ಪತ್ನಿಯ ಕುತ್ತಿಗೆ, ಮುಖಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿ

Untitled design 2025 07 06t153753.961

ತುಮಕೂರು: ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಹೊರವಲಯದ ಅಂತರಸನಹಳ್ಳಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಗೀತಾ (20) ಕೊಲೆಯಾದ ಮಹಿಳೆ. ನವೀನ್‌‌ ಪತ್ನಿಯನ್ನೇ ಕೊಂದ ಪತಿ.

ಈ ದಂಪತಿಗೆ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಇವರಿಗೆ ಒಂದು ವರ್ಷದ ಗಂಡು ಮಗುವಿದ್ದು, ಗೀತಾ ತನ್ನ ಮಗುವನ್ನು ತವರು ಮನೆಗೆ ಕಳುಹಿಸಿದ್ದಳು. ಈ ದಂಪತಿ ಅಂತರಸನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನವೀನ್ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ಈ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಶನಿವಾರ ರಾತ್ರಿಯೂ ಸಹ ಗೀತಾ ಮತ್ತು ನವೀನ್ ನಡುವೆ ತೀವ್ರ ಗಲಾಟೆಯಾಗಿದೆ. ಈ ಗಲಾಟೆಯ ವೇಳೆ ಕುಡಿದ ಮತ್ತಿನಲ್ಲಿದ್ದ ಆರೋಪಿ ನವೀನ್, ತನ್ನ ಪತ್ನಿಯ ಕುತ್ತಿಗೆ ಮತ್ತು ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೊಲೆಯ ನಂತರ ನವೀನ್ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ರವಿವಾರ ಬೆಳಿಗ್ಗೆ ಮನೆಯ ಮಾಲೀಕ ಬಾಡಿಗೆ ಸಂಗ್ರಹಿಸಲು ಬಂದಾಗ, ಗೀತಾ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡು ತಕ್ಷಣ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು  ಪರಿಶೀಲಿಸಿದ್ದಾರೆ. ಗೀತಾಳ ದೇಹದ ಮೇಲೆ ಚಾಕುವಿನಿಂದ ಇರಿದ ಹಲವು ಗಾಯದ ಗುರುತುಗಳಿದ್ದವು.

ಪೊಲೀಸರು ಆರೋಪಿ ನವೀನ್‌ಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ದಂಪತಿಯ ನಡುವಿನ ವೈವಾಹಿಕ ಕಲಹ ಮತ್ತು ನವೀನ್‌ನ ಕುಡಿತದ ಚಟ ಈ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Exit mobile version