ದಾವಣಗೆರೆಯಲ್ಲಿ ಕೇಳಿ ಬಂತು ನಿಗೂಢ ಶಬ್ದ: ಬೆಚ್ಚಿಬಿದ್ದ ಜನರು

Untitled design 2025 12 13T225455.218

ದಾವಣಗೆರೆ: ಭಯಂಕರ ಶಬ್ದ ಹಾಗೂ ಕೆಲ ಕ್ಷಣಗಳ ಕಾಲ ಭೂಮಿ ಕಂಪಿಸಿದ ಅನುಭವ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಸುತ್ತಮುತ್ತಲಿನ ಹಲವು ಜಿಲ್ಲೆಗಳ ಗ್ರಾಮಗಳಲ್ಲಿಯೂ ಅನುಭವವಾಗಿರುವುದು ಗ್ರಾಮಸ್ಥರಲ್ಲಿ ಭಯದ ಭೀತಿ ಹೆಚ್ಚಿಸಿದೆ.

ಏಕಾಏಕಿ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ತಕ್ಷಣವೇ ಭೂಮಿ ಕೆಲ ಸೆಕೆಂಡುಗಳ ಕಾಲ ನಡುಗಿದ ಅನುಭವವಾಗಿದೆ. ಮನೆಯೊಳಗಿದ್ದ ಕೆಲ ಪಾತ್ರೆಗಳು ನೆಲಕ್ಕೆ ಬಿದ್ದಿದ್ದು, ಕೆಲವರು ಗೋಡೆಗಳು ಕಂಪಿಸಿದಂತೆ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳು ಹಾಗೂ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೂಡ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಿದ್ದಾರೆ.

ಈ ನಿಗೂಢ ಘಟನೆ ಜಗಳೂರು ತಾಲೂಕಿನ ಚಿಕ್ಕಮಲ್ಲಹಳ್ಳಿ ಮಾತ್ರವಲ್ಲದೆ, ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಬಾಲರಾಮಪುರ, ದಿಬ್ಬದಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಅನುಭವವಾಗಿದೆ. ಅಲ್ಲದೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೊಲೋಮನಹಳ್ಳಿ, ಮಲ್ಲೋರಹಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಹಳ್ಳಿ, ಕೆಂಚಮನಹಳ್ಳಿ, ಆಲೂರು ಗ್ರಾಮಗಳಲ್ಲಿಯೂ ಭಾರಿ ಶಬ್ದ ಹಾಗೂ ಕಂಪನದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಏಕಾಏಕಿ ಸಂಭವಿಸಿದ ಈ ಘಟನೆಗೆ ಭಯಗೊಂಡ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಘಟನೆ ಬಗ್ಗೆ ಗ್ರಾಮಸ್ಥರು ತಕ್ಷಣ ಜಗಳೂರು ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಗ್ರಾಮಗಳಿಗೆ ದೌಡಾಯಿಸಿದ್ದಾರೆ. ಜಗಳೂರು ಸಿಪಿಐ ಸಿದ್ದರಾಮಪ್ಪ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ಪ್ರಾಥಮಿಕವಾಗಿ ಯಾವುದೇ ಜೀವಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿನಷ್ಟದ ವರದಿ ಇಲ್ಲ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ಭೂಕಂಪನದ ಅನುಭವ: ಜನರಲ್ಲಿ ಹೆಚ್ಚಿದ ಆತಂಕ

ಕೊಡಗು : ಕರ್ನಾಟಕದ ಪ್ರವಾಸಿಗರ ಸ್ವರ್ಗ ಹಾಗೂ ಕನ್ನಡ ನಾಡಿನ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಈ ಪ್ರದೇಶದ ಹಲವೆಡೆ ಭೂಮಿ ನಡುಗಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.

ಮಡಿಕೇರಿ ತಾಲ್ಲೂಕಿನ ಮದೆನಾಡು, ಜೋಡುಪಾಲ ಹಾಗೂ ಮೊಣ್ಣಂಗೇರಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಮನೆಯಲ್ಲಿದ್ದ ಸಾಮಾನುಗಳು ಅಲ್ಲಾಡಿದರೆ, ಗ್ರಂಥಾಲಯದಲ್ಲಿದ್ದ ಪುಸ್ತಕಗಳು ನಡುಗಿದವು. ಭೂಮಿ ದೊಡ್ಡದಾಗಿ ಗುಡುಗಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಈಗಾಗಲೇ 2018ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದರಿಂದ, ಮತ್ತೆ ಅದೇ ರೀತಿಯ ಅನಾಹುತವಾಗುವ ಭಯ ಜನರಲ್ಲಿದೆ.

