ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿರುವ ಸಾಮಾಜಿಕ ಮತ್ತು ಆರ್ಥಿಕ ಜಾತಿಗಣತಿ ಪಾರದರ್ಶಕವಾಗಿಲ್ಲ. ಸ್ವಹಿತಕ್ಕಾಗಿ ತಮಗೆ ಬೇಕಾದ ಸಮುದಾಯಗಳಿಗೆ ಅನುಕೂಲಮಾಡಿಕೊಡುವ ಉದ್ದೇಶದಿಂದ ಪೂರ್ವಯೋಜಿತವಾಗಿ ಸೃಷ್ಟಿಸಿದ ಜಾತಿಗಣತಿಯಾಗಿದೆ ಎಂದು ತೈಲೇಶ್ವರ ಮಠದ ಪೂರ್ಣನಂದ ಪುರಿ ಮಹಾಸ್ವಾಮೀಜಿ ಕಿಡಿಕಾರಿದ್ದಾರೆ.
ಅರ್ಹ ಹಿಂದುಳಿದ ವರ್ಗಗಳಿಗೆ ಅನುಕೂಲಮಾಡಿಕೊಡುವ ಉದ್ದೇಶ ಇದರಲ್ಲಿ ಕಾಣುತ್ತಿಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ 1995 ಕಲಂ – 11/01 ನಿಬಂಧನೆಯಂತೆ ಕ್ರಮ ಕೈಗೊಳ್ಳಲು ಸರ್ವೆಯ ಸಿದ್ದತೆಯಲ್ಲಿ ಕಂಡುಬಂದಿರುವುದಿಲ್ಲ. ಉಪ ಪಂಗಡಗಳ ಸರ್ವೆ ಮಾಡುವುದರಿಂದ ಈಗಾಗಲೇ ಜಾತಿಗಳ ವೈಷಮ್ಯವಿರುವ ಕಡೆ ಉಪ ಜಾತಿಗಳಲ್ಲಿ ವೈಷಮ್ಯ ಬೆಳೆದು ಹಿಂದುಳಿದ ಜಾತಿಗಳಲ್ಲಿ ಒಡಕು ಉಂಟಾಗುತ್ತದೆ. ಆದ್ದರಿಂದ ಉಪ ಜಾತಿಗಳ ಸರ್ವೆ ಮಾಡುವುದನ್ನು ಕೈಬಿಟ್ಟು, ಜಾತಿವಾರು ಸರ್ವೆ ಮಾಡುವುದು ಒಳಿತು. ಉಪಪಂಗಡಗಳ ಕೆಲವು ತಪ್ಪು ಮಾಹಿತಿಗಳನ್ನು ಪ್ರಕಟಣೆ ಜಾರಿಗಳಲ್ಲಿ ಒಳಮೀಸಲಾತಿ ಗದ್ದಲ ಉಂಟಾಗುವ ಸಂಭವ ಬರುತ್ತದೆ ಎಂದರು.
ಕರ್ನಾಟಕದಲ್ಲಿ ಎಲ್ಲಾ ಆಯೋಗಗಳ ಸರಾಸರಿ ಪರಿಗಣಿಸಿದರೆ 80 ಜಾತಿಗಳಿವೆ ಉಪಪಂಗಡ ಸೇರಿದರೆ ಆಯೋಗದ ಲೆಕ್ಕದಂತೆ 1351 ಆಗಿದೆ. ಅಂದಿನ ಅಧ್ಯಕ್ಷ ಕಾಂತರಾಜುರವರು ಈಗಾಗಲೇ ಸುಮಾರು ರೂ. 22.00 ಕೋಟಿಗೂ ಹೆಚ್ಚು ಖರ್ಚು ಮಾಡಿ ಉದ್ದೇಶಿತ ಸರ್ವೆಯ ಫಾರಂಗಳನ್ನು ಮುದ್ರಿಸಲಾಗಿದೆ ಅವೆಲ್ಲವೂ ನಿಷ್ಪ್ರಯೋಜಕವಾಗುತ್ತದೆ ಈಗ ಸರ್ವೆ ಮಾಡುತ್ತೇವೆ. ಮೀಸಲಾತಿ ನಿಗಧಿಪಡಿಸುವಾಗ ನಿಮ್ಮನ್ನು ಸಹ ಕರೆದು ಚರ್ಚಿಸುತ್ತೇವೆಂದು ತಿಳಿಸಿದರು.
