ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ದರ ಸೋಮವಾರದಿಂದ (ಫೆಬ್ರವರಿ 9) ಏರಿಕೆಯಾಗಬೇಕಿತ್ತು. ಆದರೆ ಈಗ ದರ ಹೆಚ್ಚಳದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಮಧ್ಯಪ್ರವೇಶದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.
ಕಳೆದ ವರ್ಷವಷ್ಟೇ ದರ ಏರಿಕೆ ಮಾಡಿ ಶಾಕ್ ನೀಡಿದ್ದ ಬಿಎಂಆರ್ಸಿಎಲ್ (BMRCL), ಇದೀಗ ಮತ್ತೆ ಟಿಕೆಟ್ ದರ ಹೆಚ್ಚಿಸಲು ಮುಂದಾಗಿತ್ತು. ಬೋರ್ಡ್ ಮೀಟಿಂಗ್ನಲ್ಲಿ ಈ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶದಲ್ಲೇ ಬೆಂಗಳೂರು ಮೆಟ್ರೋ ದರ ಅತ್ಯಂತ ದುಬಾರಿ ಎಂಬ ಕೂಗು ಕೇಳಿಬರುತ್ತಿರುವಾಗಲೇ ಮತ್ತೆ ದರ ಏರಿಸಲು ಸರ್ಕಾರ ಮುಂದಾಗಿತ್ತು.
Had a detailed phone conversation with Union MoHUA Minister Sri @mlkhattar Ji now, seeking his immediate intervention against the State Government’s unjust Bengaluru Metro fare hike proposed to start from Monday.
I pointed out that Bengaluru already has the costliest Metro fares… https://t.co/14m9WaEIHf pic.twitter.com/no5U8wrZow
— Tejasvi Surya (@Tejasvi_Surya) February 7, 2026
ಸೋಮವಾರದಿಂದ ಜಾರಿಗೆ ಬರಲಿದ್ದ ಈ ದರ ಏರಿಕೆಯನ್ನು ತಡೆಯಲು ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ (X) ಪೋಸ್ಟ್ ಮಾಡಿರುವ ಅವರು, ಸದ್ಯಕ್ಕೆ ಬೆಲೆ ಹೆಚ್ಚಳವನ್ನು ಕೇಂದ್ರ ಸಚಿವರು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ದರ ನಿಗದಿ ಸಮಿತಿ (FFC) ನಲ್ಲಿನ ವೈಪರೀತ್ಯಗಳ ಬಗ್ಗೆ ಮರುಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಎಷ್ಟು ಏರಿಕೆಯಾಗಲಿತ್ತು? (ಹೊಸ ದರ ಪಟ್ಟಿ ಹೀಗಿತ್ತು):
ಬಿಎಂಆರ್ಸಿಎಲ್ ರೂಪಿಸಿದ್ದ ಹೊಸ ದರ ಪಟ್ಟಿಯ ಪ್ರಕಾರ ಕಿಲೋಮೀಟರ್ ಆಧಾರಿತ ಹೆಚ್ಚಳ ಹೀಗಿದೆ:
-
0-2 ಕಿ.ಮೀ: ₹10 ರಿಂದ ₹11 ಕ್ಕೆ ಏರಿಕೆ.
-
4-6 ಕಿ.ಮೀ: ₹30 ರಿಂದ ₹32 ಕ್ಕೆ ಏರಿಕೆ.
-
10-15 ಕಿ.ಮೀ: ₹60 ರ ಆಸುಪಾಸಿನಿಂದ ₹63 ಕ್ಕೆ ಏರಿಕೆ.
-
25 ಕಿ.ಮೀ ಗಿಂತ ಹೆಚ್ಚು: ಗರಿಷ್ಠ ₹95 ರವರೆಗೆ ನಿಗದಿಪಡಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ #BoycottMetro ಅಭಿಯಾನ
ಸರ್ಕಾರದ ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಕಳೆದ ಎರಡು ದಿನಗಳಿಂದ ಟ್ವಿಟರ್ (X) ಮತ್ತು ಫೇಸ್ಬುಕ್ನಲ್ಲಿ #BoycottMetro ಹ್ಯಾಷ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ. ಸಬ್ಸಿಡಿ ನೀಡುವ ಬದಲು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ದೆಹಲಿ ಮೆಟ್ರೋಗೆ ಹೋಲಿಸಿದರೆ ಬೆಂಗಳೂರಿನ ದರಗಳು ಗಗನಕ್ಕೇರಿವೆ ಎಂಬುದು ಪ್ರಯಾಣಿಕರ ಪ್ರಮುಖ ಆರೋಪವಾಗಿದೆ.
ರಾಜ್ಯ ಸರ್ಕಾರ ನಾಗರಿಕರ ಹಿತಾಸಕ್ತಿ ಕಾಯುತ್ತದೆಯೇ ಅಥವಾ ಸುಳ್ಳಿನ ಹಿಂದೆ ಅಡಗಿಕೊಳ್ಳುತ್ತದೆಯೇ ? ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಹೊಸ ಎಫ್ಎಫ್ಸಿ (Fare Fixation Committee) ಸಮಿತಿಯನ್ನು ಪಡೆಯಲು ಪ್ರಕ್ರಿಯೆ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಸದ್ಯಕ್ಕೆ ದರ ಏರಿಕೆಗೆ ತತ್ಕಾಲಿಕ ಬ್ರೇಕ್ ಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ಹೊಸ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.




