್ ವಿವರಗಳು, ಯಾರ್ಡ್‌ನ ಭದ್ರತಾ ವ್ಯವಸ್ಥೆಯ ಮಾಹಿತಿ ಮತ್ತು ಸಿಬ್ಬಂದಿ ವಿವರಗಳನ್ನು ವಾಟ್ಸ್‌ಆ್ಯಪ್ ಮತ್ತು ಇತರ ಸೋಶಿಯಲ್ ಮೀಡಿಯಾ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು. ರೋಹಿತ್ ಕೇರಳದ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿಯೇ ಈ ಚಟುವಟಿಕೆ ಆರಂಭಿಸಿದ್ದು, ಮಲ್ಪೆಗೆ ವರ್ಗಾವಣೆಯಾದ ನಂತರವೂ ಮುಂದುವರಿಸಿದ್ದಾನೆ.

ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಶ್ರೀ ಜೋಸ್ ವಿ.ಜೆ. ಮ್ಯಾಥ್ಯೂ ಅವರು ಉದ್ಯೋಗಿಗಳ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಮ್ ಶಂಕರ್ ಅವರಿಗೆ ದೂರು ಸಲ್ಲಿಸಿದ್ದರು. ಇದರ ಆಧಾರದಲ್ಲಿ ಉಡುಪಿ ಎಎಸ್‌ಪಿ ಶಿಲ್ಪಾ ಎಚ್.ಎಸ್. ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಡಿಜಿಟಲ್ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಯಿತು. ಇದರಿಂದ ಪಾಕಿಸ್ತಾನದ ನಂಬರ್‌ಗಳಿಗೆ ಕಳುಹಿಸಿದ ಸಾವಿರಾರು ಸಂದೇಶಗಳು ಮತ್ತು ಫೋಟೋಗಳು ಪತ್ತೆಯಾಗಿವೆ.

ಆರೋಪಿಗಳು ಮಾಹಿತಿ ಕಳುಹಿಸಿ ಬದಲಾಗಿ ಹಣ ಪಡೆಯುತ್ತಿದ್ದರು ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೋಹಿತ್‌ನ ಬ್ಯಾಂಕ್ ಖಾತೆಗೆ ಕೆಲವು ಬಾರಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 121 (ರಾಷ್ಟ್ರದ್ರೋಹ), 121A (ಯುದ್ದಕ್ಕೆ ಸಹಾಯ), 120B (ಕ್ರಿಮಿನಲ್ ಕುಮ್ಮಕ್ಕು), ಅಧಿಕೃತ ಗೌಪ್ಯತೆ ಕಾಯ್ದೆ 1923 ಸೆಕ್ಷನ್ 3, 4, 5 ಮತ್ತು UAPA ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.

ಉಡುಪಿ ಎಸ್‌ಪಿ ಡಾ. ಹರಿರಾಮ್ ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ಇದೊಂದು ಗಂಭೀರ ರಾಷ್ಟ್ರೀಯ ಭದ್ರತಾ ಪ್ರಕರಣ. ಈಗಾಗಲೇ ಎನ್‌ಐಎ ಮತ್ತು ಐಬಿ ಸಂಸ್ಥೆಗಳಿಗೆ ಮಾಹಿತಿ ರವಾನಿಸಲಾಗಿದೆ. ಹೆಚ್ಚಿನ ತನಿಖೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೊಚ್ಚಿನ್ ಶಿಪ್‌ಯಾರ್ಡ್ ಆಡಳಿತ ಮಂಡಳಿ ಈ ಘಟನೆಯಿಂದ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಎಲ್ಲಾ ಗುತ್ತಿಗೆ ಉದ್ಯೋಗಿಗಳ ಪುನರ್ ಪರಿಶೀಲನೆ ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Exit mobile version