ಸರ್ಕಾರ ಪೂರ್ವ ಯೋಜಿತವಾಗಿ ಪಡೆದಿರುವ ವರದಿಯನ್ನು ಅವಲೋಕಿಸಿದಾಗ ಸರ್ವೆ ನಂತರ ಅರ್ಹರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶ ಇರುವುದಿಲ್ಲ. ಮೀಸಲಾತಿ ವಂಚಿತ ವರ್ಗದವರಿಗೆ ಮೀಸಲಾತಿಯನ್ನು ಗಗನ ಕುಸುಮವಾಗಿಸುವ ಮತ್ತು ಮೀಸಲಾತಿಯನ್ನು ಪಡೆದು ಮುಂದೆ ಬಂದಿರುವ ವರ್ಗಗಳಿಗೆ ಇನ್ನು ಹೆಚ್ಚಿನ ಮೀಸಲಾತಿ ಕಲ್ಪಿಸುವ ಸ್ವಜನ ಪಕ್ಷಪಾತದ ತಂತ್ರವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳೇ ಹೇಳುವಂತೆ 1995 ರ ಹಿಂದುಳಿದ ವರ್ಗಗಳ ಆಯೋಗದ terms of reference coloumn 11(1) ರ ಪ್ರಕಾರ 30 ವರ್ಷದಿಂದ ಚಾಲ್ತಿಯಲ್ಲಿರುವ ಆಯೋಗದ ತೀರ್ಪಿನಂತೆ ಹೆಚ್ಚಿನ ಸೌಲಭ್ಯ (benefit) ಪಡೆದಿರುವ ಮತ್ತು ಸೌಲಭ್ಯ ವಂಚಿತರ ವಿವರಗಳನ್ನು ಸರ್ವೆಯಿಂದ ಪಡೆದ ಅಂಕಿ-ಅಂಶಗಳ ಪ್ರಕಾರ ಸಾರ್ವಜನಿಕರ ಗಮನಕ್ಕೆ ಪ್ರಕಟಣೆ ಮಾಡಬೇಕಿತ್ತು. ಹಿಂದುಳಿದ ವರ್ಗಗಳ ಮೀಸಲಾತಿ ಹೆಸರಿನಲ್ಲಿ ಶಕ್ತಿಹೀನ / ದುರ್ಬಲ ಸಮುದಾಯಗಳ ಲಾಭವನ್ನು ಕೆಲವು ಶಕ್ತಿಯಿರುವ ಜಾತಿಗಳು ಲಾಭವನ್ನು ಪಡೆದುಕೊಂಡಿವೆ. ಹಲವು ಶಕ್ತಿಹೀನ / ದುರ್ಬಲ ಜಾತಿಗಳು ಮೀಸಲಾತಿ ಇದ್ದರೂ ತಮಗೆ ಸಿಗಬೇಕಾದ ಸೌಲಭ್ಯವನ್ನು ಪಡೆದಿಲ್ಲ. ಇದನ್ನು ಮರೆಮಾಚಿ ಮೀಸಲಾತಿಯ ಹೆಚ್ಚಿನ ಕ್ರೀಂ ತಿಂದವರು ಈ ಜಾತಿಗಣತಿಯ ಪ್ರಕಾರ ಪ್ರಮೋಷನ್ ಸಿಕ್ಕಿದೆ. ಅಂದರೆ ಇನ್ನು ಹೆಚ್ಚಿನ ಸೌಲಭ್ಯ ಸಿಗುವಂತೆ ರೂಪಿಸಿದ್ದಾರೆ. ಇದರಿಂದ ಸಣ್ಣ ಸಣ್ಣ ಕೋಮುಗಳಿಗೆ ಅನ್ಯಾಯವಾಗಿದೆ, ಮುಂದೆಯೂ ಅನ್ಯಾಯ ವಾಗುವ ಸಂಭವವಿದೆ. ಮುಂದುವರೆದ ಜಾತಿಗಳ ಬಡವರಿಗೂ ಅನ್ಯಾಯವಾಗಿದೆ ಎಂದರು.
