ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಹೈಕಮಾಂಡ್ನ ಸೂಚನೆಯಂತೆ ಇಬ್ಬರೂ ನಾಯಕರು ಒಗ್ಗಟ್ಟಿನ ಸಂದೇಶ ನೀಡಿದ್ದು, “ಹೈಕಮಾಂಡ್ ಏನೇ ಹೇಳಿದರೂ ಕೇಳ್ತೀವಿ. ಗೊಂದಲ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, “ಇಂದು ಡಿಕೆ ಶಿವಕುಮಾರ್ ಅವರು ನಮ್ಮ ಮನೆಗೆ ಬಂದಿದ್ದರು. ಇಬ್ಬರೂ ಒಟ್ಟಿಗೆ ಬ್ರೇಕ್ಫಾಸ್ಟ್ ಮಾಡಿದ್ವೆ. ಕಾಂಗ್ರೆಸ್ ಜನರಲ್ ಸೆಕ್ರಟರಿ ವೇಣುಗೋಪಾಲ್ ಅವರು ಮೊನ್ನೆಯೇ ಕರೆ ಮಾಡಿದ್ದರು. ಡಿಕೆಶಿಗೂ ಕರೆ ಮಾಡಿ, ನಾನು ಅವರ ಮನೆಗೆ ಹೋಗಿ ಮಾತನಾಡಿ ಎಂದು ಹೇಳಿದ್ದರು. ಅದರಂತೆ ನಾನು ಕರೆದು, ನಮ್ಮ ಮನೆಗೆ ಬ್ರೇಕ್ಫಾಸ್ಟ್ಗೆ ಬನ್ನಿ ಅಂತ ಹೇಳಿದ್ದೆ. ಇನ್ನೊಂದು ದಿನ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತಾ ಹೇಳಿದ್ದೇನೆ,” ಎಂದು ಹೇಳಿದರು. ಡಿಕೆಶಿ ಅವರೂ ಒಂದೇ ಧ್ವನಿಯಲ್ಲಿ, “ಈಗಲೂ ಗೊಂದಲ ಇಲ್ಲ, ನಾಳೆಯಿಂದಲೂ ಇರೋದಿಲ್ಲ. ಹೈಕಮಾಂಡ್ನ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ,” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ತುಂಬಾ ಸ್ಪಷ್ಟವಾಗಿ ಹೇಳಿದರು:
“ರಾಜಕೀಯವಾಗಿ ನಮ್ಮಿಬ್ಬರದ್ದು ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಇಬ್ಬರೂ ನಡೆಯುತ್ತೇವೆ. ಸಿಎಂ ಹೇಳಿದ್ದಕ್ಕೆ ನಾನು ವಿರೋಧ ಮಾಡೋದಿಲ್ಲ. ಇಬ್ಬರೂ ಸೇರಿ ಕಾಂಗ್ರೆಸ್ ಸರ್ಕಾರ ತಂದಿದ್ದೇವೆ, ಜನರಿಗೆ ಕೊಟ್ಟ ಮಾತಿನಂತೆ ಸೇವೆ ಮಾಡ್ತಿದ್ದೇವೆ. ಪಕ್ಷವನ್ನು ಬೆಳೆಸೋದು ನಮ್ಮಿಬ್ಬರ ಕರ್ತವ್ಯ. ಮುಂದೆಯೂ ಒಟ್ಟಿಗೆ ಕೆಲಸ ಮಾಡಿ 2028ರಲ್ಲಿಯೂ ಅಧಿಕಾರಕ್ಕೆ ತರುತ್ತೇವೆ.”
ಅವರ ನಂತರ ಸಿದ್ದರಾಮಯ್ಯ ಅವರು ಮೈಕ್ ತೆಗೆದುಕೊಂಡು, “ಹೈಕಮಾಂಡ್ ಕೊಟ್ಟ ಸೂಚನೆಯಂತೆಯೇ ನಡೆಯುತ್ತೇವೆ.ನಾವು ಇಬ್ಬರೂ ಒಟ್ಟಿಗೆ ಹೋಗ್ತೀವಿ. ಹೈಕಮಾಂಡ್ ಹೇಳಿದಂತೆ ಇಬ್ರೂ ನಡೆಯುತ್ತೇವೆ. ಗೊಂದಲ ಬಗೆಹರಿಸಿಕೊಳ್ಳಿ ಅಂತ ಹೈಕಮಾಂಡ್ ಹೇಳಿದೆ. ಈಗಲೂ ಗೊಂದಲ ಇಲ್ಲ, ನಾಳೆಯಿಂದಲೂ ಇರೋದಿಲ್ಲ,” ಎಂದು ಘಂಟಾಗೋಷ್ಠಿ ಮಾಡಿದರು.





