ಮದುವೆ ಮಾಡಿಸಲಿಲ್ಲ ಎಂದು ತಾಯಿಯನ್ನೇ ಕೊಲೆಗೈದ ಪಾಪಿ ಪುತ್ರ

Untitled design 2026 04 01T224226.970

ಹಾಸನ, ಏಪ್ರಿಲ್ 1: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಪುತ್ರನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಮೃತಪಟ್ಟವರು ಗಂಗಮ್ಮ (65) ಎಂದು ಗುರುತಿಸಲಾಗಿದೆ. ಆರೋಪಿ ಅವರ ಪುತ್ರ ಉಮಾಶಂಕರ (40). ಚಿಕಿತ್ಸೆ ಫಲಕಾರಿಯಾಗದೆ ಗಂಗಮ್ಮ ಅವರು ಮಾರ್ಚ್ 30 ರಂದು ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.

ಘಟನೆಯ ಹಿನ್ನೆಲೆ
ಕಳೆದ ಎರಡು ವರ್ಷಗಳಿಂದ ಉಮಾಶಂಕರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಸ್ ಆಗುವಾಗ ಅವರಿಗೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಉಮಾಶಂಕರ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅಂದಿನಿಂದ ಅವರು ಒಮ್ಮೊಮ್ಮೆ ಬುದ್ಧಿ ಭ್ರಮಣೆಯಾದವನಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ. 

ಮದುವೆಯೇ ತಾಯಿ ಹತ್ಯೆಗೆ ಕಾರಣ
ಪದೇ ಪದೇ ತಾಯಿಯೊಂದಿಗೆ ಮದುವೆ ಮಾಡಿಸುವಂತೆ ಜಗಳವಾಡುತ್ತಿದ್ದ ಉಮಾಶಂಕರ, ಮಾರ್ಚ್ 26 ರಂದು ಮತ್ತೆ ಈ ವಿಚಾರಕ್ಕೆ ತಾಯಿ ಗಂಗಮ್ಮನೊಂದಿಗೆ ವಾಗ್ವಾದಕ್ಕೆ ಇಳಿದಿದ್ದನು. ವಾಗ್ವಾದ ವಿಕೋಪಕ್ಕೆ ತಿರುಗಿ, ಕೋಪದಿಂದ ಉಮಾಶಂಕರ ಮೊದಲು ತನ್ನ ಕೈಯಿಂದಲೇ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

ತಾಯಿಯಾದ ಗಂಗಮ್ಮ ಅವರು ಈ ಹೊಡೆತ ತಾಳಲಾರದೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.. ನಂತರ ಅವನು ತಾಯಿಯ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾನೆ. ತೀವ್ರವಾಗಿ ಗಾಯಗೊಂಡ ಗಂಗಮ್ಮ ಅವರನ್ನು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಸಾವು
ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದರು. ಗಂಭೀರವಾಗಿ ಗಾಯಗಳಾಗಿದ್ದರಿಂದ ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದ ಗಂಗಮ್ಮ ಅವರು ಮಾರ್ಚ್ 30 ರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಶ್ರವಣಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಉಮಾಶಂಕರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. 

Exit mobile version