ಸರ್ವೆ ಅಂಕಿ-ಅಂಶಗಳಲ್ಲಿ ಕುರುಡು ಕಾಂಚಾಣ
ಮೊದಲನೇಯದಾಗಿ ಪ್ರತಿ ಜಾತಿಯ ಜನಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳಲು ತಾಲ್ಲೂಕು ಅಥವಾ ಜಿಲ್ಲಾವಾರು ಪ್ರತಿ ಜಾತಿಯ ಸಂಖ್ಯೆಯನ್ನು ವರದಿಯಲ್ಲಿ ತಿಳಿಸಿಲ್ಲ. ಇದರಿಂದ ಜನಸಂಖ್ಯೆಯನ್ನು ತಮಗೆ ಬೇಕಾದ ಹಾಗೆ ಸೃಷ್ಟಿಸಿರುವ ಶಂಕೆಯಿದೆ. ರಾಜ್ಯ ಮಟ್ಟದಲ್ಲಿ ಮಾತ್ರ ಜನಸಂಖ್ಯೆಯನ್ನು ಪ್ರಕಟಣೆ ಮಾಡಿರುವುದು ಅಂಕಿ-ಅಂಶಗಳ ಕುರುಡು ಕಾಂಚಾಣ ಆಗಿದೆಯೆಂದು ನೇರವಾಗಿ ಶಂಕಿಸಬಹುದಾಗಿದೆ ಎಂದರು ಹೇಳಿದರು.
ಎಲ್.ಜಿ. ಹಾವನೂರು ಆಯೋಗ ಮತ್ತು ವೆಂಕಟಸ್ವಾಮಿ ಆಯೋಗ ಒಂದು ನಿರ್ಧಿಷ್ಟ ವಿದ್ಯಾರ್ಹತೆಯನ್ನು ಒಂದು ನಿರ್ಧಿಷ್ಟ ವರ್ಷಕ್ಕೆ ನಿಗಧಿಪಡಿಸಿತ್ತು. ಆ ಆಧಾರದಲ್ಲಿ ಆಯಾ ಜಾತಿಯ ಮೀಸಲಾತಿಯನ್ನು ಪರಿಗಣಿಸಲಾಗಿತ್ತು.
ಅನುಬಂಧ 3 ರ ಪ್ರಕಾರ ಸರ್ಕಾರಿ ನೌಕರಿಯಲ್ಲಿ ಪ್ರತಿ ಜಾತಿಯ ನೌಕರರ ಸಂಖ್ಯೆಯನ್ನು ರಾಜ್ಯ ಸರ್ಕಾರದಲ್ಲಿ ಇರುವ ಒಟ್ಟು ಸರ್ಕಾರಿ ನೌಕರರ ಸಂಖ್ಯೆಗೆ ಹೋಲಿಕೆ ಮಾಡಲು ಪ್ರತಿ ಜಾತಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿಯ ಪ್ರಕಾರ ಅಂಕಿ-ಅಂಶಗಳನ್ನು ಪ್ರಕಟಣೆ ಮಾಡಿಲ್ಲ. ಎಲ್.ಜಿ. ಹಾವನೂರು ಆಯೋಗ ಮತ್ತು ವೆಂಕಟಸ್ವಾಮಿ ಆಯೋಗಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿ ಜಾತಿವಾರು ಪಡೆದಿರುವ ಸರ್ಕಾರಿ ನೌಕರಿಯ ಹುದ್ದೆಯ ವಿವರವನ್ನು ಪ್ರಕಟಿಸಿ ಆ ಆಧಾರದಲ್ಲಿ ಸಂವಿಧಾನ 16(4) ರ ಪ್ರಕಾರ ಮೀಸಲಾತಿ ನಿಗಧಿ ಪಡಿಸಲು ಸಹಾಯವಾಗಿದೆ. ಆದರೆ ಇಲ್ಲಿ ಆ ಮಾಹಿತಿ ಇಲ್ಲ. ವರದಿಯಲ್ಲಿ ಇನ್ನು ಹಲವಾರು ಅವೈಜ್ಞಾನಿಕ ಮಾಹಿತಿಗಳಿವೆ. ಜನಸಂಖ್ಯೆ ಅಂಕಿ ಅಂಶಗಳಲ್ಲಿ ಊಹಿಸಲಾರದಷ್ಟು ವ್ಯತ್ಯಾಸವನ್ನು ಕಾಣಬಹುದು ಎಂದು ತಿಳಿಸಿದರು.
