ಬೆಂಗಳೂರು: ಮನೆಯಲ್ಲಿ ಒಬ್ಬಳೇ ಇದ್ದಾಗ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಅಬ್ದುಲ್ ಹಫೀಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಆರ್.ಟಿ. ನಗರದಲ್ಲಿ ನಡೆದಿದೆ.
ಘಟನೆಯ ವಿವರ:
ಆರ್.ಟಿ. ನಗರದ ನಿವಾಸಿಯಾಗಿರುವ ಅಬ್ದುಲ್ ಹಫೀಜ್, ವೃತ್ತಿಯಲ್ಲಿ ಶಿಕ್ಷಣ ತಜ್ಞನಾಗಿ ಗುರುತಿಸಿಕೊಂಡಿದ್ದರು. ಸಂತ್ರಸ್ತ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದ ಸಮಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈತ, ಪದೇ ಪದೇ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೇವಲ ದೈಹಿಕ ಹಿಂಸೆಯಲ್ಲದೇ ಮಾನಸಿಕವಾಗಿಯೂ ತೀವ್ರ ಹಿಂಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಸೊಸೆಯ ಸೌಂದರ್ಯದ ಬಗ್ಗೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ಪತ್ರಗಳನ್ನು ಬರೆಯುತ್ತಿದ್ದ. ಅಷ್ಟಕ್ಕೇ ನಿಲ್ಲದೆ, ಆ ಪತ್ರಗಳನ್ನು ಸೊಸೆಯ ಮುಂದೆಯೇ ಓದಿ ವಿಕೃತ ವಾಗಿ ಆನಂದ ಅನುಭವಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಆಕೆಯ ಖಾಸಗಿತನಕ್ಕೆ ಧಕ್ಕೆ ತರುವಂತಹ ಅಶ್ಲೀಲ ಮಾತುಗಳ ಮೂಲಕ ಆಕೆಯನ್ನು ಮಾನಸಿಕ ಹಿಂಸೆಗೆ ಒಳಪಡಿಸುತ್ತಿದ್ದ.
ಮಾವನ ಈ ಅಸಭ್ಯ ವರ್ತನೆಯಿಂದ ರೋಸಿಹೋದ ಮಹಿಳೆ, ತನ್ನ ಪತಿಗೆ (ಆರೋಪಿಯ ಮಗ) ವಿಷಯ ತಿಳಿಸಿದ್ದಾಳೆ. ಮಗ ತನ್ನ ತಂದೆಯ ನಡೆಯನ್ನು ಖಂಡಿಸಿ, ಬುದ್ಧಿ ಹೇಳಿ ಎಚ್ಚರಿಸಿದ್ದರೂ ಸಹ ಅಬ್ದುಲ್ ಹಫೀಜ್ ಮಾತ್ರ ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ. ದಿನೇ ದಿನೇ ಆತನ ಕಿರುಕುಳದ ಹೆಚ್ಚಾಗುತ್ತಲೇ ಇತ್ತು.
ಇತ್ತೀಚೆಗೆ ಮಹಿಳೆಯು ಮನೆಯ ಲಿಫ್ಟ್ನಲ್ಲಿ ಒಬ್ಬಳೇ ಹೋಗುತ್ತಿದ್ದಾಗ, ಆರೋಪಿಯು ಅಲ್ಲಿಯೂ ಆಕೆಯನ್ನು ತಡೆದು ಬಲವಂತದಿಂದ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ.
ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಆರ್.ಟಿ. ನಗರ ಪೊಲೀಸರು ಅಬ್ದುಲ್ ಹಫೀಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಕಂದಮ್ಮಗಳ ದಾರುಣ ಸಾ*ವು
ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾಲಾ ಬಸ್ ಮತ್ತು ಸ್ಕೂಟರ್ ನಡುವೆ ನಡೆದ ಈ ಭೀಕರ ಅಪಘಾತದಲ್ಲಿ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಗರದ ಸಿಎಆರ್ (CAR) ವಿಭಾಗದಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ನಾಗನಗೌಡ ಅವರು ಇಂದು ಬೆಳಿಗ್ಗೆ ತಮ್ಮ ಇಬ್ಬರು ಮಕ್ಕಳಾದ ವರ್ಷ (2 ವರ್ಷ) ಮತ್ತು ಭಾನು (4 ವರ್ಷ) ರನ್ನು ಸ್ಕೂಟರ್ನಲ್ಲಿ ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಅತಿ ವೇಗವಾಗಿ ಬಂದ ‘ಅಜ್ ಮೋನಿ’ ಶಾಲೆಯ ಬಸ್, ಏಕಾಏಕಿ ತಿರುವು ಪಡೆದು ಸ್ಕೂಟರ್ ಮೇಲೆ ಹರಿಸಿದೆ. ದುರದೃಷ್ಟವಶಾತ್, ಶಾಲಾ ಬಸ್ನ ಚಕ್ರಗಳು ಮಕ್ಕಳ ಮೇಲೆ ಹರಿದಿದ್ದು, ಮಕ್ಕಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೇ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ (DCP Traffic North) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಅಜ್ ಮೋನಿ ಶಾಲಾ ಬಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.





