ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆ ಆರಂಭ

Untitled design 2026 07 17T154813.300

ಕೋಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಇದೀಗ ಹೊಸ ಹಾಗೂ ಅನುಕೂಲಕರ ಸಾರಿಗೆ ಆಯ್ಕೆ ಲಭ್ಯವಾಗಿದೆ. ಕೋಲ್ಕತ್ತಾದ ಕರುಣಾಮಯಿ ಬಸ್ ಟರ್ಮಿನಲ್‌ನಿಂದ ಬೆಂಗಳೂರಿಗೆ ನೇರ ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಇದು ವಾರದ ಎಲ್ಲಾ ದಿನಗಳಲ್ಲೂ ಸಂಚರಿಸಲಿದೆ. ರೈಲು ಮತ್ತು ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಈ ಸೇವೆಯನ್ನು ಪರಿಚಯಿಸಲಾಗಿದ್ದು, ದೂರ ಪ್ರಯಾಣ ಮಾಡುವವರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡುವ ಉದ್ದೇಶ ಹೊಂದಿದೆ.

ಬೆಂಗಳೂರು ಮಾತ್ರವಲ್ಲದೆ ದೆಹಲಿ, ಚೆನ್ನೈ ಹಾಗೂ ಪುರಿ ನಗರಗಳಿಗೂ ಹೊಸ ದೂರ ಪ್ರಯಾಣದ ಬಸ್ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದರಿಂದ ಪೂರ್ವ ಭಾರತವನ್ನು ದೇಶದ ಪ್ರಮುಖ ನಗರಗಳೊಂದಿಗೆ ರಸ್ತೆ ಮಾರ್ಗದ ಮೂಲಕ ಸಂಪರ್ಕಿಸುವ ಮಹತ್ವದ ಹೆಜ್ಜೆಯಾಗಿದೆ.

ಬೆಂಗಳೂರು ಮಾರ್ಗದ ಪ್ರಯಾಣದ ವಿವರ: 

ಕೋಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ₹4,500 ಟಿಕೆಟ್ ದರ ಪಾವತಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಬಸ್ ಸುಮಾರು 35 ಗಂಟೆಗಳ ಪ್ರಯಾಣದ ಬಳಿಕ ಬೆಂಗಳೂರನ್ನು ತಲುಪಲಿದೆ.

ಇತರ ಮಾರ್ಗಗಳ ದರ ಮತ್ತು ಸಮಯ : 

ಕೋಲ್ಕತ್ತಾ-ದೆಹಲಿ ಮಾರ್ಗದಲ್ಲಿ ಟಿಕೆಟ್ ದರ ₹2,500 ರಿಂದ ₹3,000ರವರೆಗೆ ಇದ್ದು, ಸುಮಾರು 17 ಗಂಟೆಗಳ ಪ್ರಯಾಣವಾಗುತ್ತದೆ. 

ಕೋಲ್ಕತ್ತಾ-ಚೆನ್ನೈ ಮಾರ್ಗದಲ್ಲಿ ₹4,700 ದರ ನಿಗದಿಯಾಗಿದ್ದು, ಪ್ರಯಾಣಕ್ಕೆ ಸುಮಾರು 24 ಗಂಟೆಗಳು ಬೇಕಾಗುತ್ತದೆ.

ಪುರಿಗೆ ತೆರಳುವ ವೋಲ್ವೋ ವಿಶೇಷ ಬಸ್ ಸೇವೆಯ ಟಿಕೆಟ್ ದರ ₹1,500 ರಿಂದ ₹2,000ರವರೆಗೆ ನಿಗದಿಪಡಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ನಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಯೋ ಟಾಯ್ಲೆಟ್, ದಿಂಬು ಮತ್ತು ಹೊದಿಕೆ, ಶುದ್ಧ ಕುಡಿಯುವ ನೀರು, ಮಿನಿ ಸ್ನ್ಯಾಕ್ಸ್ ಬಾರ್, ಚಹಾ-ಕಾಫಿ ಹಾಗೂ ತಿಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿವೆ. ಜೊತೆಗೆ OTT ಸೌಲಭ್ಯವಿರುವ ವೈಯಕ್ತಿಕ ಸ್ಕ್ರೀನ್‌ಗಳನ್ನೂ ಅಳವಡಿಸಲಾಗಿದ್ದು, ದೀರ್ಘ ಪ್ರಯಾಣದ ವೇಳೆ ಮನರಂಜನೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಸೇವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಅರ್ಜುನ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಮಿಕ್ ಭಟ್ಟಾಚಾರ್ಯ, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಮೂಲಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಆಧುನಿಕಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಖಾಸಗಿ ಸಂಸ್ಥೆಗಳು ಹೆಚ್ಚಿನ ಸೇವೆಗಳನ್ನು ನೀಡಲು ಅಗತ್ಯ ಅನುಮತಿ ಮತ್ತು ಪರವಾನಗಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

Exit mobile version