ಎಲ್.ಜಿ ಹಾವನೂರು ಆಯೋಗ ಮತ್ತು ವೆಂಕಟಸ್ವಾಮಿ ಆಯೋಗಗಳ ಪ್ರಕಾರ ಕರ್ನಾಟಕದ ಜಾತಿಗಳ ಸಂಖ್ಯೆ ಕೇವಲ ಶೇ. 0.05 ಯಿಂದ ಶೇ. 01 ಆಗಿದೆ. ಆದರೆ ಪ್ರಸ್ತುತ ಆಯೋಗದಲ್ಲಿ ತುಂಬಾ ವ್ಯತ್ಯಾಸವಿದೆ .ಉದಾಹರಣೆ ಗಾಣಿಗರ ಸಮುದಾಯ, ಲಿಂಗಾಯತ ಗಾಣಿಗರನ್ನು ಬಿಟ್ಟು 18 ಜಿಲ್ಲೆಗಳಲ್ಲಿದೆ. ಗಾಣಿಗರಲ್ಲಿ ಜ್ಯೋತಿಪಣ, ಶಿವಜ್ಯೋತಿಪಣ, ಒಳಪಂಗಡ ಗಾಣಿಗರ ಒಟ್ಟು ಸಂಖ್ಯೆಯು ಸುಮಾರು ಶೇ. 70 ರಷ್ಟಿದೆ. ನಾನು ಅಧ್ಯಕ್ಷನಾಗಿ ಮನೆಮನೆಯ ಸರ್ವೆ ಮಾಡಿರುವ ಪ್ರಕಾರ ಗಾಣಿಗರ ಸಂಖ್ಯೆಯು ಶೇ 1.12 ರಷ್ಟು ಅಂದರೆ, ಸುಮಾರು 7 ಲಕ್ಷ ಜನ ಸಂಖ್ಯೆ ಇರಬೇಕು. ಇದರಲ್ಲಿ ಜ್ಯೋತಿಪಣ ಗಾಣಿಗರನ್ನು 1800 ರಷ್ಟು ತೋರಿಸಲಾಗಿದೆ. ಜ್ಯೋತಿ ನಗರದ ವೈಶ್ಯರನ್ನು 1500 ರಷ್ಟು ತೋರಿಸಲಾಗಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಜ್ಯೋತಿ ಪಣ ಸಂಖ್ಯೆ 8,000 ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇದೇ ರೀತಿ ಇತರೆ ಎಲ್ಲಾ ಜಾತಿಗಳಲ್ಲಿಯೂ ವ್ಯತ್ಯಾಸವಿರುತ್ತದೆ.
ಒಂದು ಜಾತಿಯ ಒಳಪಂಗಡಗಳಿಗೆ ಕೋಡ್ ನಂಬರ್ ಅನ್ನು ಕೊಟ್ಟಿರುವುದು ಆಯಾ ಜಾತಿಯ ಒಳಪಂಗಡಗಳನ್ನು ಎಲ್ಲೆಲ್ಲೋ ಬಿಸಾಡಲಾಗಿದೆ ಎಂದರು.
ಎಲ್ಲಾ ಹಿಂದುಳಿದ ವರ್ಗಗಳು ಸೇರಿದಂತೆ ಕುರುಬ ಜನಾಂಗವನ್ನು ಹೊರತುಪಡಿಸಿ, ಒಳಪಂಗಡಗಳ ತಪ್ಪು ಅಂಕಿ ಅಂಶಗಳನ್ನು ನಮೂದಿಸಿ ದ್ವೇಷವನ್ನು ಹುಟ್ಟಿಸಲಾಗಿದೆ. ಕುರುಬ ಜನಾಂಗದಲ್ಲಿ ಸುಮಾರು 25ಕ್ಕೂ ಹೆಚ್ಚು ಒಳಪಂಗಡಗಳಿದ್ದರೂ ಅದರ ಅಂಕಿ-ಅಂಶ ತಿಳಿಸದೇ ಕುರುಬ ಮತ್ತು ಒಳಪಂಗಡಗಳನ್ನು ಸೇರಿಸಿ ಜನಸಂಖ್ಯೆ ನಮೂದಿಸಲಾಗಿದೆ. ಇದರಲ್ಲಿ ಸ್ವಹಿತ ಶಕ್ತಿಯನ್ನು ನೋಡಬಹುದಾಗಿದೆ ಎಂದು ಹೇಳಿದರು.
ಅದೇ ಮುಸ್ಲಿಂ ಸಮುದಾಯದಲ್ಲಿ ಸುಮಾರು 50ಕ್ಕೂ ಹೆಚ್ಚು ಒಳಪಂಗಡಗಳಿರಬಹುದು. ಆದರೆ ಅವರ ಒಳಪಂಗಡದ ಜನಸಂಖ್ಯೆಯನ್ನು ನಮೂದಿಸದೆ, ಒಟ್ಟು ಸಮುದಾಯದ ಜನಸಂಖ್ಯೆಯನ್ನು ನಮೂದಿಸಲಾಗಿದೆ. ಇದರಲ್ಲಿ ರಾಜಕೀಯ ನೋಡಬಹುದಾಗಿದೆ ಎಂದರು.