ಭೂಕಂಪನದ ತೀವ್ರತೆ ಹಾಗೂ ಜನರ ಅನುಭವ

ಮದೆನಾಡು ಪಂಚಾಯಿತಿ ಸಿಬ್ಬಂದಿ ಶಿಲ್ಪ ಮತ್ತು ವೆಂಕಮ್ಮ ಮಾತನಾಡಿ, “ಇಂದು ಬೆಳಿಗ್ಗೆ 10.50ರ ಸಮಯದಲ್ಲಿ ಭೂಕಂಪನದ ಅನುಭವವಾಯಿತು. ಗ್ರಂಥಾಲಯದಲ್ಲಿ ಕುಳಿತು ಬರೆಯುತ್ತಿದ್ದಾಗ ಭೂಮಿ ನಡುಗಿದ ಅನುಭವವಾಗಿದ್ದು, ಪುಸ್ತಕಗಳ ರ್ಯಾಕ್‌ಗಳು ಅಲ್ಲಾಡಿದವು. ಈ ಅನುಭವದ ನಂತರ ವಿಷಯವನ್ನು ಜಿಲ್ಲಾಡಳಿತಕ್ಕೆ ತಕ್ಷಣ ತಿಳಿಸಿದೆವು” ಎಂದು ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ದೇವಸ್ತೂರು ಗ್ರಾಮದಲ್ಲೂ ಈ ಘಟನೆ ನಡೆದಿದೆ. ಮನೆಗಳಲ್ಲಿನ ವಸ್ತುಗಳು ಅಲ್ಲಾಡಿದ ಅನುಭವ ಜನರಿಗೆ ಉಂಟಾಗಿದೆ. 2018ರಲ್ಲೂ ಇದೇ ರೀತಿಯ ಭೂಕಂಪನದ ಅನುಭವವಾಗಿದ್ದು, ನಂತರ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು ಎಂದು ಗ್ರಾಮಸ್ಥರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಜಿಲ್ಲಾಡಳಿತದ ಪ್ರತಿಕ್ರಿಯೆ

ಜಿಲ್ಲೆಯಲ್ಲಿ ಯಾವುದೇ ದೊಡ್ಡ ಅನಾಹುತವಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. “ಈ ಘಟನೆಯಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಗೋಡೆಗಳಲ್ಲಿ ಬಿರುಕು ಬೀಳುವುದು ಅಥವಾ ಸಾಮಾನುಗಳು ನೆಲಕ್ಕುರುಳುವುದು ಕಂಡುಬಂದಿಲ್ಲ. ಆದರೆ, ಈ ಘಟನೆಗೆ ಕಾರಣವೇನು ಎಂಬುದನ್ನು ಅರಿಯಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರಲ್ಲಿ ಆತಂಕ

2018ರ ಭೂಕುಸಿತದಿಂದಾಗಿ ಈಗಲೂ ಜನರು ಭಯದಿಂದಲೇ ಜೀವನ ನಡೆಸುತ್ತಿದ್ದಾರೆ. “ನಮ್ಮ ಗ್ರಾಮ ಈಗಲೂ ಭೂಕುಸಿತದ ಅಪಾಯದಲ್ಲಿದೆ. ಪ್ರತೀ ಬಾರಿ ಭೂಮಿ ನಡುಗಿದಾಗ, ಮತ್ತೊಮ್ಮೆ ಭಾರೀ ಮಳೆಯಿಂದ ಗುಡ್ಡ ಕುಸಿಯುತ್ತದೆಯೇ ಎಂಬ ಭೀತಿ ಮೂಡುತ್ತದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈಗಾಗಲೇ ಮಡಿಕೇರಿಯಲ್ಲಿ ಭೂಮಿ ನಡುಗಿದನ್ನು ಗಮನಿಸಿ, ಜಿಲ್ಲಾಡಳಿತ ಮತ್ತು ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ನಡೆಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಕಂಪನದ ತೀವ್ರತೆ ಹೆಚ್ಚಾಗುತ್ತದೆಯೇ ಅಥವಾ ಇಂತಹ ಘಟನೆಗಳ ಸಂಭವನೀಯತೆ ಏನದು ಎಂಬುದರ ಮೇಲೆ ಹೆಚ್ಚಿನ ಅಧ್ಯಯನ ನಡೆಯಲಿದೆ.

 
Exit mobile version