ಬೆಂಗಳೂರು: ಕಲೆ ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ಕೂ ಬಳಕೆಯಾಗಬೇಕು ಎಂಬ ಆಶಯದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮಹತ್ವದ ಹೆಜ್ಜೆಯಿಟ್ಟಿದೆ. ತನ್ನ ಸಾಮಾಜಿಕ ಹೊಣೆಗಾರಿಕೆ ವಿಭಾಗವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ (ಕೆಐಎಎಫ್) ವತಿಯಿಂದ, ಫೇಸ್ 1 ವರ್ಲ್ಡ್ ಹಾಗೂ ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಸಹಯೋಗದಲ್ಲಿ ‘ಒಡಿಸ್ಸಿ ಆಫ್ ಲವ್’ ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ನಾಟಕವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಆಯೋಜಿಸುತ್ತಿದೆ.
ಕಣ್ಣು, ಕಿವಿಗೆ ಹಬ್ಬವೆನಿಸುವ ಈ ಸಂಗೀತ ಹಾಗೂ ನೃತ್ಯಮಯ ಪ್ರದರ್ಶನವು ಮೇ 7 ರಿಂದ 9 ರವರೆಗೆ ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಏನಿದು ‘ಒಡಿಸ್ಸಿ ಆಫ್ ಲವ್’?
ಮಹಾಕವಿ ಕಾಳಿದಾಸನ ಜಗತ್ಪ್ರಸಿದ್ಧ ಕೃತಿ ‘ಶಾಕುಂತಲ’ದ ಕಥಾಹಂದರವನ್ನು ಆಧರಿಸಿರುವ ಈ ನಾಟಕವನ್ನು, ಆಧುನಿಕ ‘ಪಾಪ್ ಒಪೆರಾ’ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರೀತಿ, ವಿರಹ, ಸ್ತ್ರೀತ್ವದ ಶಕ್ತಿ ಹಾಗೂ ರೂಪಾಂತರದ ಕಥೆಯನ್ನು ಇದು ಸಾರುತ್ತದೆ.
ಪಾಪ್, ರಾಕ್ ಮತ್ತು ಜಾಝ್ ಸಂಗೀತದ ಅಬ್ಬರಕ್ಕೆ ಭಾರತೀಯ ಶಾಸ್ತ್ರೀಯ ನೃತ್ಯದ ಲಯವನ್ನು ಬೆಸೆಯಲಾಗಿದ್ದು, ಪಾಶ್ಚಿಮಾತ್ಯ ಹಾಗೂ ಪೌರಸ್ತ್ಯ ಸಂಸ್ಕೃತಿಗಳ ಅದ್ಭುತ ಕಲಾ-ಸೇತುವೆಯಾಗಿ ಇದು ಮೂಡಿಬರಲಿದೆ. ಬರೋಬ್ಬರಿ 60 ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನ ಪ್ರೇಕ್ಷಕರನ್ನು ಅಕ್ಷರಶಃ ಬೇರೊಂದು ಮಾಯಾಲೋಕಕ್ಕೆ ಕರೆದೊಯ್ಯಲಿದೆ.
ಶಿಕ್ಷಣಕ್ಕಾಗಿ ಕಲೆ-‘ನಮ್ಮ ಶಿಕ್ಷಣ’ ಯೋಜನೆಗೆ ಆರ್ಥಿಕ ನೆರವು
ಕೇವಲ ಕಲಾ ಪ್ರದರ್ಶನವಲ್ಲದೆ, ಇದರ ಹಿಂದೆ ಒಂದು ದೊಡ್ಡ ಸಾಮಾಜಿಕ ಉದ್ದೇಶವಿದೆ. ಈ ಕಾರ್ಯಕ್ರಮದ ಟಿಕೆಟ್ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿಯನ್ನೂ ಕೆಐಎಎಫ್ನ ‘ನಮ್ಮ ಶಿಕ್ಷಣ’ ಯೋಜನೆಗೆ ಬಳಸಲಾಗುತ್ತದೆ.