ಹಿಂದಿನ ಎರಡು ಆಯೋಗಗಳ ಪ್ರಕಾರ ಲಿಂಗಾಯಿತ ಮತ್ತು ಒಕ್ಕಲಿಗರ ಜನ ಸಂಖ್ಯೆಯಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದರೆ ಈ ಆಯೋಗ ಅವರ ಜನಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದರಲ್ಲಿಯೂ ರಾಜಕೀಯವನ್ನು ನೋಡಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಆಯೋಗದ ನಿಬಂಧನೆ ಪ್ರಕಾರ ರೂ. 162.00 ಕೋಟಿ ಖರ್ಚು ಮಾಡಿ ಪಡೆದ ವರದಿಯನ್ನು ಅನುಷ್ಠಾನಗೊಳಿಸಲು ಪಾರದರ್ಶಕತೆ ಇಲ್ಲದಿರುವುದರಿಂದ ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.
2015 ರಲ್ಲಿ ತಯಾರಿಸಿದ ವರದಿಯನ್ನು 2018 ರವರೆಗೆ ಪಡೆದು ಜಾರಿಗೊಳಿಸುವ ಬದ್ಧತೆ ಇಲ್ಲ. 2023 ರಲ್ಲಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಿಕ್ಕೆ ಬಂದರೂ ಅದೇ ವರ್ಷದಲ್ಲಿ ವರದಿ ಪಡೆದು ಲೋಪ ದೋಷಗಳನ್ನು ಸರಿಪಡಿಸಿ ಅನುಷ್ಠಾನಗೊಳಿಸಲು ಮುಂದಾಗಲಿಲ್ಲ. 2015-18 ರವರೆಗೆ 3 ವರ್ಷ ಕಾಲಾವಕಾಶವಿದ್ದರೂ ವರದಿ ಯಾಕೆ ಜಾರಿ ಮಾಡಿಲಿಲ್ಲ. ಪ್ರಸ್ತುತ ವರದಿಯನ್ನು ಸ್ವೀಕರಿಸಿದ ಮೇಲೆ 10 ವರ್ಷದ ಹಿಂದೆ ತಯಾರಿಸಿದ ವರದಿಯ ನೆನಪು ಮುಖ್ಯಮಂತ್ರಿಗಳಿಗೆ ಬರಲಿಲ್ಲವೇ? ಈಗ ನೆನಪಾಯಿತೇ? ಎಂದರು.
ದಿ. ಡಿ ದೇವರಾಜ ಅರಸು ರವರ ಆಡಳಿತ ಅವಧಿಯನ್ನು ಮೀರಿಸುವ ಹುಚ್ಚು ಚಪಲ
ದಿವಂಗತ ದೇವರಾಜ ಅರಸು ರವರು ಸೋಲಿಲ್ಲದ ಸರದಾರರಾಗಿ ಮುಖ್ಯಮಂತ್ರಿಯಾಗಿ ಎರಡನೇ ಬಾರಿಯೂ 8 ವರ್ಷ ಆಡಳಿತ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ತನ್ನ ಜಿಲ್ಲೆಯ ತನ್ನ ಕ್ಷೇತ್ರದಲ್ಲಿ ಹೀನಾಯವಾಗಿ ಸೋತರು ಈಗಿರುವಾಗ ಅವರಿಗೆ ಹೋಲಿಸಿಕೊಳ್ಳುವುದು. ಹುಚ್ಚು ಹಂಬಲ ತಾವೇ ರಚಿಸಿದ ಎಲ್.ಜಿ. ಹಾವನೂರು ಆಯೋಗದ ವರದಿಯನ್ನು ಪಡೆದರು. ಆ ವರದಿಯನ್ನು ವಿಧಾನಸಭೆಯ ಮುಂದೆ ಮಂಡಿಸಿದರು.
ವಿಧಾನಸಭೆಯ ಅನುಮೋದನೆ ಪಡೆದು ಜಾರಿಗೊಳಿಸಿದ ಕೀರ್ತಿ ದಿವಂಗತ ದೇವರಾಜ ಅರಸು ರವರಿಗೆ ಸಲ್ಲುತ್ತದೆ.
