ನಾಗರಹೊಳೆ ಸಫಾರಿ ಪುನರಾರಂಭ: ಮೊದಲ ದಿನವೇ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿ

Untitled design 2026 02 28T071916.230

ವನ್ಯಜೀವಿ ಪ್ರಿಯರ ನೆಚ್ಚಿನ ತಾಣ, ಏಷ್ಯಾದಲ್ಲೇ ಪ್ರಸಿದ್ಧವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಸಫಾರಿ ಪುನಾರಂಭಗೊಂಡಿದೆ. ಮಳೆಗಾಲ ಮತ್ತು ಸಂರಕ್ಷಣಾ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ಸಫಾರಿ ಆರಂಭವಾದ ಮೊದಲ ದಿನವೇ ಪ್ರವಾಸಿಗರಿಗೆ ಮರೆಯಲಾಗದ ಅನುಭವ ಸಿಕ್ಕಿದೆ. ದಮ್ಮನಕಟ್ಟೆ ವಲಯದಲ್ಲಿ ಪ್ರವಾಸಿಗರು ಸಫಾರಿ ನಡೆಸುತ್ತಿದ್ದಾಗ, ಹುಲಿಯೊಂದು ದರ್ಶನ ನೀಡುವ ಮೂಲಕ ಎಲ್ಲರನ್ನೂ ರೋಮಾಂಚನಗೊಳಿಸಿದೆ.

ಘಟನೆಯ ವಿವರ:

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ಸಫಾರಿ ವಾಹನದಲ್ಲಿ ಕಾಡಿನ ಸೌಂದರ್ಯವನ್ನು ಸವಿಯುತ್ತಾ ಸಾಗುತ್ತಿದ್ದಾಗ, ಹಳೆಯ ಎಂ.ಎಂ. ರಸ್ತೆಯ ಕರಿಯಣ್ಣನ ಮನೆ ಎಂಬ ಪ್ರದೇಶದ ಬಳಿ ಹೆಣ್ಣು ಹುಲಿಯೊಂದು ಪ್ರತ್ಯಕ್ಷವಾಗಿದೆ. ಬೇಟೆಯ ಹುಡುಕಾಟದಲ್ಲಿದ್ದ ಈ ಹುಲಿ, ಸಫಾರಿ ವಾಹನವನ್ನು ಕಂಡು ಕಿಂಚಿತ್ತೂ ಎದರದೆ ರಸ್ತೆಯ ಮಧ್ಯೆಯೇ ರಾಜಾರೋಷವಾಗಿ ಹೆಜ್ಜೆ ಹಾಕಿದೆ.

ಕ್ಯಾಮರಾಗೆ ಫೋಸ್ ನೀಡಿದ ಬೆಡಗಿ:

ಸಾಮಾನ್ಯವಾಗಿ ಹುಲಿಗಳು ವಾಹನಗಳ ಶಬ್ದ ಕೇಳಿದರೆ ಪೊದೆಗಳ ಮರೆಗೆ ಸರಿಯುತ್ತವೆ. ಆದರೆ, ಈ ಹೆಣ್ಣು ಹುಲಿ ಮಾತ್ರ ಸಫಾರಿ ವಾಹನದ ಮುಂದೆ ಯಾವುದೇ ಅಂಜಿಕೆ ಇಲ್ಲದೆ ಕೆಲ ಕಾಲ ನಿಂತು, ಪ್ರವಾಸಿಗರ ಕ್ಯಾಮರಾಗಳಿಗೆ ಪೋಸ್ ನೀಡಿದಂತೆ ಕಂಡುಬಂದಿದೆ. ವಾಹನದಲ್ಲಿದ್ದ ಪ್ರವಾಸಿಗರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.

ಖುಷಿಯಲ್ಲಿ ಪ್ರವಾಸಿಗರು:

ಆರು ತಿಂಗಳ ಬಳಿಕ ಕಾಡಿನೊಳಗೆ ಹೋದ ಪ್ರವಾಸಿಗರಿಗೆ ಮೊದಲ ದಿನವೇ ಹುಲಿ ದರ್ಶನವಾಗಿದ್ದು ‘ಬೋನಸ್’ ಸಿಕ್ಕಂತಾಗಿದೆ. ನಾವು ಹುಲಿ ನೋಡುತ್ತೇವೆ ಎಂಬ ನಿರೀಕ್ಷೆ ಇರಲಿಲ್ಲ, ಆದರೆ ಮೊದಲ ದಿನವೇ ಇಷ್ಟು ಹತ್ತಿರದಿಂದ ಹುಲಿ ಕಂಡಿದ್ದು ನಮ್ಮ ಅದೃಷ್ಟ ಎಂದು ಪ್ರವಾಸಿಗರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ಹುಲಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭವಾಗಿರುವುದು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ. ಪ್ರಾಣಿಗಳ ಸಂರಕ್ಷಣೆ ಮತ್ತು ಅರಣ್ಯ ನಿಯಮಗಳನ್ನು ಪಾಲಿಸುತ್ತಾ ಪ್ರವಾಸಿಗರು ಈ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ. ಕಾಡಿನ ರಾಜನ ದರ್ಶನ ಪಡೆಯಲು ಈಗ ಪ್ರವಾಸಿಗರ ದಂಡೇ ನಾಗರಹೊಳೆಯತ್ತ ಮುಖ ಮಾಡಿದೆ.

Exit mobile version