ಮೈಸೂರಿನಲ್ಲಿ ಮನಕಲಕುವ ಘಟನೆ: ದಾಸವಾಳ ಹೂವು ನುಂಗಿ ಮಗು ಸಾ*ವು

Untitled design 2026 03 30T141601.041

ಮೈಸೂರು, ಮಾರ್ಚ್ 30: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು ಒಣಗಿದ ದಾಸವಾಳದ ಹೂವಿನ ತುಂಡನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಘಟನೆಯಿಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಯಾರೀ ಚಿನ್ಮಯಿಗೌಡ?

ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ (6.5 ತಿಂಗಳು) ಈ ದುರಂತಕ್ಕೀಡಾದ ಮಗು. ಸುದರ್ಶನ್-ನವ್ಯ ದಂಪತಿಗೆ ಇಬ್ಬರು ಪುತ್ರರಿದ್ದು, ಚಿನ್ಮಯಿಗೌಡ ಎರಡನೆಯವನಾಗಿದ್ದನು.

ಘಟನೆ ಹೇಗೆ ನಡೆಯಿತು?

ಶನಿವಾರದಂದು ಚಿನ್ಮಯಿಗೌಡ ತನ್ನ ಅಣ್ಣನೊಂದಿಗೆ ಮನೆಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ಮನೆಯ ಹೊಸಲಿನಲ್ಲಿ ಪೂಜೆ ಮಾಡಿ ಇಟ್ಟಿದ್ದ ದಾಸವಾಳದ ಹೂವು ಒಣಗಿ ಬಿದ್ದಿತ್ತು. ಆಟವಾಡುವ ವೇಳೆ ಮಗು ಆ ಒಣಗಿದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿತು. ತನ್ನ ಕೈಯಲ್ಲಿದ್ದ ಹೂವಿನ ತುಂಡನ್ನು ಅಣ್ಣ ಕಿತ್ತುಕೊಳ್ಳಬಹುದೆಂಬ ಭಯದಲ್ಲಿ ಮಗು ಅದನ್ನು ನುಂಗಲು ಯತ್ನಿಸಿತು. ಈ ಸಂದರ್ಭದಲ್ಲಿ ಹೂವಿನ ತುಂಡು ಗಂಟಲಿನಲ್ಲಿ ಸಿಲುಕಿಕೊಂಡು ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು.

ಆಸ್ಪತ್ರೆಗೆ ಕರೆದೊಯ್ದು ಕುಟುಂಬಸ್ಥರು

ಮಗುವಿಗೆ ಉಸಿರಾಟದ ತೊಂದರೆಯಾಗುತ್ತಿದ್ದಂತೆ ಮನೆಯವರು ತಕ್ಷಣ ಅದನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಆರಂಭದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆಗೆ ಕಾರಣವೇನು ಎಂಬುದು ಗೊತ್ತಾಗಿರಲಿಲ್ಲ. ಆಸ್ಪತ್ರೆಗೆ ತೆಗೆದುಕೊಂಡು ಹೋದ ಬಳಿಕವೇ ಮಗು ಹೂವು ನುಂಗಿದ್ದು ತಿಳಿದುಬಂದಿತು.

ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಮಗುವಿನ ಜೀವ ಉಳಿಸಲು ಹರಸಾಹಸ ಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯ ಬೆಡ್ ಮೇಲೆಯೇ ಕೊನೆಯುಸಿರೆಳೆದಿತ್ತು. ಉಸಿರನ್ನು ಎಳೆದುಕೊಳ್ಳುತ್ತಲೇ ಮಗು ಪ್ರಾಣ ಬಿಟ್ಟ ದೃಶ್ಯ ಕರುಳು ಹಿಂಡುವಂತಿತ್ತು.

ಪೋಷಕರ ಆಕ್ರಂದನ – ಗ್ರಾಮದಲ್ಲಿ ಶೋಕ

ತಮ್ಮ ಮಗುವನ್ನು ಕಳೆದುಕೊಂಡ ಸುದರ್ಶನ್ ಮತ್ತು ನವ್ಯ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತು. ಇಬ್ಬರು ಗಂಡು ಮಕ್ಕಳಲ್ಲಿ ಎರಡನೆಯವನಾದ ಚಿನ್ಮಯಿಗೌಡನ ಅಗಲಿಕೆಯನ್ನು ಸಹಿಸಲಾಗದೆ ಹೆತ್ತವರು ಗೋಳಾಡಿದರು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version