ಎಲ್.ಜಿ. ಹಾವನೂರು ರವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇತರೆ ಬಡತನ ರೇಖೆಗಳ ಮಾಹಿತಿಯನ್ನು ಪಡೆದು ನಿರ್ಧಿಷ್ಟ ಅಳತೆಗೋಲನ್ನು ನಿಗಧಿಪಡಿಸಿ ಒಂದು ಸಂಪುಟದಲ್ಲಿ ಸುಮಾರು 300-400 ಕ್ಕೂ ಹೆಚ್ಚು ಪುಟಗಳುಳ್ಳ 5 ಸಂಪುಟಗಳನ್ನು ಮಂಡಿಸಿದರು. ಅದೆಲ್ಲವನ್ನು ಜನತೆಯ ಮುಂದಿಟ್ಟರು. ಅಂಕಿ-ಅಂಶಗಳ ಆಧಾರದಲ್ಲಿ ಎಲ್ಲಾ ವರ್ಗದವರೂ ಅದನ್ನು ಒಪ್ಪಿದರು.
ಸನ್ಮಾನ್ಯ ದೇವರಾಜ ಅರಸುರವರು “ಉಳುವವನೇ ಭೂಮಿ ಒಡೆಯ”, “ಮಲ ಹೊರುವ ಪದ್ಧತಿ ನಿರ್ಮೂಲನೆ” ಮತ್ತು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಹೀಗೆ ಹಲವಾರು ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಧೈರ್ಯದಿಂದ ಅನುಷ್ಠಾನಗೊಳಿಸಿ ಸಮಾಜ ಪರಿವರ್ತನೆಯ ಹರಿಕಾರ ಎಂಬ ಕೀರ್ತಿಗೆ ಪಾತ್ರರಾದರು.
ಅವರ ಅವಧಿಯನ್ನು ಮೀರಿಸುವ ಚಪಲ ಸಿದ್ದರಾಮಯ್ಯರವರ ದುರಹಂಕಾರದ ಪರಮಾವಧಿ. 1984 ರಲ್ಲಿ ವೆಂಕಟಸ್ವಾಮಿಯವರು 2ನೇ ಆಯೋಗದ ವರದಿಯನ್ನು ಮಂಡಿಸಿದರು. ಅದರಲ್ಲಿನ ಕೆಲವು ದೋಷಗಳ ಬಗ್ಗೆ ದೊಡ್ಡ ವಿವಾದವೆದ್ದು ಅಂದಿನ ಸರ್ಕಾರ ಚಿನ್ನಪ್ಪ ರೆಡ್ಡಿ ಆಯೋಗವನ್ನು ನೇಮಿಸಿತು. ಚಿನ್ನಪ್ಪ ರೆಡ್ಡಿ ಆಯೋಗವು ಸಹ ವೆಂಕಟಸ್ವಾಮಿ ಆಯೋಗದ ಅಂಕಿ-ಅಂಶಗಳನ್ನು ದೃಢೀಕರಿಸಿ 1990 ರಲ್ಲಿ ವರದಿ ನೀಡಿತು. ಆದರೂ ಸಹ ಕೆಲವು ತಾಂತ್ರಿಕ ದೋಷಗಳನ್ನು ಅಂಕಿ-ಅಂಶಗಳ ಮೂಲಕ ವಿವಿಧ ಸಮುದಾಯಗಳು ಸಲ್ಲಿಸಲಾಯಿತು. ಅದರಿಂದ ಆ ವರದಿಯನ್ನು ಸಹ ತಡೆ ಹಿಡಿಯಲಾಯಿತು ಎಂದರು.
ಆನಂತರ 1992 ರಲ್ಲಿ ಅಧಿಕಾರಕ್ಕೆ ಬಂದ ಎಂ. ವೀರಪ್ಪ ಮೋಯ್ಲಿಯವರು ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸುವ ಬದ್ಧತೆಯಿಂದ 1992 ರಲ್ಲಿ ಚಿನ್ನಪ್ಪರೆಡ್ಡಿ ಮತ್ತು ವೆಂಕಟಸ್ವಾಮಿ ಆಯೋಗದ ವರದಿಯನ್ನು ಪರಿಶೀಲಿಸಿ ಅದರ ಲೋಪ ದೋಷಗಳನ್ನು ಸರಿಪಡಿಸಿ ಮೀಸಲಾತಿ ಅಳವಡಿಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದರು.