ಈಗಾಗಲೇ ಈ ಯೋಜನೆಯಡಿ 6 ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಡಿಜಿಟಲ್ ಕಲಿಕೆ ಮತ್ತು ಸಮಗ್ರ ಶಿಕ್ಷಣವನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಇದರಿಂದ 2,750 ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಈ ಪ್ರದರ್ಶನದ ನಿಧಿಯ ಮೂಲಕ ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಬರೋಬ್ಬರಿ 30,000 ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
ಈ ಮಹತ್ವದ ಕಾರ್ಯಕ್ರಮದ ಕುರಿತು ಮಾತನಾಡಿದ ಬಿಐಎಎಲ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್, “ಕಲೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬುದು ನಮ್ಮ ನಂಬಿಕೆ. ಸೃಜನಶೀಲತೆ ಮತ್ತು ಸಾಮಾಜಿಕ ಉದ್ದೇಶವನ್ನು ಒಗ್ಗೂಡಿಸಿರುವ ಈ ‘ಒಡಿಸ್ಸಿ ಆಫ್ ಲವ್’ ಪ್ರದರ್ಶನ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಈ ಮೂಲಕ ರಂಗಭೂಮಿಯ ಆಚೆಗೂ ಶೈಕ್ಷಣಿಕವಾಗಿ ದೊಡ್ಡ ಬದಲಾವಣೆ ತರಲು ನಾವು ಸಜ್ಜಾಗಿದ್ದೇವೆ” ಎಂದರು.
ಫೇಸ್ 1 ವರ್ಲ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಓಮ್ ಪ್ರದತ್ ಪ್ರತಿಕ್ರಿಯಿಸಿ, “ಕಳೆದ ವರ್ಷ ನಾವು ತಂದಿದ್ದ ಮ್ಯೂಸಿಕಲ್ ಶೋಗಿಂತಲೂ ಇದು ವಿಭಿನ್ನವಾಗಿದೆ. ಇಂತಹ ಬೃಹತ್ ಲೈವ್ ಶೋಗಳನ್ನು ಬೆಂಗಳೂರಿನ ಜನತೆಗೆ ಉಣಬಡಿಸುವುದು ನಮ್ಮ ಬದ್ಧತೆ. ಸದ್ಯದಲ್ಲೇ ಬೆಂಗಳೂರು ಏರ್ಪೋರ್ಟ್ನಲ್ಲಿ ‘ಏರೋಡ್ರೋಮ್’ ಎಂಬ ಜಾಗತಿಕ ಮಟ್ಟದ ಮನರಂಜನಾ ಕೇಂದ್ರವನ್ನು ಸ್ಥಾಪಿಸಿ, ರಾಷ್ಟ್ರಮಟ್ಟದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇವೆ” ಎಂದು ಮಾಹಿತಿ ನೀಡಿದರು.
ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಮಾತನಾಡಿ, “ಸಂಗೀತ, ನೃತ್ಯ ಮತ್ತು ಫ್ಯಾಷನ್ ಮೂಲಕ ಕಥೆ ಹೇಳುವ ನನ್ನ ಬಹುದಿನದ ಕನಸು ಈ ಕೃತಿ. ಯಾವುದೇ ನಿರೀಕ್ಷೆಗಳಿಲ್ಲದೆ ಕುತೂಹಲದಿಂದ ಬರುವ ಪ್ರೇಕ್ಷಕರು ಮಂತ್ರಮುಗ್ಧರಾಗಿ ಹೋಗುವುದು ಖಚಿತ. ವಿಶೇಷವಾಗಿ ಈ ನನ್ನ ಸ್ವಂತ ಪ್ರದರ್ಶನವು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತೀಯ ರಂಗಭೂಮಿ ಹಾಗೂ ಸಂಗೀತ ಪ್ರಿಯರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಈ ಕಾರ್ಯಕ್ರಮದ ಟಿಕೆಟ್ಗಳು ಪ್ರಮುಖ ಆನ್ಲೈನ್ ಪ್ಲಾಟ್ಫಾರ್ಮ್ ‘ಬುಕ್ಮೈಶೋ’ನಲ್ಲಿ ಲಭ್ಯವಿದೆ.
