ನಟ ದರ್ಶನ್ ಪ್ರಕರಣ: ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್ ಜಾರಿ

Untitled design 2025 12 04T173556.093

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ್ ಎರಡನೇ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ಡಿಸೆಂಬರ್ 17 ರಿಂದ ಸಾಕ್ಷಿಗಳ ವಿಚಾರಣೆಯನ್ನು ಆರಂಭಿಸಲು ದಿನಾಂಕ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಮೃತ ರೇಣುಕಾಸ್ವಾಮಿ ಅವರ ತಂದೆ ಶಿವಯೋಗಿ ಮತ್ತು ತಾಯಿ ರತ್ನಮ್ಮ ಅವರಿಗೆ ಸಹ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.

ಬುಧವಾರ ನಡೆದ ವಿಚಾರಣೆಯಲ್ಲಿ ಸಹಾಯಕ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಸಚಿನ್ ಗುಂಡ್ರೆ ಅವರು ಮೊದಲ ಹಂತದ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಪಟ್ಟಿಯಲ್ಲಿ ಮೂವರು ಪ್ರಮುಖ ಸಾಕ್ಷಿಗಳ ಹೆಸರಿದ್ದು, ಅವರೆಲ್ಲರಿಗೂ ಕೋರ್ಟ್ ತಕ್ಷಣ ಸಮನ್ಸ್ ಜಾರಿಮಾಡಿದೆ.

ರೇಣುಕಾಸ್ವಾಮಿ ಅವರ ತಂದೆ ಶಿವಯೋಗಿ, ತಾಯಿ ರತ್ನಮ್ಮ, ಮೃತದೇಹವನ್ನು ಮೊದಲು ಗುರುತಿಸಿದ ಬೆಂಗಳೂರಿನ ಶೆಡ್‌ನ ವಾಚ್‌ಮ್ಯಾನ್ ಮಲೆಶ್ ಅವರಿಗೆ ಕೋರ್ಟ್‌ ಸಮನ್ಸ್ ಜಾರಿಮಾಡಿದೆ.

“ಈ ಮೂವರು ಸಾಕ್ಷಿಗಳು ಪ್ರಕರಣದಲ್ಲಿ ಮುಖ್ಯ. ತಂದೆ-ತಾಯಿ ತಮ್ಮ ಮಗನ ಜೊತೆಗಿನ ಕೊನೆಯ ಸಂಭಾಷಣೆ, ಅವನು ಬೆಂಗಳೂರಿಗೆ ಏಕೆ ಬಂದಿದ್ದ, ಪವಿತ್ರಾ ಗೌಡ ಜೊತೆಗಿನ ವಿವಾದ ಎಲ್ಲವನ್ನೂ ವಿವರಿಸಬೇಕಿದೆ. ವಾಚ್‌ಮ್ಯಾನ್ ಮೃತ ಮೃತದೇಹ ಪತ್ತೆಯಾದ ಸ್ಥಳದ ಮೊದಲ ಸಾಕ್ಷಿಯಾಗಿದ್ದಾನೆ” ಎಂದು ಪ್ರಕರಣ ತಿಳಿದ ವಕೀಲರೊಬ್ಬರು ತಿಳಿಸಿದರು.

ನ್ಯಾಯಾಧೀಶರು ಡಿಸೆಂಬರ್ 4 ರಂದು ಉಳಿದ ಸಾಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿ, ಯಾರಿಗೆಲ್ಲ ಸಮನ್ಸ್ ಜಾರಿಮಾಡಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ. ಈ ಪಟ್ಟಿಯನ್ನು ಅಭಿಯೋಜನಾ ತಂಡ ಸಲ್ಲಿಸಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯಕೀಯ ತಜ್ಞರು, ಡಿಜಿಟಲ್ ಫೊರೆನ್ಸಿಕ್ ತಜ್ಞರು, ಪವಿತ್ರಾ ಗೌಡಗೆ ಕಿರುಕುಳ ನೀಡಿದ್ದ ಎನ್ನಲಾದ ಮೆಸೇಜ್‌ಗಳನ್ನು ಕಳುಹಿಸಿದ್ದ ಖಾತೆಯ ಮಾಲೀಕರು ಸಹ ಸೇರಿದ್ದಾರೆ.

ಚಿತ್ರದುರ್ಗದ ಔಷಧ ವ್ಯಾಪಾರಿಯಾಗಿದ್ದ ರೇಣುಕಾಸ್ವಾಮಿ, ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ವಿರುದ್ಧ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಬೆಂಗಳೂರಿಗೆ ಕರೆತರಲಾಗಿತ್ತು. ಆನಂತರ ರಾಜರಾಜೇಶ್ವರಿನಗರದಲ್ಲಿರುವ  ಶೆಡ್‌ನಲ್ಲಿ ಅವನನ್ನು ಕ್ರೂರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು ಎಂಬುದು ಆರೋಪ.

ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ದರ್ಶನ್ (ಎ-2), ಪವಿತ್ರಾ ಗೌಡ (ಎ-1), ಧನರಾಜ್ (ಎ-3), ವಿನಯ್ (ಎ-4) ಸೇರಿದಂತೆ ಹಲವರು ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

Exit mobile version