ಚಿನ್ನಪ್ಪರೆಡ್ಡಿ ಆಯೋಗದ ವರದಿಯಿಂದ ಜನಸಂಖ್ಯೆ ವ್ಯತ್ಯಾಸ ಮತ್ತು ಅವರು ಸರ್ಕಾರದಲ್ಲಿ ಗಳಿಸಿದ ಸುಮಾರು 33 ಜಾತಿಗಳು ಮೀಸಲಾತಿಯನ್ನು ಕಳೆದುಕೊಳ್ಳುವ ಸಂಭವವಿತ್ತು. ಅದನ್ನು ನಾನು ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಿಂದಿನ ಎಲ್ಲಾ ಆಯೋಗಗಳ ವರದಿ ಹಾಗೂ ಸರ್ಕಾರದಿಂದ ಪಡೆದ ಕೆಲವು ಅಂಕಿ ಅಂಶಗಳನ್ನು ಸುಮಾರು ಒಂದೆರೆಡು ತಿಂಗಳಿಗೂ ಹೆಚ್ಚು ಅಧ್ಯಯನ ನಡೆಸಿ ಒಂದು ವರದಿಯನ್ನು ಸಮಿತಿಗೆ ಸಲ್ಲಿಸಿದೆ. ಅದನ್ನು ಕಾನೂನು ಇಲಾಖೆಯಿಂದ ಪರಿಷ್ಕರಿಸಿದ ಮೇಲೆ ಆ ವರದಿ ಸಮಿತಿಯ ಮುಂದೆ ಮಂಡನೆಯಾಯಿತು. ಆ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಎಂ. ವೀರಪ್ಪ ಮೋಯ್ಲಿಯವರು ನನ್ನನ್ನು ಆ ಸಭೆಗೆ ಆಹ್ವಾನಿತರನ್ನಾಗಿ ಆ ಸಭೆಗೆ ಆಹ್ವಾನಿಸಿದರು. ಆ ಸಮಿತಿ ಸುಮಾರು ಬಾರಿ ಸಭೆ ಸೇರಿ ಸಂಪೂರ್ಣವಾಗಿ ಆಯೋಗದ ವರದಿ ಮತ್ತು ಬೇರೆ ಬೇರೆ ವಲಯದಿಂದ ಪಡೆದ ವರದಿಗಳನ್ನು ಅಧ್ಯಯನ ಮಾಡಿ ಚಿನ್ನಪ್ಪರೆಡ್ಡಿ ಆಯೋಗ ಏರ್ಪಡಿಸಿದೆ . ಪ್ರಸ್ತುತ ಇರುವ ಮೀಸಲಾತಿ ಕ್ಯಾಟಗರಿ 1, ಕ್ಯಾಟಗರಿ 2ಎ, ಕ್ಯಾಟಗರಿ 2ಬಿ, ಕ್ಯಾಟಗರಿ 3ಎ, ಕ್ಯಾಟಗರಿ 3ಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದಂತೆ ಒಟ್ಟು ಮೀಸಲಾತಿ ಶೇ. 50 ಕ್ಕೆ ಮೀರದಂತೆ ಮೀಸಲಾತಿಯನ್ನು 1994 ರಲ್ಲಿ ಜಾರಿಗೊಳಿಸಿತು ಎಂದು ಹೇಳಿದರು.
ಸಿದ್ದರಾಮಯ್ಯರವರ ಮಾತಿನಲ್ಲಿ ಪಾರದರ್ಶಕತೆ ಇಲ್ಲದೇ ಸ್ವಾರ್ಥ ಮತ್ತು ಪ್ರಚಾರಕ್ಕೆ ಮಾತ್ರ ಬದ್ಧತೆ ಇರುವುದರಿಂದ ಅವರೇ ರಚಿಸಿದ ಆಯೋಗದ ವರದಿಯನ್ನು ಜಾರಿಗೊಳಿಸಲು ಯೋಗ್ಯತೆ ಇಲ್ಲದೇ ಸಬೂಬು ಹೇಳಿ ಸರ್ಕಾರದ ಸಾರ್ವಜನಿಕರಿಂದ ಗಳಿಸಿದ ಸುಮಾರು ರೂ. 162.00 ಕೋಟಿ ಹಣವನ್ನು ನೀರಿಗೆ ಹಾಕಿದ್ದಾರೆ ಎಂದರು.
