ಸಚಿವ ಸಂಪುಟ ವಿಸ್ತರಣೆ ಇನ್ನು 2-3 ದಿನಗಳಲ್ಲಿ ಫೈನಲ್: ಕೃಷ್ಣ ಬೈರೇಗೌಡ

1122

ನವದೆಹಲಿ, ಜುಲೈ 17: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಹುನಿರೀಕ್ಷಿತ ಬೆಳವಣಿಗೆ ಎದುರಾಗಿದ್ದು, ಇನ್ನೆರಡು ಅಥವಾ ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಕುರಿತು ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ಕೆಲವು ಪ್ರಮುಖ ನಾಯಕರು ಪ್ರವಾಸದಲ್ಲಿರುವ ಕಾರಣ ಅಂತಿಮ ಚರ್ಚೆಗಳು ಬಾಕಿ ಉಳಿದಿವೆ. ಮುಖ್ಯಮಂತ್ರಿ ಡಿಕೆ ಶಿವಕಮಾರ್ ಕೂಡ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಲು ಉತ್ಸುಕರಾಗಿದ್ದು, ವಿಳಂಬವಾಗದೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

GBA ಚುನಾವಣೆ ಕುರಿತು ಮಾತನಾಡಿದ ಸಚಿವರು, ಚುನಾವಣೆ ನಡೆಸಲು ಸರ್ಕಾರ ಈಗಾಗಲೇ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ SIR (Special Intensive Revision) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದರು.

“ಹಳೆಯ ಮತದಾರರ ಪಟ್ಟಿಯನ್ನು ಬಳಸಿಕೊಂಡು ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೊಸ ಮತದಾರರ ಪಟ್ಟಿ ಸಿದ್ಧವಾಗುತ್ತಿದ್ದು, ಅದರಲ್ಲಿ ಸುಮಾರು ಮೂರು ಲಕ್ಷ ಮತಗಳ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕವೇ ಚುನಾವಣೆ ನಡೆಸುವುದು ಸೂಕ್ತ” ಎಂದು ವಿವರಿಸಿದರು.

SIR ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಒಂದು ವಾರ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಪ್ರಸ್ತುತ ಎಲ್ಲರೂ ಆ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿ ಈಗಾಗಲೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಭೂಮಿ ನೀಡಲು ಒಪ್ಪಿಗೆ ಇರುವ ರೈತರ ಜಮೀನನ್ನು ಮಾತ್ರ ಪಡೆದು ಯೋಜನೆಯನ್ನು ಮುಂದುವರಿಸಲಾಗುವುದು. ಒಪ್ಪಿಗೆ ಇಲ್ಲದವರ ಮೇಲೆ ಯಾವುದೇ ರೀತಿಯ ಬಲವಂತ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ ಎಂದರು.

ಯೋಜನೆ ಜಾರಿಗೊಳಿಸಲು ಕನಿಷ್ಠ 70 ಶೇಕಡಾ ಭೂಮಾಲೀಕರ ಒಪ್ಪಿಗೆ ಅಗತ್ಯವಿದ್ದು, ಆ ಷರತ್ತಿನ ಆಧಾರದ ಮೇಲೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ತೆಗೆದುಕೊಂಡಿರುವ ಈ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು ಎಂದು ಸಚಿವರು ಮನವಿ ಮಾಡಿದರು.

Exit mobile version