ಪೊಲೀಸ್‌ನಿಂದಲೇ ಅಪಪ್ರಚಾರ: ಡೆತ್ ನೋಟ್ ಬರೆದಿಟ್ಟು ವಿಧವೆ ಆತ್ಮಹ*ತ್ಯೆ

Untitled design 2026 02 20T193701.636

ಶಿವಮೊಗ್ಗ: ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬನೇ ಮಹಿಳೆಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಇದರಿಂದ ಮನನೊಂದ ವಿಧವೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಮೃತರನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಅವರಿಗೆ ಮದುವೆಯಾಗಿದ್ದು ಏಳು ವರ್ಷಗಳಾಗಿತ್ತು. ಪತಿ ಜಗದೀಶ್ ಅನಾರೋಗ್ಯದಿಂದ ವಾರದ ಹಿಂದೆ ಸಾವನ್ನಪ್ಪಿದ್ದರು. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಪತಿಯ ಅಗಲಿಕೆಯಿಂದ ದುಃಖದಲ್ಲಿದ್ದ ಸ್ವಾತಿ ಇದೀಗ ಸಾಮಾಜಿಕ ಜಾಲತಾಣದ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ಸ್ವಾತಿಗೆ ಫೇಸ್‌ಬುಕ್ ಮೂಲಕ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಪರಿಚಯವಿಲ್ಲದ ವ್ಯಕ್ತಿಯಿಂದ ಬಂದ ಸಂದೇಶಗಳನ್ನು ಸ್ವಾತಿ ಗಮನಿಸದಿದ್ದರೂ, ಬಳಿಕ ಅವನನ್ನು ಬ್ಲಾಕ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿತ ಪೊಲೀಸ್ ಸಿಬ್ಬಂದಿ ಬೇರೆ ಖಾತೆಯಿಂದ ಸ್ವಾತಿ ಬಗ್ಗೆ ಅಪಪ್ರಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಅಪಪ್ರಚಾರದಿಂದಾಗಿ ಸ್ವಾತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಪತಿಯ ನಿಧನದಿಂದಲೇ ದುಃಖದಲ್ಲಿದ್ದ ಅವರು, ತಮ್ಮ ಬಗ್ಗೆ ಕೆಟ್ಟ ಮಾತುಗಳು ಹರಿದಾಡುತ್ತಿರುವುದು ತಿಳಿದು ಮನನೊಂದಿದ್ದರು. ಇದೇ ಕಾರಣಕ್ಕೆ ಅವರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ವಾತಿ ಆತ್ಮಹತ್ಯೆಗೆ ಮೊದಲು ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ. ಅದರಲ್ಲಿ ತಾಯಿಗೆ ಉದ್ದೇಶಿಸಿ “ಸಾರಿ ಅಮ್ಮ. ನನ್ನ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಕೆಟ್ಟದಾಗಿ ಜನರ ಬಳಿ ಹೇಳಿದ್ದಾರೆ. ನಾನು ತುಂಬಾ ಮನನೊಂದಿದ್ದೇನೆ. ಈಗಾಗಲೇ ಪತಿಯನ್ನು ಕಳೆದುಕೊಂಡಿದ್ದೇನೆ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದಾನೆ. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ” ಎಂದು ಮನವಿ ಮಾಡಿದ್ದಾರೆ.

ಇನ್ನೂ, “ಆತ ಯಾರು ಎಂದು ನನಗೆ ಗೊತ್ತಿರಲಿಲ್ಲ. ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಕ್ಷಮಿಸಿ ಅಮ್ಮ” ಎಂದು ಅವರು ಬರೆದಿದ್ದಾರೆ.

ಘಟನೆಯ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನ್ಯೂ ಟೌನ್ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Exit mobile version