ಇವರ ಮನ:ಸ್ಥಿತಿಯನ್ನು ನೋಡಿದರೆ ಹಿಂದುಳಿದ ವರ್ಗಗಳಲ್ಲಿನ ಒಂದು ದೊಡ್ಡ ಕೋಮನ್ನು ಹೊರತುಪಡಿಸಿ, ಇತರೆ ಎಲ್ಲಾ ಹಿಂದುಳಿದ ವರ್ಗಗಳು ಒಗ್ಗೂಡಿ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಸನ್ನಿವೇಶ ಪ್ರಸ್ತುತದಲ್ಲಿದೆ. ಈ ವರದಿ ಅನುಷ್ಠಾನವಾದರೆ ಹಿಂದುಳಿದ ವರ್ಗಗಳು ಕಚ್ಚಾಡಿ ಒಡೆದು ಹೋಗಿ ಹಿಂದುಳಿದ ವರ್ಗದವರು ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕೆಲವು ಮುಖ್ಯ ಸಲಹೆಗಳು
ಸಿದ್ದರಾಮಯ್ಯರವರು ಅವರ ವರದಿಯ ಪ್ರಕಾರ ಹಂಚಿಕೆ ಮಾಡಿದ್ದ ಮೀಸಲಾತಿ ಜಾರಿಗೊಳಿಸಲು ಸಾಧ್ಯವಿಲ್ಲದಂತದ್ದು. ಕಾರಣ ಅದಕ್ಕೆ ಸೃಷ್ಠಿಸಿದ ಅಂಕಿ-ಅಂಶಗಳ ಆಧಾರ ಮತ್ತು ಕಾನೂನಿಗೆ ವಿರುದ್ಧವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿರುವುದು ಸ್ಪಷ್ಟವಾಗಿದೆ.
ಮುಂದೆ ಅಂಕಿ-ಅಂಶಿಗಳ ಸರ್ವೆ ಕಾರ್ಯ ನಡೆದರೆ ಪ್ರಮಾಣಿಕವಾಗಿ ನಿರ್ಧಿಷ್ಟ ಅಳತೆ ಗೋಲನ್ನು ನಿರ್ಧರಿಸಿ, ಒಳ ಪಂಗಡಗಳ ಗೋಜಿಗೆ ಹೋಗದೆ, ಜಾತಿಗಳ ಆಧಾರದ ಮೇಲೆ ಅಂಕಿ-ಅಂಶಗಳ ದತ್ತಾಂಶವನ್ನು ಪಡೆದು ಕಾನೂನು ರೀತಿ ಎಲ್ಲಾ ಜಾತಿಯ ಅರ್ಹರಿಗೆ ಮೀಸಲಾತಿ ಸಿಗುವಂತೆ ಕ್ರಮ ವಹಿಸಬೇಕು. ಹಿಂದುಳಿದ ವರ್ಗಗಳ ಜಾತಿಯ ಒಗ್ಗಟ್ಟನ್ನು ದಯಮಾಡಿ ಒಡೆಯಬೇಡಿ.
ಅತಿ ಮುಖ್ಯವಾಗಿ 1994 ರಿಂದ ಇದುವರೆಗೆ ಮೀಸಲಾತಿ ಪಟ್ಟಿಯಲ್ಲಿರುವ ಹಾಗೂ ಮೀಸಲಾತಿ ಪಟ್ಟಿಯಿಂದ ಹೊರಗೆ ಇರುವ ಎಲ್ಲಾ ಜಾತಿಗಳು ಸಾಮಾಜಿಕ , ಶೈಕ್ಷಣಿಕ ಮತ್ತು ಸರ್ಕಾರಿ ನೌಕರಿ ಅಂದರೆ ಸಂವಿಧಾನ 15 (4) ಮತ್ತು ಸಂವಿಧಾನ 16(4) ಇವುಗಳಡಿಯಲ್ಲಿ ಪಡೆದಿರುವ ಲಾಭಾಂಶವನ್ನು ಪ್ರಕಟಿಸಿ ಆಯೋಗದ ಕಲಂ 11 (1) ಪ್ರಕಾರ ಮೀಸಲಾತಿಯನ್ನು ಪ್ರಕಟಿಸಬೇಕು.
ಅಂಕಿ ಅಂಶಗಳ ಆದಾರದಲ್ಲಿಯೇ ಮಾನದಂಡಗಳ ಪ್ರಕಾರ ಮೀಸಲಾತಿಯನ್ನು ನಿಗದಿಪಡಿಸಬೇಕೇ ಹೊರತು ರಾಜಕೀಯವಾಗಿ ಹಂಚಬಾರದು. ಜಾತಿಯ ಹೆಸರಿನಲ್ಲಿ ಕೆಲವರಿಗೆ ಮಾತ್ರ ಮೀಸಲಾತಿಯ ಲಾಭ ಪಡೆದುಕೊಳ್ಳುವುದನ್ನು ತಪ್ಪಿಸಬೇಕು. ಎಂದು ತೈಲೇಶ್ವರ ಮಠದ ಪೂರ್ಣನಂದ ಪುರಿ ಮಹಾಸ್ವಾಮೀಜಿ ಹೇಳಿದರು.
| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