ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ಯುವಕ

ಬೆಂಗಳೂರು, ಫೆ. 25: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ ಎನ್ನುತ್ತಾರೆ. ಸಾವಿನಲ್ಲೂ ಸಾರ್ಥಕತೆ ಮೆರೆಯುವುದು ನಿಜಕ್ಕೂ ಸ್ಮರಣೀಯ. ಇಂಥ ಕಾರ್ಯವನ್ನು ಮಾಡುವಲ್ಲಿ ಮಂಡ್ಯದ ಕಸಬಾ ಹೋಬಳಿಯ ಚಿಕ್ಕ ಮಂಡ್ಯ ಗ್ರಾಮದ ಕುಟುಂಬ ಸದಸ್ಯರು ಧೈರ್ಯ ತೋರಿ, ಕೆಲವರ ಬಾಳಿಗೆ ಬೆಳಕು ಚೆಲ್ಲಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್‌ ಸೆಂಟರ್‌ನಲ್ಲಿ ನಡೆದ ಅಂಗಾಂಗ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ಜನರಿಗೆ ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಒದಗಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಡಿಕಲ್‌ ಸೂಪರಿಟೆಂಡರ್‌ ಡಾ. ದೀಪಕ್‌ ಮತ್ತು ಟ್ರಾಮಾ ಎಮರ್ಜೆನ್ಸಿ ಕೇರ್‌ ಸೆಂಟರ್‌ನ ವಿಶೇಷ ಅಧಿಕಾರಿ ಡಾ. ಅಸೀಮ ಬಾನು , ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಟ್ರಾಮ ಕೇರ್‌ ಸೆಂಟರ್‌ ಹಾಗೂ ಜೀವಸಾರ್ಥಕತೆ ತಂಡದ ಸದಸ್ಯರ ಸೇವೆ ಸ್ಮರಣೀಯ ಎಂದರು. ಬಳಿಕ ನೋವಿನಲ್ಲೂ ಸಮಾಜ ಸೇವೆ ಹಾಗೂ ಮತ್ತೊಬ್ಬರ ಬಾಳಿಗೆ ಬೆಳಗಾಗುವ ರೀತಿಯ ನಿರ್ಧಾರ ಕೈಗೊಂಡ ಕುಟುಂಬ ಸದಸ್ಯರಿಗೆ ಧನ್ಯವಾದಗಳು ತಿಳಿಸಿದರು.

ಚಿಕ್ಕಮಂಡ್ಯ ಗ್ರಾಮದ ದರ್ಶನ್‌ ಎಂಬ ಯುವಕ ಕಳೆದ ಫೆಬ್ರವರಿ 22ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ. ಆದರೆ ಆತುರದಲ್ಲಿ ಮನೆಗೆ ಬಂದು ರಾತ್ರಿ ಮಲಗಿದ್ದ. ಆದರೆ ಆತನ ತಲೆಗೆ ಭಾರಿ ಪೆಟ್ಟಾಗಿರುವುದು ಕಂಡು ಆಸ್ಪತ್ರೆಗೆ ಸೇರಿಸಿದರು. ಆಗ ತಲೆಯೊಳಗೆ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.

ಕೂಡಲೇ ಆತನನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ಗೆ ಕರೆದುಕೊಂಡು ಬರಲಾಯಿತು. ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಪರೀಕ್ಷೆ ನಡೆಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಕಾವ್ಯಾ, ಡಾ. ದೀಪಕ್‌, ಡಾ. ಆಸೀಮಾ ಬಾನು ಉನ್ನತ ವೈದ್ಯರ ತಂಡ ಬ್ರೇನ್‌ ಡೆಡ್‌ ಎಂದು ಘೋಷಿಸಿತು. ನಂತರ ಜೀವ ಸಾರ್ಥಕತೆ ಎಂಬ ತಂಡ, ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ದಿನೇಶ್‌ ಅಂಗಾಂಗ ದಾನ ಮಾಡಲು ಸಮ್ಮತಿಸಿ ಸಾರ್ಥಕತೆ ಮೆರೆದರು.

ದಿನೇಶ್‌ ಅವರ ಯಕೃತ್ತು (ಲಿವರ್‌), ಮೂತ್ರಪಿಂಡ, ಹೃದಯ ನಾಳಗಳು, ಇತರೆ ಅಂಗ ಪಡೆದು ಅರ್ಹರಿಗೆ ಅಳವಡಿಸಲಾಗಿದೆ. ದಿನೇಶ್‌ ಕುಟುಂಬ ಸದಸ್ಯರ ಈ ನಿರ್ಧಾರವನ್ನು ಆಸ್ಪತ್ರೆಯ ವೈದ್ಯರು ಶ್ಲಾಘಿಸಿದ್ದಾರೆ.

Exit mobile version