ತರಗತಿಯಲ್ಲೇ ವಿದ್ಯಾರ್ಥಿಗೆ ಉಗ್ರ ಎಂದ ಪ್ರೊಫೆಸರ್: ಪಿಇಎಸ್ ವಿವಿ ಉಪನ್ಯಾಸಕ ಅಮಾನತು

Untitled design (37)

ಬೆಂಗಳೂರು: ಧರ್ಮದ ಹೆಸರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯಲ್ಲೇ ವಿದ್ಯಾರ್ಥಿಯೊಬ್ಬನನ್ನು ನಿಂದಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ನಡೆದಿದೆ. ವಿದ್ಯಾರ್ಥಿಯೊಬ್ಬನನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಎಂದು ಕರೆದ ಆರೋಪದ ಮೇಲೆ ಉಪನ್ಯಾಸಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಘಟನೆಯ ಹಿನ್ನೆಲೆ

ತರಗತಿಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಉಪನ್ಯಾಸಕ ಡಾ. ಮುರುಳೀಧರ್ ದೇಶಪಾಂಡೆ ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲೇ ಒಬ್ಬ ವಿದ್ಯಾರ್ಥಿಯ ಧರ್ಮವನ್ನು ಎಳೆದು ತಂದು ಅವಹೇಳನ ಮಾಡಿದ್ದಾರೆ. ಅಂತರಾಷ್ಟ್ರೀಯ ಸಂಘರ್ಷಗಳು ಮತ್ತು ರಾಜಕೀಯ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ, ವಿದ್ಯಾರ್ಥಿಯನ್ನು ಕನಿಷ್ಠ 13 ಬಾರಿ ಭಯೋತ್ಪಾದಕ (Terrorist) ಎಂದು ಕರೆದು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ವಿಚಾರವಾಗಿ ವಿದ್ಯಾರ್ಥಿಯು ಎಚ್‌ಒಡಿ (HOD) ಅವರ ಬಳಿ ದೂರು ನೀಡಲು ಹೋದಾಗಲೂ ಉಪನ್ಯಾಸಕರು ತನ್ನ ನಿಂದನೆಯನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.ಈ ಘಟನೆಯನ್ನು ಪ್ರತಿಭಟಿಸಿ,ಸಂತ್ರಸ್ತ ವಿದ್ಯಾರ್ಥಿಯ ಪರವಾಗಿ ಧ್ವನಿ ಎತ್ತಿದ 3 ರಿಂದ 4 ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯು ಅಮಾನತುಗೊಳಿಸಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ತಪ್ಪು ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸಾಕ್ಷಿ ಹೇಳಿದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸಹಪಾಠಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣವು ಸೋಷಿಯಲ್ ಮೀಡಿಯಾ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿಗಳು, ಉಪನ್ಯಾಸಕ ಮುರುಳೀಧರ್ ದೇಶಪಾಂಡೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬರುವವರೆಗೂ ಅವರನ್ನು ಕರ್ತವ್ಯದಿಂದ ದೂರವಿಡಲಾಗಿದೆ.

ಈ ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಸ್ವಯಂಪ್ರೇರಿತರಾಗಿ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಸದ್ಯದವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ವಿದ್ಯಾರ್ಥಿ ಅಥವಾ ಪೋಷಕರಿಂದ ದೂರು ಬಂದ ಕೂಡಲೇ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಧಾರ್ಮಿಕ ಅಸಹಿಷ್ಣುತೆ ಮತ್ತು ನಿಂದನೆಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version